Thursday, January 24, 2008

Sanchara:: Hampi - Hospet ~ part 01

ಹಂಪಿ

ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತದೆ.

ಹಂಪಿಯ ಬಗ್ಗೆ ತಿಳಿದಿರದವರು ಬಹುಶಃ ಬಹು ವಿರಳ. ಚಿಕ್ಕಂದಿನಿಂದಲೇ ಇತಿಹಾಸದ ಪಾಠಗಳಲ್ಲಿ ಹಂಪಿಯ ಬಗ್ಗೆ ಎಲ್ಲರೂ ಓದಿರುತ್ತಾರೆ. ಆದರೆ, ಹಂಪಿಗೆ ಭೇಟಿ ನೀಡಿ, ಅಲ್ಲಿನ ಕಲ್ಲು ಕಲ್ಲಿಗೂ ಕಿವಿ ಆಲಿಸಿ, ಅದರ ಕಥೆ ಕೇಳಿ, ಅಲ್ಲಿರುವ ಅವಶೇಷಗಳನ್ನು ನೋಡಿ, ವಿಜಯನಗರದ ವೈಭವವನ್ನು ಊಹಿಸಿಕೊಂಡು, ಇಂದಿನ ಹಾಳುಹಂಪೆಯ ಸ್ಥಿತಿಗತಿಗಳನ್ನು ನೋಡಿ ಮರುಕಪಟ್ಟವರು... ತುಂಬಾ ಮಂದಿ ಇರಲಿಕ್ಕಿಲ್ಲ?


ನಾನು ಹಂಪೆಯ ಬಗ್ಗೆ ತುಂಬಾ ಕೇಳಿದ್ದೆ, ಓದಿದ್ದೆ. ಅಲ್ಲಿನ ಅವಶೇಷಗಳನ್ನು ಕಣ್ಣಾರೆ ನೋಡಬೇಕು ಎಂಬುದು ಬಹುದಿನದ ಕನಸಾಗಿತ್ತು. ಅದರಲ್ಲೂ ಖ್ಯಾತ ಸಾಹಿತಿಯೊಬ್ಬರ "ವಿಜಯನಗರದ ಉಚ್ಛ್ರಾಯ ದಿನಗಳ ವೈಭವವನ್ನು ಊಹಿಸಿಕೊಂಡು ಹಂಪಿಯ ಅವಶೇಷಗಳನ್ನು ಹೃದಯದಿಂದ ನೋಡಬೇಕು" ಎಂಬ ಮಾತುಗಳನ್ನು ಕೇಳಿದಮೇಲಂತೂ ಹಂಪಿಗೆ ಹೋಗಲೇಬೇಕು ಎಂದು ನಿರ್ಧರಿಸಿದ್ದೆ. ಅಂತೆಯೇ ನಮ್ಮ ಬಳಗದವರ ಮುಂದೆ ಪ್ರಸ್ತಾಪಿಸಿದ್ದೆ. ಎಲ್ಲರೂ ದನಿಗೂಡಿಸಿದ್ದರಿಂದ "ಹಂಪಿ-ಹೊಸಪೇಟೆ" ಪ್ರವಾಸದ ಕನಸು ಶ್ರೀ ಕೊಲ್ಲೂರು ಗಿರೀಶ್ ಭಟ್ ರ ಸಂಪೂರ್ಣ ನೆರವಿನಿಂದಾಗಿ ಕಳೆದ ಸೆಪ್ಟೆಂಬರ್ ನಲ್ಲಿ ನನಸಾಯಿತು. ನಮ್ಮ ಪ್ರವಾಸದ ನೆನಪುಗಳನ್ನು ಮೆಲಕುಹಾಕುತ್ತಾ, ಹಂಪಿಯ ಬಗ್ಗೆ internetನಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಸೇರಿಸಿ ಬರೆದ ಪ್ರವಾಸಕಥನ ಈ "ಸಂಚಾರ" ಮಾಲಿಕೆಯಲ್ಲಿದೆ.


ಶ್ರೀ ವಿದ್ಯಾರಣ್ಯ ಸ್ವಾಮಿಗಳು ಹಕ್ಕ-ಬುಕ್ಕರ ನೆರವಿನಿಂದ ೧೩೩೬ ರಲ್ಲಿ ನಿರ್ಮಿಸಲ್ಪಟ್ಟ ಸಾಮ್ರಾಜ್ಯ "ವಿಜಯನಗರ". ಇವರುಗಳು ಹಾಕಿದ ಭದ್ರ ಅಡಿಪಾಯದಿಂದಾಗಿ "ವಿಜಯನಗರ" ಸಾಮ್ರಾಜ್ಯವು ವಿಸ್ತರಿಸುತ್ತಾ ವಿಸ್ತರಿಸುತ್ತಾ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಇಡೀ ದಕ್ಷಿಣ ಭಾರತವನ್ನೇ ಆವರಿಸಿಕೊಂಡಿತು. ಹಿಂದೂ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಕಲೆ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಾ, ದಕ್ಷ ಆಡಳಿತವನ್ನು ನೀಡಿದ್ದು ವಿಜಯನಗರದ ಉನ್ನತಿಗೆ ಕಾರಣವಾಯಿತು. ಅಲ್ಲಲ್ಲಿ ಹರಿದುಹಂಚಿಹೋಗಿದ್ದ, ತಮ್ಮತಮ್ಮಲ್ಲೇ ಹೊಡೆದಾಡುತ್ತಾ ಸಣ್ಣ ಸಣ್ಣ ಸಂಸ್ಥಾನಗಳನ್ನು ನಿರ್ಮಿಸಿಕೊಂಡು ರಾಜ್ಯಾವಾಳುತ್ತಿದ್ದ ಅದೆಷ್ಟೋ ತುಂಡರಸರುಗಳನ್ನು ತಮ್ಮ ಸಾಮಂತರನ್ನಾಗಿಸಿಕೊಂಡು ಒಗ್ಗಟ್ಟಾಗಿ ಬೃಹತ್ ಸಾಮ್ರಾಜ್ಯ ನಿರ್ಮಿಸಿದ್ದು ಭಾರತದ ಇತಿಹಾಸದ ಪುಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಒಂದು ಅಧ್ಭುತ ಯಶೋಗಾಥೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಅತ್ಯಂತ ಸಂಪಧ್ಬರಿತವಾಗಿತ್ತು ವಿಜಯನಗರ. ವಜ್ರವೈಢೂರ್ಯಾದಿಯಾಗಿ ಚಿನ್ನಾಭರಣಗಳನ್ನು ಸೇರುಗಟ್ಟಲೆ, ವಿಜಯನಗರದ ಬೀದಿ ಬೀದಿಗಳಲ್ಲಿ ಮಾರುತ್ತಿದ್ದ ಕಾಲವದು. ತುಂಗಭದ್ರಾ ನದಿ ದಂಡೆಯಲ್ಲಿ ತಲೆಯೆತ್ತಿ ನಿಂತ ವಿಜಯನಗರದ ಕೀರ್ತಿಪತಾಕೆಯು ಬರೀ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಹರಡಿತ್ತು. ಕಲ್ಲುಬಂಡೆಗಳನ್ನು ತಿದ್ದಿತೀಡಿ ನಿರ್ಮಿಸಿರುವ, ಶಿಲ್ಪಕಲಾ ವೈಭವನ್ನೂ ಸಾರುವ, ಸುಂದರ ದೃಶ್ಯಕಾವ್ಯಗಳು ವಿಜಯನಗರದ ಔನ್ನತ್ಯಕ್ಕೆ ಸಾಕ್ಷಿಯಾಗಿ ಇಂದಿಗೂ ಅಚ್ಚಳಿಯದೆ ನಿಂತಿವೆ.

ಇಂಥಾ ವಿಜಯನಗರವು ಮೊಗಲರ ನಿರಂತರ ದಾಳಿಗೆ ತುತ್ತಾಗಿ, ಕಾಲನ ಸೆರೆಗೆ ಸಿಕ್ಕಿ ಛಿದ್ರ ಛಿದ್ರವಾಗಿ ಹಾಳು ಹಂಪೆಯಾದದ್ದು ಮಾತ್ರ ಒಂದು ದುರಂತ ಕಥೆ. ೧೫೫೬ ಹೊತ್ತಿಗೆ ವಿಜಯನಗರ ಸಾಮ್ರಾಜ್ಯವು ಸಂಪೂರ್ಣ ಅವನತಿ ಹೊಂದಿ ಭಗ್ನಾವಶೇಷಗಳನ್ನು ತುಂಬಿಕೊಂಡು ಇತಿಹಾಸದ ಪುಟಗಳಲ್ಲಿ ಸೇರಿ ಹೋಯಿತು.


ಈ ಹಂಪೆ ಪರಿಸರಕ್ಕೆ ಇನ್ನೊಂದು ಇತಿಹ್ಯವೂ ಇದೆ. ರಾಮಾಯಣ ಮಹಾಕಾವ್ಯದಲ್ಲಿ ಬರುವ "ಕಿಷ್ಕಿಂಧಾ" ನೆನಪಿದೆಯೇ? ವಾನರ ಸೈನ್ಯದ ಸಾಮ್ರಾಜ್ಯವಾಗಿತ್ತು ಕಿಷ್ಕಿಂಧಾ. ಶ್ರೀರಾಮ ಸೀತೆಯನ್ನರಸುತ್ತಾ ಇಲ್ಲಿಗೆ ಬಂದದ್ದು, ಹನುಮಂತ-ಸುಗ್ರೀವರನ್ನು ಸಂದಿಸಿದ್ದು, ವಾಲಿ-ಸುಗ್ರೀವರ ಕಾಳಗ, ಶ್ರೀರಾಮನ ನೆರವಿನಿಂದ ಸುಗ್ರೀವ ವಾಲಿಯನ್ನು ಸೋಲಿಸಿ ವಾನರಾಧಿಪತಿಯಾಗಿದ್ದು, ವಾನರ ಸೈನ್ಯದ ನೆರವಿನಿಂದ ಲಂಕೆ ಸೇರಿದ್ದು.... ಹೀಗೆ ರಾಮಾಯಣದಲ್ಲಿ "ಕಿಷ್ಕಿಂಧಾ ಕಾಂಡ"ವೇ ಇದೆ. ಈಗಿನ ಹಂಪೆಯೇ ರಾಮಾಯಣದ ಕಿಷ್ಕಿಂಧಾ ಎಂಬುದಕ್ಕೆ ಪುರಾವೆಯೋ ಎಂಬಂತೆ ಕಿಷ್ಕಿಂಧಾ ಗುಡ್ಡ, ಸುಗ್ರೀವ ಗುಹೆ, ಆಂಜನೇಯ ಗುಡಿ, ಆಂಜನೇಯ ಗುಡ್ಡ ಇನ್ನೂ ಅನೇಕ ಸ್ಥಳಗಳು ಇಲ್ಲಿವೆ. ಹೀಗೆ ಹಂಪೆ ಅದೆಷ್ಟೋ ರಹಸ್ಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಅದಕ್ಕೆ "ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತದೆ" ಎಂದು ನನ್ನ ಲೇಖನ ಆರಂಭಿಸಿದ್ದು.

ಇದಿಷ್ಟು ಪೀಠಿಕೆಯಾಯಿತು. ಇನ್ನು ಪ್ರವಾಸ ಹೊರಡೋಣ!

ಕಳೆದ ಜುಲೈ ತಿಂಗಳಿಂದಲೇ ನಾವೊಂದಿಷ್ಟು ಜನ ಹಂಪಿ, ಹಂಪಿ ಎಂದು ಜಪಿಸುತ್ತಾ ಟೂರ್ ಬಗ್ಗೆ ಸಿದ್ಧತೆಗಳನ್ನು ಮಾಡಲಾರಂಭಿಸಿದ್ದೆವು. ಪ್ರತೀ ವಾರಾಂತ್ಯವೂ ಒಂದಿಲ್ಲೊಂದು ತಾಪತ್ರಯದಿಂದ ಹೊರಡುವ ದಿನ ಮುಂದೆ ಹೋಗುತ್ತಾ ಹೋಗುತ್ತಾ ಕೊನೆಗೂ ಸೆಪ್ಟೆಂಬರ್ ಮೊದಲವಾರಾಂತ್ಯಕ್ಕೆ (ಸೆ. 1-2) ನಿಗದಿಯಾಯಿತು. ಎಂದಿನಂತೆ ರಾಘು ಅಣ್ಣ ನಮ್ಮ tour manager, ನಾನವನ assistant. ನಾನಾಗಲೇ ’ಗೂಗಲಿಸಿ’ ಹಂಪಿ ಬಗ್ಗೆ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದ್ದೆ (ಹಿಂದೊಮ್ಮೆ ಹೀಗೆ ಒಟ್ಟಿಗೆ ಬೇಕಲಕೋಟೆ, ಮಧೂರಿಗೆ ಹೋಗಿದ್ದಾಗ ನನ್ನ online ಪಟ್ಟಿಯಲ್ಲಿ ಕಾಣುತ್ತಿದ್ದ ’ಮೈಪಾಡಿ ಅರಮನೆ’ ಹುಡುಕಿ ಹೊರಟು, ಕೊನೆಗೆ ಅದು ಯಾರಿಗೋ ಸೇರಿದ್ದ ಮನೆಯಾಗಿದ್ದು, ಒಳ ಹೊಕ್ಕಾಗ ಭೂತಾಕಾರಾದ ನಾಯಿಗಳು ನಮ್ಮನ್ನಟ್ಟಿಸಿಕೊಂಡು ಬಂದು ನಾವು ಪೇಚಿಗೆ ಸಿಲುಕಿತ್ತು. ನಂತರದ ಪ್ರವಾಸಗಳಲ್ಲಿ ಈ ತರಹದ ಪಟ್ಟಿ ತಯಾರಿಸುವಾಗ ನಾನು ಹೆಚ್ಚು ಜಾಗ್ರತನಾಗಿರುತ್ತಿದ್ದುದು ಸುಳ್ಳಲ್ಲ). ಎಲ್ಲಾ ಸಿದ್ಧತೆಗಳು ಶುರುವಾಯಿತು.

ಒಂದಿಷ್ಟು ಜನ ಶುಕ್ರವಾರ (ಆ. 31) ಮಧ್ಯಾಹ್ನ ನಮ್ಮ ಎಂದಿನ ’ಟೆಂಪೊ ಟ್ರಾವಲರ್"ನಲ್ಲಿ ಉಡುಪಿಯಿಂದ ಹೊರಟು ಕುಂದಾಪುರ, ಹುಲಿಕಲ್ ಘಾಟಿ, ಹೊಸನಗರ ಮಾರ್ಗವಾಗಿ ಹೆಗ್ಗೋಡಿನಲ್ಲಿ "ಅಕ್ಕ-ಭಾವ-ವಿಭಾ"ರನ್ನೂ ಸೇರಿಸಿಕೊಂಡು ಹೊನ್ನಾಳಿ, ಹರಿಹರ ಮಾರ್ಗವಾಗಿ ರಾತ್ರಿ 11 ಗಂಟೆಯೊಳಗೆ ಹೊಸಪೇಟೆ ತಲಪುವುದೆಂದು ನಿಗದಿಯಾಯಿತು. ನಾವೊಂದಿಷ್ಟು ಜನ ’ಬೆಂಗಳೂರು ಹುಡುಗರು’ ಮೆಜಸ್ಟಿಕ್ನಿಂದ ರಾತ್ರಿ ಹೊರಡುವ ’ರಾಜಹಂಸ’ ಹಿಡಿದು ಶನಿವಾರ (ಸೆ. 1) ಬೆಳಿಗ್ಗೆ ಹೊಸಪೇಟೆ ತಲಪುವ ಪ್ಲಾನ್ ಹಾಕಿ ಮುಂಗಡ ಟಿಕೆಟ್ ಕಾಯ್ದಿರಿಸಿದೆವು. ಬೆಂಗಳೂರಿಂದ ಹೊಸಪೇಟೆಗೆ "ಹಂಪಿ ಎಕ್ಸಪ್ರೆಸ್" ಟ್ರೈನ್ ಇದೆ. ಆದರೆ ಅದು ತಳಕುತ್ತಾ, ಬಳಕುತ್ತಾ ವೈಯಾರದಿಂದ ಹೊಸಪೇಟೆ ತಲಪುವಾಗ ಮಧ್ಯಾಹ್ನವಾಗಬಹುದು ಎಂಬ ಭಯದಿಂದ ’ರಾಜಹಂಸ’ವನ್ನು ಆಯ್ದುಕೊಂಡೆವು.


ಶುಕ್ರವಾರ (ಆ. 31) ಬಂತು. ಎಲ್ಲಾ ಸಿದ್ಧತೆಗಳು ಮುಗಿದಿದ್ದವು. ಆದರೆ ನಮ್ಮ tour manager ರಾಘು ಅಣ್ಣ ತೀವ್ರ ಜ್ವರದಿಂದ ಬಳಲುತ್ತಿರುವ ಸುದ್ದಿ ನಮ್ಮೆಲ್ಲರ ಉತ್ಸಾಹಕ್ಕೂ ತಣ್ಣೀರೆರಚಿತ್ತು. ’ನಿರು’ ಕೂಡಾ ರಜೆ ಸಿಗದ ಕಾರಣ ಹಿಂದೆ ಸರಿದುಬಿಟ್ಟ. ಟೂರ್ ಮುಂದೂಡುವ ಹಂತಕ್ಕೆ ಬಂದಿತ್ತು. ಕೊನೆಗೆ ರಾಘು ಅಣ್ಣನೇ ನಮ್ಮೆಲ್ಲರಿಗೂ ಧೈರ್ಯ ತುಂಬಿ, ನೀವೆಲ್ಲಾ ಹೋಗಿ ಬನ್ನಿ, ಪುನಃ ಮುಂದೂಡುವುದು ಬೇಡ ಎಂದಾಗ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದೆವು. ಮಧ್ಯಾಹ್ನ ೩ ಗಂಟೆಗೆ ’ದಿನು ಅಣ್ಣ’ನಿಂದ "ಟೆಂಪೊಟ್ರಾವಲರ್ ಹಿಡಿದು ಹೊರಟಿದ್ದೇವೆ" ಎಂಬ ಸುದ್ದಿ ಬಂದಾಗಲೇ ಹಂಪಿಗೆ ಹೋಗುವುದು ಖಾತ್ರಿಯಾದದ್ದು. ನಾವು ಬೆಂಗಳೂರು ಹುಡುಗರೂ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಮೆಜಸ್ಟಿಕ್ ತಲುಪಿ ’ರಾಜಹಂಸ’ದ ಮಳೆನೀರಿಂದ ತೊಯ್ದ ಆಸನದ ಮೇಲೆ ಪ್ಲಾಸ್ಟಿಕ್ ಹಾಸಿ ಕೂತು ನಮ್ಮ ಪ್ರಯಾಣ ಬೆಳೆಸಿ, ಮಾರ್ಗ ಮಧ್ಯೆ ಬಸ್ ಕೆಟ್ಟು ಬೇರೆ ಬಸ್ ಹಿಡಿದು, ಮರುದಿನ ಬೆಳಿಗ್ಗೆ ಹೊಸಪೇಟೆ ತಲಪಿದೆವು. ಊರಿಂದ ಹೊರಟವರು ಘಟ್ಟದ ಜಡಿಮಳೆಗೆ ಸಿಲುಕಿದರೂ ಯಾವುದೇ ತೊಂದರೆ ಇಲ್ಲದೆ ಮಧ್ಯರಾತ್ರಿ ಹೊಸಪೇಟೆ ತಲಪಿದರು. ಒಟ್ಟು ೧೫ ಜನ (ಪುಟ್ಟ ಅಮೋಘ, ವಿಭಾ ಸೇರಿ).

ನಮ್ಮ "ಹೊಸಪೇಟೆ-ಹಂಪಿ" ಪ್ರವಾಸದ ಮುಂದಿನ ಎಲ್ಲಾ ಸಿದ್ಧತೆಗಳನ್ನು ಮಾಡಿಸಿಕೊಟ್ಟವರು ನಮ್ಮ ಬಂಧುಗಳಾದ ಶ್ರೀ ಕೊಲ್ಲೂರು ಗಿರೀಶ್ ಭಟ್. ಇವರು ಹೊಸಪೇಟೆಯ ಸೆಷನ್ಸ್ ಕೋರ್ಟ್ ನಲ್ಲಿ ಜಡ್ಜ್. ಇವರಿಂದಾಗಿ ನಮಗೆ ತುಂಗಭದ್ರಾ ಜಲಾಶಯ (T.B. Dam) ಗೆಸ್ಟ್ ಹೌಸ್ ನಲ್ಲಿ ಒಂದು ಕೊಠಡಿ ಲಭ್ಯವಾಯಿತು, ಇನ್ನೊಂದು ಕೊಠಡಿ ಹೊಟೆಲ್ ಮೈಯೂರದಲ್ಲಿ ಸಿಕ್ಕಿತು. ಹಂಪಿ ಸುತ್ತಿಸಲು ಗೈಡ್, T.B. Dam ಒಳಹೋಗಲು ಅನುಮತಿ... ಎಲ್ಲಾ ವ್ಯವಸ್ಥೆಗಳು ಗಿರೀಶ್ ಅವರು ಮೊದಲೇ ಮಾಡಿಸಿಟ್ಟಿದ್ದರು. ಒಂಥರಾ VIP treatment! ನಮ್ಮ ಉತ್ಸಾಹವನ್ನು ಇಮ್ಮಡಿಯಾಗಿಸಿತ್ತು.


ಬೇರೆಡೆ ಬಿದ್ದ ವಿಪರೀತ ಮಳೆಯಿಂದಾಗಿ ತುಂಗಭದ್ರಾ ನದಿ ಭರ್ತಿಯಾಗಿ T.B. Dam ತುಂಬಿ ತುಳುಕುತ್ತಿತ್ತು. ಡ್ಯಾಂ ದಂಡೆಯಲ್ಲೆ ನಮ್ಮ ಕೊಠಡಿ. ಎದುರಿಗೆ ಕಣ್ಣು ಹಾಯಿಸಿದಷ್ಟೂ ಬರೀ ನೀರು, ವಿಪರೀತ ಗಾಳಿ, ಅಲೆಗಳು ದಂಡೆಗಪ್ಪಳಿಸಿ ಉಂಟಾಗುವ ’ರಪ್ ರಪ್’ ಸದ್ದು. ನಮಗೆ ಬಯಲುಸೀಮೆಯಲ್ಲೂ ಸಮುದ್ರದ ದಂಡೆ ಮೇಲೆ ನಿಂತಂತಾಗಿತ್ತು!!! ಸ್ವಲ್ಪ ದೂರದಲ್ಲೇ ಡ್ಯಾಂನ ಮುಖ್ಯ ಗೇಟ್. ನಾನಾಗಲೇ ಕ್ಯಾಮರಾ ಹಿಡಿದು ಓಡಾಡಲು ಶುರುಮಾಡಿದ್ದೆ.

ಬೆಳಿಗ್ಗೆ 8.30ಕ್ಕೆ ಎಲ್ಲರೂ ಸಿದ್ಧರಾಗಿ ಹಂಪಿಗೆ ಹೊರಡಲು ಟ್ರಾವಲರ್ ಹತ್ತಿದೆವು. ನಮ್ಮ ಬಳಗ ಒಂದಾಗಿತ್ತು, ನಮ್ಮ ಟೂರ್ ಶುಭಾರಂಭವಾಗಿತ್ತು.

(ಮುಂದುವರಿಯುವುದು...)

3 comments:

Shyam said...

Please suggest me a recommended font to view your page.
--
Shyam

Nempu Guru said...

Hi Shyama

I would recoomend "BRH Kannada" font for proper display.

Works properly in Win XP, Internet Explorer!!!

Shyam said...

Oh, Yes. Thank you Guru.
I was viewing in Firefox and it was not proper there. IE displays the text correctly.