Tuesday, April 8, 2008

ನಮ್ಮ ದೊಡ್ಡಮ್ಮ:

ನೆಂಪು ಕಾಮಾಕ್ಷಿ ಅಮ್ಮ


ನನಗೆ ಬ್ರಹ್ಮೋಪದೇಶವಾದ ನಂತರ ಬೇಸಿಗೆ ರಜೆ, ಇನ್ನಿತರ ರಜೆಗಳನ್ನು ನಾನು ಉಡುಪಿ ಕೆಮ್ಮಣ್ಣು ಪಡುಕುದ್ರುವಿನಲ್ಲಿದ್ದ ನನ್ನ ದೊಡ್ಡಪ್ಪನ (ನೆಂಪು ಶ್ರೀಧರ ಭಟ್ಟರು) ಮನೆಯಲ್ಲಿ ಕಳೆಯುತ್ತಿದ್ದೆ. ಅವರ ಜೊತೆ ಪೌರೋಹಿತ್ಯಕ್ಕೆ ಸಹಾಯಕನಾಗಿ ಹೋಗುವುದು, ದೇವರ ಪೂಜೆ, ಮಂತ್ರ ಇತ್ಯಾದಿ ಕಲಿಯುವುದು ಹೀಗೆ ನನ್ನ ಖರ್ಚಿಗೆ ಒಂದಿಷ್ಟು ಹಣವೂ ಒಟ್ಟಾಗುತ್ತಿತ್ತು. ಅದು 7ನೇ ತರಗತಿ ಮುಗಿಸಿ ಹೈಸ್ಕೂಲ್ ಮೆಟ್ಟಿಲು ಹತ್ತಲು ಅಣಿಯಾಗುತ್ತಿದ್ದ ಕಾಲ. ಹೊಸ ಹೊಸ ಕನಸು ಚಿಗುರೊಡೆಯುತ್ತಿದ್ದ ಕಾಲ!

ಪಡುಕುದ್ರು ಪರಿಸರದ ಬಗ್ಗೆ ಹೇಳಲೇಬೇಕು. ಹೆಸರೇ ಹೇಳುವಂತೆ ಸುವರ್ಣಾ ನದಿ ಸುತ್ತಲೂ ಹರಿದು ಪ್ರಕೃತಿ ನಿರ್ಮಿತ ದ್ವೀಪಸದೃಶವಾದ ಸುಂದರ, ಪ್ರಶಾಂತ ಪ್ರದೇಶವೇ ಈ ಪಡುಕುದ್ರು. ಇಂತಹ ಹಲವಾರು ಕುದ್ರುಗಳ ಸಮೂಹವೇ ಇಲ್ಲಿದೆ, ತಿಮ್ಮಣ್ಣಕುದ್ರು, ಹೊನ್ನಪ್ಪ ಕುದ್ರು, ಮೂಡುಕುದ್ರು ಇತ್ಯಾದಿ... ಒಂದೊಂದರಲ್ಲೂ ಹೆಚ್ಚೆಂದರೆ ಹತ್ತು ಮನೆಗಳು, ಸುತ್ತಲೂ ರಾಶಿ ರಾಶಿ ತೆಂಗಿನ ಮರಗಳು. ಅತ್ಯಂತ ಶಾಂತ ಪರಿಸರ. ಸುವರ್ಣಾ ನದಿ ಬೆಂಗ್ರೆಯಲ್ಲಿ ಸಮುದ್ರ ಸೇರುವ ಮೊದಲು ಹಲವಾರು ಕವಲೊಡೆದು ನಿರ್ಮಿತವಾದ ಈ ದ್ವೀಪ ಸಮೂಹ ಕೇರಳದ ಅಲೆಪ್ಪಿ ಬ್ಯಾಕ್ ವಾಟರ್ ಗೆ ಯಾವ ದೃಷ್ಟಿಯಲ್ಲೂ ಕಮ್ಮಿಯಿಲ್ಲ. ಆದರೆ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶ ಹೆಚ್ಚು ಮನೆಮಾತಾಗಿಲ್ಲ.


ನನಗಿಲ್ಲಿ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಜೊತೆಗಾರರಾಗಿರುತ್ತಿದ್ದುದು ನನ್ನ ದೊಡ್ಡಮ್ಮ ಶ್ರೀಮತಿ ಕಾಮಾಕ್ಷಿ ಅಮ್ಮ (ನನ್ನ ಅಪ್ಪನ ಅಮ್ಮ). ಈಗ ಇವರಿಗೆ 93ರ ಹರೆಯ. ನೀಲಿ ಮಡಿ ಸೀರೆಯನ್ನ ತಮ್ಮ ಕೂದಲಿಲ್ಲದ ತಲೆ ಇತರರಿಗೆ ಕಾಣದಂತೆ ಉಟ್ಟು, ಬೆನ್ನು ಬಗ್ಗಿಸಿ ನಡೆಯುತ್ತಾ, ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗುತ್ತಾ, ದೇವರನಾಮ ಪಠಿಸುತ್ತಾ, ಸುಮ್ಮನೆ ಕುಳಿತಾಗ ರಾಮಾಯಣ, ಭಾರತ, ದಿನಪತ್ರಿಕೆ ಇನ್ನಿತರ ಗ್ರಂಥಗಳನ್ನು ಶಾಲೆಯ ಮೆಟ್ಟಿಲು ಹತ್ತದಿದ್ದರೂ ಓದುತ್ತಾ ಸಮಯ ಕಳೆಯುವ ನಮ್ಮ ದೊಡ್ಡಮ್ಮ ಉತ್ಸಾಹದ ಚಿಲುಮೆ. ಜೀವನ ಪ್ರೀತಿ, ಜೀವನೋತ್ಸಾಹ ಅಂದರೆ ಏನು ಎಂಬುದನ್ನ ಇವರಿಂದ ಕಲಿಯಬೇಕು. 9೦ ಸಂವತ್ಸರಗಳ ಕಾಲ ಸಾಕಷ್ಟು ನೋವು-ನಲಿವುಗಳನ್ನು ಕಂಡಿರುವ ಇವರು ಇಂದಿಗೂ ಹುಡುಗರು-ಮಕ್ಕಳು ನಾಚುವಷ್ಟು ಕೆಲಸ ಮಾಡುತ್ತಾರೆ.

ನನಗೆ ನಮ್ಮ ನೆಂಪಿನ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ, ಒಲವು ಮೂಡುವಂತೆ ಮಾಡಿದ್ದು ದೊಡ್ಡಮ್ಮ ಹೇಳುತ್ತಿದ್ದ ನೆಂಪಿನ ಅನುಭವಗಳು, ನೆನಪುಗಳು ಹಾಗೂ ಕಥೆಗಳು. ಇದರಿಂದ ಪ್ರೇರಿತನಾಗಿ ನಾನು ನೆಂಪಿಗೆ ಮಾನಸಿಕವಾಗಿ ಮತ್ತಷ್ಟು ಹತ್ತಿರನಾದೆ. ಪಡುಕುದ್ರು ಗಣಪತಿ ಮಠದ ಹೊರ ಜಗುಲಿಯಲ್ಲಿ ನಾವಿಬ್ಬರು ಕುಳಿತಾಗ ದೊಡ್ಡಮ್ಮ ತಮ್ಮ ನೆನಪುಗಳ ಸುರುಳಿಯನ್ನ ಬಿಚ್ಚಿಡುತ್ತಿದ್ದರು. ಅವರಿಗೆ ತಮ್ಮ ನೆನಪುಗಳನ್ನ ಹೇಳಿಕೊಳ್ಳಲು, ಕೇಳಲು ಯಾರಾದರೂ ಬೇಕಿತ್ತು, ನನಗೂ ಅಷ್ಟೆ ಅವರ ಅನುಭವಗಳನ್ನ, ನೆನಪುಗಳನ್ನ ಕೇಳಿ ತಿಳಿದುಕೊಳ್ಳುವ ಕುತೂಹಲ. ಅಜ್ಜಿ-ಮೊಮ್ಮಗ ಜೋಡಿಯ ಸಂಭಾಷಣೆಗೆ ಜಗುಲಿಯ ಶಾಂತ ಪರಿಸರ ವೇದಿಕೆ, ಹೂಡೆ ಸಮುದ್ರದ ಅಲೆಗಳ ಭೋರ್ಗರೆತ ಹಿನ್ನೆಲೆ ಸಂಗೀತ! ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ದೊಡ್ಡಮ್ಮ ಅದೆಷ್ಟೋ ನೆನಪುಗಳನ್ನ, ಅನುಭವಗಳನ್ನ, ಘಟನೆಗಳನ್ನ, ಸ್ವಾರಸ್ಯಕರ-ರೋಚಕ ಕಥೆಗಳನ್ನ ನನ್ನೊಂದಿಗೆ ಹಂಚಿಕೊಂಡಿದ್ದರು. ಇದರೊಂದಿಗೆ ಹಲವಾರು ಪುರಾಣದ ಕಥೆಗಳನ್ನೂ ಹೇಳುತ್ತಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ನಾನು ಅವರಿಂದ ಕಲಿತ ಪಾಠ ಜೀವನೋತ್ಸಾಹ ಹಾಗೂ ಸದಾ ಚಟುವಟಿಕೆಯಿಂದಿರುವುದು.

ಮೊದಲೇ ಹೇಳಿದಂತೆ, 92 ಸಂವತ್ಸರಗಳನ್ನು ಕಳೆದು 93ರ ಹೊಸ್ತಿಲಲ್ಲಿರುವ ಶ್ರೀಮತಿ ಕಾಮಾಕ್ಷಿ ಅಮ್ಮ ಹುಟ್ಟಿದ್ದು ಕೊಲ್ಲೂರು ಸಮೀಪದ ಗುಂಡೂರು ಎಂಬ ಕುಗ್ರಾಮದಲ್ಲಿ. 7ರ ಹರೆಯದಲ್ಲೆ ನೆಂಪು ಸುಬ್ಬಣ್ಣ ಭಟ್ಟರ (ನನ್ನ ಅಜ್ಜ, ಅಪ್ಪನ ತಂದೆ) ಕೈ ಹಿಡಿದು ನೆಂಪಿನವರಾದರು.