Thursday, January 31, 2008

Sanchara:: Hampi - Hospet ~ part 3

ಹಂಪಿ - ಹೊಸಪೇಟೆ



ಮಹಾನವಮಿ ದಿಬ್ಬದಿಂದ ಹೊರಬಂದು, ದಾರಿಯಲ್ಲಿ ಹಜಾರ ರಾಮ ದೇವಸ್ಥಾನ, ಮತ್ತಷ್ಟು ದೇವಾಲಯಗಳು, ಅರಮನೆಗಳ ಅವಶೇಷಗಳನ್ನು ನೋಡಿಕೊಂಡು, ಕ್ಯಾಮರಾ ಕಣ್ಣಲ್ಲೂ ತುಂಬಿಕೊಂಡು ಕೊನೆಗೆ ಬಂದದ್ದು ಕಲ್ಲಿನ ರಥದಿಂದ ಪ್ರಸಿದ್ಧಿಗೆ ಬಂದ "ವಿಠ್ಠಲ ದೇವಸ್ಥಾನ"ಕ್ಕೆ. ಬಹುಶಃ ಶಿಲ್ಪಕಲೆಯ ಉಚ್ಛ್ರಾಯ ಕಾಲದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು. ಹಂಪಿಯ ಎಲ್ಲಾ ಕಲಾಕೃತಿಗಳನ್ನು ಮೀರಿ ವಿಠ್ಠಲ ದೇವಸ್ಥಾನದ ಕೆತ್ತನೆಗಳು ನಿಲ್ಲುತ್ತವೆ. ಕಲಾಕಾರರ imaginationಗೆ ನಮೋ ಎನ್ನಲೇಬೇಕು. ಮಹಾವಿಷ್ಣುವನ್ನು ಪೂಜಿಸಲಾಗುತ್ತಿದ್ದ ಈ ದೇವಸ್ಥಾನದ ಪರಿಸರವು ದೊಡ್ಡ ಗೋಡೆಗಳಿಂದ ಸುತ್ತುವರಿದಿದೆ. ಹಲವಾರು ಮಂಟಪಗಳ, ದೇಗುಲಗಳ ಸಮೂಹವೇ ಈ ವಿಠ್ಠಲ ದೇವಸ್ಥಾನ. ವೀಕ್ಷಕರು ಒಳಪ್ರವೇಶಿಸಲು ಟಿಕೆಟ್ ಕರೀದಿಸಬೇಕು. ಛಿದ್ರಗೊಂಡಿರುವ ಹೆಬ್ಬಾಗಿಲ ಗೋಪುರ ನಮ್ಮನ್ನು ಸ್ವಾಗತಿಸುತ್ತದೆ. ಒಳಬಂದರೆ ಎದುರಿಗೆ ಸಿಗುವುದೇ ಪ್ರಸಿದ್ಧ "ಕಲ್ಲಿನ ರಥ". ನೈಜ ರಥಕ್ಕಿಂತಲೂ ಸುಂದರವಾಗಿದೆ ಈ ಕಲ್ಲಿನ ರಥ. ನಾಲ್ಕು ಕಡೆಗಳಲ್ಲೂ ಬಗೆಬಗೆಯ ಸೂಕ್ಷ್ಮ ಕೆತ್ತನೆಗಳಿಂದ ರಥ ಸಿಂಗಾರಗೊಂಡಿದೆ. ನಾಲ್ಕು ದೊಡ್ಡ ಕಲ್ಲಿನ ಚಕ್ರಗಳೂ ರಥಕ್ಕಿದೆ. ಅದೆಷ್ಟೋ ವರ್ಷಗಳಿಂದ ಬಿಸಿಲು-ಮಳೆಗೆ ತನ್ನ ಮೈಯೊಡ್ಡಿದ್ದರೂ ರಥದ ಸುಕ್ಷ್ಮಾತಿಸೂಕ್ಷ್ಮ ಕುಸುರಿ ಕೆಲಸಗಳು ಇನ್ನೂ ಸ್ಪಷ್ಟವಾಗಿವೆ.



ಇದರ ಎದುರಿಗೇ ಇರುವುದು ಮಹಾಮಂಟಪ. ಇಲ್ಲಿನ ಗೋಡೆ, ಕಂಬಗಳ ಮೇಲೆ ಪುರಾಣಕಥೆಗಳ ಚಿತ್ರಣವನ್ನು ಸುಂದರವಾಗಿ ಮೂಡಿಸಲಾಗಿದೆ. ಮಂಟಪದ ಸುತ್ತಲೂ ಇರುವ ಆಧಾರಸ್ತಂಭಗಳಲ್ಲಿ ಸಪ್ತಸ್ವರ ಹೊಮ್ಮಿಸುವ ಕಂಬಗಳನ್ನು ಕಾಣಬಹುದು. ಮಹಾಮಂಟಪದ ಪಕ್ಕದಲ್ಲೇ ಇರುವ ಮಂಟಪದಲ್ಲಿ ಸಂಗೀತ, ನಾಟ್ಯಕ್ಕೆ ಸಂಬಂಧಿಸಿದ ಕೆತ್ತನೆಗಳು ತುಂಬಿಕೊಂಡಿವೆ. ಹಿಂಬದಿಯ ಮಂಟಪದಲ್ಲಿ ಮಹಾವಿಷ್ಣುವು ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವನ್ನು ವಧಿಸುತ್ತಿರುವ, ಪಕ್ಕದಲ್ಲೇ ಪ್ರಹ್ಲಾದ ವಿಷ್ಣುವಿಗೆ ನಮಿಸುತ್ತಿರುವ ಕೆತ್ತನೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಮೇಲ್ಛಾವಣಿಯೂ ಅರಳಿದ ಕಮಲದ ಹೂವಿನ ಕಲ್ಪನೆ ಹುಟ್ಟಿಸುವಂತೆ ಸಿಂಗಾರಗೊಂಡಿದೆ. ಇಲ್ಲಿನ ಮತ್ತೊಂದು ವಿಶೇಷ 100ಕ್ಕೂ ಮಿಕ್ಕಿ ಕಂಬಗಳಿಂದ ರಚಿಸಲ್ಪಟ್ಟಿರುವ ಕಲ್ಯಾಣ ಮಂಟಪ. ಹೀಗೆ ಹಲವು ವೈಶಿಷ್ಟ್ಯಗಳ ಆಗರ ಈ ವಿಠ್ಠಲ ದೇವಸ್ಥಾನ. ಹಲವೆಡೆ ಭಗ್ನಗೊಂಡಿರುವ ದೇವಳ ಪರಿಸರದಲ್ಲಿ ಈಗ ಪೂಜಾವಿಧಿಗಳು ನಡೆಯುತ್ತಿಲ್ಲ...!



ಸಮಯ ಅದಾಗಲೇ ಅಪರಾಹ್ನ ಕಳೆದಿತ್ತು. ನಮ್ಮ ಗೈಡ್ ಹಂಪಿಯ ಮುಖ್ಯ ಸ್ಥಳಗಳನ್ನು ನಮಗೆ ತೋರಿಸಿ, ಅವುಗಳ ಬಗ್ಗೆ ಸಾಕಷ್ಟು ವಿವರಣೆ ನೀಡಿ, ನಮಗೆ bye ಹೇಳಿದ್ದ. ನಮ್ಮೆಲ್ಲರ ಹೊಟ್ಟೆ ಹಸಿಯುತ್ತಿತ್ತು, ಆದರೆ ಕ್ಯಾಮರಾ ಫೋಟೊಗಳಿಂದ ತುಂಬಿತುಳುಕುತ್ತಾ ತನ್ನ ಹಸಿವನ್ನು ನೀಗಿಸಿಕೊಂಡಿತ್ತು! ಹಂಪಿಯ ಊಟದ ಹೋಟೆಲುಗಳು ಸರಿಕಾಣದ್ದರಿಂದ ಪುನಃ ಹೊಸಪೇಟೆಗೆ ಬಂದು, ಊಟ ಮುಗಿಸಿ, ಮುಂದಿನ ಹಂತವಾಗಿ ಹಂಪಿ ಕನ್ನಡ ಯೂನಿವರ್ಸಿಟಿಯತ್ತ ನಮ್ಮ ಪ್ರಯಾಣ ಬೆಳೆಸಿದೆವು. ನಮ್ಮ ಹೆಗ್ಗೋಡು ಭಾವ (ಶ್ರೀ ವೆಂಕಟರಮಣ ಐತಾಳರು) ನಮಗೆ ಹಂಪಿಯ ಬಗ್ಗೆ ಹಲವಾರು ಮಾಹಿತಿಯೊದಗಿಸಿದರು, ಯೂನಿವರ್ಸಿಟಿಗೂ ಕರೆದೊಯ್ದರು.


ಹಂಪಿ ಕನ್ನಡ ವಿಶ್ವವಿದ್ಯಾಲಯ ಕಮಲಾಪುರ ಸಮೀಪ ಪ್ರಶಾಂತ ಪರಿಸರದಲ್ಲಿದೆ. ಶ್ರೀ ಚಂದ್ರಶೇಖರ ಕಂಬಾರರು ಇಲ್ಲಿಯ ನೇತೃತ್ವ ವಹಿಸಿದ್ದಾಗ ಸಾಕಷ್ಟು ಅಭಿವೃದ್ಧಿ ಹೊಂದಿತು. ಕನ್ನಡಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳು, ಹೊತ್ತಗೆಗಳು, ಜಾನಪದ ಸೊಗಡನ್ನು ಸಾರುವ ಕಲಾಕೃತಿಗಳು, ಕರಕುಶಲ ವಸ್ತುಗಳ ಸಂಗ್ರಹಾಲಯವೇ ಇಲ್ಲಿದೆ.


ಕೆರೆದಂಡೆಯಲ್ಲಿರುವ "ಅಂಫಿ ಥಿಯೇಟರ್" ಪರಿಸರ ತುಂಬಾ ಖುಶಿಕೊಡುತ್ತದೆ. ಸಂಜೆಯ ಹೊತ್ತನ್ನು ಶಾಂತವಾಗಿ ಕಳೆಯಲು ಹೇಳಿಮಾಡಿಸಿದ ಜಾಗ. ಆದರೆ ಈಗ ಯಾಕೋ ಅಬಿವೃದ್ಧಿ ಕಾಣದೆ ಮೂಲೆಗುಂಪಾದಂತೆ ಕಂಡಿತು! ವಿರಾಮದ ಬಳಿಕ, ಕ್ಯಾಂಪಸ್ ಗೆ ಒಂದು ಸುತ್ತು ಹೊಡೆದು ಪುನ: ನಾವು ಹೊರಟದ್ದು ಹಂಪೆಗೆ.

ಹೆಚ್ಚಿನವರು ಹಂಪಿ ಬಝಾರಿಗೆ ಶಾಪಿಂಗ್ ಹೊರಟರು. ನಾವೊಂದು 4-5 ಹುಡುಗರು ಹೇಮಕುಟ ಗುಡ್ಡ ಹತ್ತಿ ನಿರ್ಜನವಾದ ವಿಜಯನಗರದ ಹೆಬ್ಬಾಗಿಲಲ್ಲಿ ಸೂರ್ಯಾಸ್ತ ವೀಕ್ಷಿಸಲು ಕುಳಿತೆವು. ಆದರೆ ಬೆಳಿಗ್ಗೆಯಿಂದ ಬಿಸಿಲ ಧಗೆಯಿಂದ ನಮ್ಮನ್ನು ರಕ್ಷಿಸಿದ್ದ ಮೋಡಗಳು ಸೂರ್ಯಾಸ್ತಕ್ಕೆ ಅಡ್ಡಿಯಾದವು!! ಎತ್ತರದ ನಿರ್ಜನ ಜಾಗ, ಬೀಸುತ್ತಿದ್ದ ಗಾಳಿ, ತಂಪಾದ-ನಿಶ್ಶಬ್ಧ ವಾತಾವರಣ, ಆಕಾಶದಲ್ಲಿ ಮೋಡಗಳಿಂದಾದ ಚಿತ್ತಾರ... ಆ ಕ್ಷಣ ತುಂಬಾ ತುಂಬಾ ಹಿತವೆನಿಸಿತು, ಮನದ ಕ್ಲೇಷ-ದುಗುಡಗಳೆಲ್ಲ ಹೊರಬಂದು, ಮನಸ್ಸು ಹಗುರಾಗಿ, ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗಳೊಂದಿಗೆ ನಾನೂ ಹಾರಬೇಕೆನಿಸಿತು! ವಾಸ್ತವಕ್ಕೆ ಬಂದು, ಹಂಪಿಯ ಬಗ್ಗೆ ನನಗೆ ನಾನೇ ಕೇಳಿಕೊಂಡಾಗ "ಕಾಡಲ್ಲಿ ಹುಟ್ಟಿದ ಒಂದು ಸಣ್ಣ ತೃಣವು ಬೆಳೆಯುತ್ತಾ ಬೆಳೆಯುತ್ತಾ ಗಿಡವಾಗಿ, ಮರವಾಗಿ ತನ್ನನ್ನು ತಾನೇ ಪೋಷಿಸಿಕೊಂಡು, ತನ್ನ ರೆಂಬೆ-ಕೊಂಬೆಗಳನ್ನು ಎಲ್ಲೆಡೆ ಚಾಚಿಕೊಂಡು ಬೃಹತ್ ವೃಕ್ಷವಾಗಿ ಹಲವಾರು ವರ್ಷ ತಲೆಯೆತ್ತಿ ನಿಂತು, ಬಳಿಕ ಕಾಲನ ಸೆರೆಗೆ ಸಿಕ್ಕು ತನ್ನೆಲ್ಲಾ ಅವಯವಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಾ ಕೊನೆಗೆ ಬರಿಯ ಅವಶೇಷವಾಗಿ ನಿಂತ ಒಣಮರದಂತೆ" ಕಂಡಿತು!

ಅದಾಗಲೇ ಶನಿವಾರದ ಸೂರ್ಯ ನಮಗೆ ಮೋಡದ ಮರೆಯಲ್ಲೇ ಗುಡ್ ಬೈ ಹೇಳಿದ್ದ. ಶಾಪಿಂಗ್ ಇತ್ಯಾದಿ ಮುಗಿಸಿ, ಹೊಸಪೇಟೆಗೆ ಬಂದು, ಗಿರೀಶ್ ರವರ ಮನೆಗೆ ಭೇಟಿ ಕೊಟ್ಟು, ಆತಿಥ್ಯ ಸ್ವೀಕರಿಸಿ ಪುನ: ನಮ್ಮ ಗೂಡು T.B. Dam ಸೇರಿದಾಗ ಗಂಟೆ 8.30 ತೋರಿಸುತ್ತಿತ್ತು. ಬಯಲುಸೀಮೆಯಿಂದ ಸೀದಾ ಕಡಲತಡಿಗೆ!... ಅಲೆಗಳ ಭೋರ್ಗರೆತ ಕಿವಿಗಪ್ಪಳಿಸುತ್ತಿತ್ತು. ಗಾಳಿಯೂ ತಾನೇನು ಕಮ್ಮಿಯಿಲ್ಲ ಎಂದು ತೆರೆಗಳೊಂದಿಗೆ ಪೈಪೋಟಿಗಿಳಿದಿತ್ತು. ಊಟ ಮುಗಿಸಿ Dam ದಂಡೆಯಲ್ಲಿ ಎಲ್ಲರ ಜೊತೆ ಒಂದು walk ಹೋದಾಗ ಏನೋ ಒಂದು ವರ್ಣನಾತೀತ ಆನಂದ, ಸಾರ್ಥಕ ದಿನವೆನಿಸಿತು! ಹಾಸಿಗೆಗೊರಗಿ ಕಣ್ಮುಚ್ಚಿದಾಗ ಅದೇ ಹಂಪಿಯ ಕಲ್ಲುಗಳು ಮನಃತುಂಬಾ, ಕಲ್ಲುಗಳು ನಿಜಕ್ಕೂ ಕಥೆ ಹೇಳುತ್ತವೆ ಎನಿಸಿತು!


ಮರುದಿನ, ಸೆ. 2 ಆದಿತ್ಯವಾರ... ಮತ್ತಷ್ಟು ವಿಶೇಷಗಳು ನಮಗೆ ಕಾದಿತ್ತು. ಹಂಪಿಯ ಮುಖ್ಯ ಸ್ಥಳಗಳನ್ನು ಅದಾಗಲೇ ಕಂಡಿದ್ದರಿಂದ, ಬೇರೇನೂ ಯೋಜನೆ ಹಾಕಿಕೊಳ್ಳದೇ ವಾಪಸ್ ಹೊರಡುವ ಯೋಜನೆ ಹಾಕುತ್ತಿತ್ತು. ಆದರೆ "T.B. Dam ಪರಿಸರವನ್ನೂ ನೋಡಿ ಬನ್ನಿ, ಖಂಡಿತಾ ನಿಮಗಿಷ್ಟವಾಗುತ್ತದೆ" ಎಂದ ಗಿರೀಶ್ ತಮ್ಮ ಸಹಾಯಕರೊಬ್ಬರನ್ನು ನಮ್ಮ ಜೊತೆ ಕಳುಹಿಸಿದರು. ಎಲ್ಲರೂ ಲಗುಬಗೆಯಿಂದ ಸಿದ್ಧಗೊಂಡು Dam ಗೊಂದು ಸುತ್ತು ಹೊಡೆಯಲು ಟ್ರಾವಲರ್ ಏರಿದೆವು. ಸಮೀಪದಲ್ಲೇ ಇರುವ ಡ್ಯಾಂ ನ ಮುಖ್ಯದ್ವಾರ ಪ್ರವೇಶಿಸಿದಾಗ ವರ್ಣಿಸಲಾಗದ ಆನಂದ. ತುಂಬಿತುಳುಕುತ್ತಿರುವ ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್ ಗಳಿಂದಲೂ ನೀರು ಹೊರಹೋಗುತ್ತಿತ್ತು. ಅದರಲ್ಲೂ 3 ಗೇಟ್ ಗಳನ್ನು ಸಂಪೂರ್ಣ ತೆರೆದಿದ್ದರಿಂದ ನೀರು ಭೋರ್ಗರೆಯುತ್ತಾ ಹೊರಹೋಗುತ್ತಿತ್ತು. ಗೇಟ್ ನ ತಲೆಯ ಮೇಲೆ ನಿಂತು ರಭಸದಲ್ಲಿ ಹೊರಹೋಗುತ್ತಿರುವ ನೀರನ್ನು ನೋಡಿದಾಗ ಒಂದು ಕ್ಷಣ ತಲೆಸುತ್ತು ಬಂದು, ಎಲ್ಲಿ ನಾವೂ ನೀರಲ್ಲಿ ಸೇರಿಬಿಡುತ್ತೇವೋ ಎಂಬ ಭಯ!

ಭದ್ರತೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಡ್ಯಾಂ ನ ಮುಖ್ಯದ್ವಾರ ಪ್ರವೇಶಿಸಲು ಅನುಮತಿ ಇಲ್ಲ. ನಮಗೆ ಮೊದಲೇ ಅನುಮತಿ ದೊರೆತಿದ್ದರಿಂದ, T.B. Dam ಪ್ರವೇಶಿಸುವ, ಸೇತುವೆಯ ಮೇಲೆ ನಡೆದಾಡುವ, ನೀರು ಹೊರಹೊಗುತ್ತಿರುವುದನ್ನು ಸಮೀಪದಿಂದ ನೋಡುವ ಅವಕಾಶ ಸಿಕ್ಕಿತು. ಸ್ವಲ್ಪ ಸಮಯ ಅಲ್ಲೇ ಕಳೆದು, ಅಲ್ಲಿಂದ ಮುಂದುವರಿದು Dam ನ ಇನ್ನೊಂದು ತುದಿ ತಲುಪಿದೆವು. ನಾವಿದ್ದ ಗೆಸ್ಟ್ ಹೌಸ್ ಒಂದು ತುದಿಯಲ್ಲಿದ್ದರೆ, Dam ನ ನಿರ್ವಹಣಾ ಕಛೇರಿ, ಪಾರ್ಕ್, ವೀಕ್ಷಣಾ ಕೊಠಡಿ, ವೈಕುಂಠ ಬಂಗಲೆ ಇನ್ನೊಂದು ತುದಿಯಲ್ಲಿದೆ. ತುಂಗಭದ್ರಾ ನದಿಗೆ ಅಡ್ಡವಾಗಿ ಕಟ್ಟಿರುವ T.B. Dam, ಕರ್ನಾಟಕದ ದೊಡ್ಡ ಅಣೆಕಟ್ಟುಗಳಲ್ಲಿ ಪ್ರಮುಖವಾದದ್ದು. ವಿದ್ಯುಚ್ಛಕ್ತಿ ಮತ್ತು ನೀರಾವರಿಗಾಗಿ ಕಟ್ಟಿದ ಈ ಅಣೆಕಟ್ಟು ಸುಮಾರು 49 ಮೀ ಎತ್ತರ, 590 ಮೀ ಉದ್ದವಾಗಿದೆ, 33 ಗೇಟ್ ಗಳನ್ನು ಹೊಂದಿದೆ. ಕ್ಯಾಚ್ ಮೆಂಟ್ ಏರಿಯಾ 400 ಚ.ಕಿ.ಮೀ ವರೆಗೆ ಹರಡಿಕೊಂಡಿದೆ.


ನಂತರ ಮುಂದುವರಿದು, ಗುಡ್ಡವೊಂದರ ತುದಿಯಲ್ಲಿರುವ ವೈಕುಂಠ ಬಂಗಲೆ ತಲುಪಿದೆವು. ಇದು VVIPಗಳು ತಂಗಲು ನಿರ್ಮಿಸಿದ ಗೆಸ್ಟ್ ಹೌಸ್, ವಿಶಿಷ್ಟವಾದ ಶೈಲಿಯಲ್ಲಿ, ಸುಂದರ ಪರಿಸರದಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ T.B. Dam ನ ನಯನಮನೋಹರವಾದ ದೃಶ್ಯ ಕಾಣಬಹುದು. ಇಲ್ಲೊಂದು ವೀಕ್ಷಣಾ ಕೊಠಡಿಯೂ ಇದೆ. ಆ ಪರಿಸರದಲ್ಲಿ ಅಡ್ಡಾಡಿ, panoramic viewಗಳನ್ನು ನಮ್ಮ ಕಣ್ಣಲ್ಲು, ಕ್ಯಾಮರಾ ಕಣ್ಣಲ್ಲೂ ತುಂಬಿ ಕೊಂಡು, ಗೆಸ್ಟ್ ಹೌಸ್ ಗೂ ಭೇಟಿ ಕೊಟ್ಟು ಸ್ವಲ್ಪ ವಿರಮಿಸಿ ನಂತರ ನಮ್ಮ ಟೂರ್ ನ ಕೊನೆಯ ಹಂತವಾದ park ಗೆ ಭೇಟಿಕೊಟ್ಟೆವು. ಮೈಸೂರಿನ ಬೃಂದಾವನ ಬಿಟ್ಟರೆ ಕರ್ನಾಟಕದಲ್ಲಿ ಸಿಗುವ ಸುಂದರವಾದ, ಸುಸಜ್ಜಿತವಾದ ಪಾರ್ಕ್ ಎಂದರೆ ಟಿ.ಬಿ. ಡ್ಯಾಂ ಪಾರ್ಕ್. ಬಗೆಬಗೆಯ ಹೂ-ಗಿಡ-ಮರಗಳು, ಕಾರಂಜಿಗಳು, ಮೃಗಾಲಯ ಇನ್ನೂ ಹಲವಾರು ವಿಶೇಷತೆಗಳು ಇಲ್ಲಿವೆ. ಬೃಂದಾವನವನ್ನು ನೆನಪಿಸುವ ಸಂಗೀತ ಕಾರಂಜಿಯೂ ಇಲ್ಲಿದೆ. ಮೃಗಾಲಯದ concept ಇಷ್ಟವಿಲ್ಲದಿದ್ದರೂ, ಇಲ್ಲಿ ನಮಗೆ ಹಲವಾರು ಪ್ರಾಣಿ-ಪಕ್ಷಿಗಳು ನೋಡಲು ಸಿಕ್ಕವು. ಜಿಂಕೆಗಳು, ಸಾರಂಗ, ಮೊಲಗಳು, ನೀಲಗಿರಿ ಥಾರ್, ನವಿಲು, ಗಿಳಿಗಳು, ಬಾತುಕೋಳಿಗಳು ಇತ್ಯಾದಿ... ಮನಃಸೆಳೆದದ್ದು ಗರಿ ಬಿಚ್ಚಿ ನರ್ತಿಸುತ್ತಿದ್ದ ನವಿಲು! ಇಲ್ಲಿ ಮತ್ಸ್ಯ ಸಂಗ್ರಹಾರವೂ ಇದೆ, ನಾನಾ ವಿಧದ ಮೀನುಗಳನ್ನು ಅಕ್ವೇರಿಯಂಗಳಲ್ಲಿ ಹಿಡಿದಿಡಲಾಗಿದೆ! ಪಾರ್ಕಿನ ಉದ್ದಗಲ ಅಲೆದು, ಸ್ವಲ್ಪ ವಿರಮಿಸಿ, ನಮ್ಮ "ಗೈಡ್"ಗೆ ವಿದಾಯ ಹೇಳಿ, ಪೇಟೆಯ ಕಡೆ ಹೊರಟೆವು.



ಇಲ್ಲಿಗೆ ನಮ್ಮ "ಹಂಪಿ - ಹೊಸಪೇಟೆ" ಪ್ರವಾಸ ಮುಕ್ತಾಯದ ಹಂತಕ್ಕೆ ಬಂದಿತ್ತು. ಸರಿ ಸುಮಾರು ಎರಡು ದಿನ ಹಂಪಿ-ಹೊಸಪೇಟೆಯಲ್ಲಿ ನಮ್ಮ ಬಳಗದವರೊಂದಿಗೆ ಕಳೆದ ಆ ಕ್ಷಣಗಳು ಮನಸ್ಸಿಗೆ ನೆಮ್ಮದಿಯನ್ನ, ಹುರುಪನ್ನ, ಹೊಸ ಅನುಭವ-ನೆನಪನ್ನ ನಮಗೆಲ್ಲರಿಗೂ ನೀಡಿತ್ತು...! ಹೊಸಪೇಟೆಯಲ್ಲಿ ತಿಂಡಿ ತಿಂದು, 10 ಗಂಟೆಗೆ ಎಲ್ಲರೂ ನಮ್ಮ ನಮ್ಮ ಊರುಗಳಿಗೆ ವಾಪಸು ಹೊರಡಲು ಅಣಿಯಾಗಿದ್ದೆವು. ಕೇವಲ ಹಂಪಿಯ ಪ್ರಮುಖ ಸ್ಥಳಗಳನ್ನಷ್ಟೇ ನೋಡಿದ್ದ ನಾವು, ಇನ್ನುಳಿದ ಸ್ಥಳಗಳನ್ನು ಭವಿಷ್ಯದಲ್ಲಿ ನೋಡಲು ಪುನಃ ಬರಬೇಕು ಎಂಬ ದೃಢ ನಿರ್ಧಾರದೊಂದಿಗೆ ಹಂಪಿ-ಹೊಸಪೇಟೆಗೆ ವಿದಾಯ ಹೇಳಿದೆವು... ಉಡುಪಿ ಕಡೆ ಹೊರಟವರು ಟ್ರಾವಲರ್ ಏರಿದರು, ನಾವು ಬೆಂಗಳೂರು ಹುಡುಗರು "ಜಾನಿ ಅಕ್ಕ"ನನ್ನು ಸೇರಿಸಿಕೊಂಡು, ಬೆಂಗಳೂರು ಬಸ್ ಹಿಡಿಯಲು ಹೊಸಪೇಟೆ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದೆವು...!

--ಗುರು

No comments: