Thursday, February 25, 2010

ಸಂಚಾರ: ಗಯಾ, ಬೋಧಗಯಾ

ಬಿಹಾರ ರಾಜ್ಯದಲ್ಲಿರುವ ಗಯಾ ಪುರಾಣ ಪ್ರಸಿದ್ಧ ಸ್ಥಳ. ಗಯಾಮಹಾತ್ಮೆ, ವಾಯುಪುರಾಣ, ಗರುಡ ಪುರಾಣಗಳಲ್ಲಿ ಗಯಾ ಕ್ಷೇತ್ರದ ಬಗ್ಗೆ ಉಲ್ಲೇಖವಿದೆ. ಇಲ್ಲಿರುವ ಶ್ರೀ ವಿಷ್ಣುಪಾದ ದೇವಸ್ಥಾನ ಪ್ರಸಿದ್ಧ ಪುಣ್ಯಕ್ಷೇತ್ರ.


ಶ್ರೀ ವಿಷ್ಣುಪಾದ ದೇವಸ್ಥಾನದ ಗೋಪುರ...

ಗಯಾದಿಂದ ೧೩ ಕಿ.ಮೀ ದೂರದಲ್ಲಿರುವ ಬೋಧಗಯಾ ಕೂಡಾ ಇತಿಹಾಸ ಪ್ರಸಿದ್ಧ ಸ್ಥಳ. ಬುದ್ಧನಿಗೆ ಜ್ಞಾನೋದಯವಾದ್ದು ಇಲ್ಲೇ ಕಾಣಸಿಗುವ ಬೋಧಿವೃಕ್ಷದ ಬುಡದಲ್ಲಿ.

ಮಹಾಬೋಧಿ ಮಹಾವಿಹಾರ ದೇವಸ್ಥಾನದ ಪರಿಸರದಲ್ಲಿ ಕಾಣಸಿಗುವ ಬೃಹತ್ ಗೋಪುರ, ಬೋಧಿ ಪಲ್ಲಂಕ (ಬೋದಿವೃಕ್ಷವಿರುವ ಜಾಗ), ಗುಡಿಯ ಒಳಗಿರುವ ಬುದ್ಧನ ವಿಗ್ರಹದ ಚಿತ್ರಗಳು ಇಲ್ಲಿವೆ...




ಕ್ರಿ.ಪೂ. ೬೨೩, ವೈಶಾಖ ಮಾಸದ ಹುಣ್ಣಿಮೆಯ ದಿನ ರಾಜಕುಮಾರ ಸಿದ್ಧಾರ್ಥ ಇಲ್ಲಿರುವ ಬೋಧಿವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿ ಬುದ್ಧನಾದ.

ಬೋಧಗಯಾ ಬೌದ್ಧಮತ ಅನುಯಾಯಿಗಳಿಗೆ ಬಹುದೊಡ್ಡ ಪುಣ್ಯಕ್ಷೇತ್ರ. ಇಲ್ಲಿ ಟಿಬೆಟ್, ಚೀನಾ, ಶ್ರೀಲಂಕಾ, ಜಪಾನ್ ಇನ್ನಿತರ ದೇಶಗಳ ಪ್ರಾರ್ಥನಾ ಮಂದಿರಗಳು ಸಾಕಷ್ಟು ಇವೆ. ಒಂದೊಂದು ಕಟ್ಟಡದ ವಿನ್ಯಾಸವು ವಿಶಿಷ್ಟ, ಮನಮೋಹಕ.

ಸಿದ್ಧಾರ್ಥನ ಮನಃಪರಿವರ್ತನೆಗೆ ಕಾರಣವಾದ ಘಟನೆಗಳ ಚಿತ್ರಗಳು, ಇನ್ನೂ ಹಲವಾರು ವರ್ಣಚಿತ್ರಗಳನ್ನು ಇಲ್ಲಿನ ಗೋಡೆಗಳಲ್ಲಿ ಸುಂದರವಾಗಿ ಬಿಂಬಿಸಲಾಗಿದೆ.






ಇಲ್ಲಿನ ಇನ್ನೊಂದು ವಿಶೇಷ ಕಲ್ಲಿನಲ್ಲಿ ನಿರ್ಮಿಸಿರುವ ಬುದ್ಧನ ಬೃಹತ್ ವಿಗ್ರಹ. ೧೯೮೯ ರಲ್ಲಿ ಇದನ್ನು ಪ್ರತಿಷ್ಠಾಪಿಸಲಾಯಿತು.


ಗಯಾದಿಂದ ಬೋಧಗಯಾಕ್ಕೆ ಸಾಗುವ ದಾರಿಯುದ್ದಕ್ಕೂ ಫಲ್ಗು ನದಿಯ ಬಯಲಿದೆ. ವರ್ಷದಲ್ಲಿ ಹೆಚ್ಚಿನ ಕಾಲ ಈ ನದಿಯಲ್ಲಿ ನೀರಿಲ್ಲದೆ ಬರಡಾಗಿರುತ್ತದೆ.


ಚಿತ್ರಗಳು: ನೆಂಪು ಗುರು
-o-

Tuesday, February 9, 2010

ನೆನಪಿನ ಬುತ್ತಿಯಿಂದ: ಬೋಟಿನಲ್ಲಿ ಸುದರ್ಶನ ಹೋಮ!

ಹೈಸ್ಕೂಲು ದಿನಗಳಲ್ಲಿ ಬಿಡುವಿನ ವೇಳೆಗಳನ್ನು ಹೆಚ್ಚಾಗಿ ನಾನು ಕೆಮ್ಮಣ್ಣು ಪಡುಕುದ್ರುವಿನಲ್ಲಿದ್ದ ದೊಡ್ಡಪ್ಪನ ಮನೆಯಲ್ಲಿ ಕಳೆಯುತ್ತಿದ್ದೆ. ಸಮುದ್ರ ತೀರಕ್ಕೆ ಸನಿಹ, ಸುವರ್ಣಾ ನದಿ ಸುತ್ತುವರಿದಿರುವ ದ್ವೀಪ ಸದೃಶ ಪಡುಕುದ್ರುವಿನ ನಡುವೆ ಇರುವ ಶ್ರೀ ಗಣಪತಿ ಮಠದ ಪರಿಸರ ನನಗೆ ತುಂಬಾ ಅಚ್ಚುಮೆಚ್ಚು.


ನನ್ನ ದೊಡ್ಡಪ್ಪ ನೆಂಪು ಶ್ರೀಧರ ಭಟ್ಟರು ಅರ್ಚಕರು, ಪುರೋಹಿತರು, ಜ್ಯೋತಿಷಿಗಳು. ಉಡುಪಿ ಸುತ್ತಮುತ್ತಲ ಪರಿಸರದಲ್ಲಿ ತಮ್ಮ ವಿದ್ವತ್ತಿನಿಂದಾಗಿ ಪ್ರಸಿದ್ಧರು, ಚಿರಪರಿಚಿತರು.

ನನಗೆ ಬ್ರಹ್ಮೋಪದೇಶವಾದನಂತರ ೩-೪ ವರ್ಷ ರಜಾ ದಿನಗಳಲ್ಲಿ ದೊಡ್ಡಪ್ಪನ ಸಹಾಯಕನಾಗಿ ಪೌರೋಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಸತ್ಯನಾರಾಯಣ ಪೂಜೆ, ಗಣಹೋಮ, ಗೃಹಪ್ರವೇಶ, ಅಂಗಡಿ ಪೂಜೆ, ಸುದರ್ಶನ ಹೋಮ, ವಾಸ್ತು ಹೋಮ, ನಾಗಪ್ರತಿಷ್ಠೆ, ಗಣೇಶೋತ್ಸವ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಾಯಕನಾಗಿರುವುದು ನನ್ನ ಕೆಲಸ. ಇದರಿಂದ ಚಿಕ್ಕಂದಿನಿಂದಲೇ ನಾಲ್ಕಾರು ಜನರ ಸಂಪರ್ಕ, ಹೊರಜಗತ್ತನ್ನು ಎದುರಿಸಲು ಧೈರ್ಯ, ಮಂತ್ರಗಳನ್ನು ಕಲಿಯಲು ಅವಕಾಶ ಸಿಗುತ್ತಿತ್ತು, ನನ್ನ ಖರ್ಚಿಗೆ ಬೇಕಾದ ದುಡ್ಡೂ ದೊರೆಯುತ್ತಿತ್ತು.

ರಾತ್ರಿ ನಿದ್ದೆ ಬಿಟ್ಟೊ, ಬೆಳಿಗ್ಗೆ ಬೇಗನೆ ಎದ್ದೊ, ಸೆಖೆಗಾಲದಲ್ಲಿ ಧಗ-ಧಗ ಉರಿಯುವ ಹೋಮ-ಹೊಗೆಯ ಮುಂದೆ ಕುಳಿತೊ ಭಾಗವಹಿಸಿದ ಕಾರ್ಯಕ್ರಮಗಳು ಹಲವಾರು. ಬರೆಯುತ್ತಾ ಹೋದರೆ ಅದೆಷ್ಟೋ ಸಿಹಿ-ಕಹಿ, ವಿನೋದ ಮಿಶ್ರಿತ ಪ್ರಸಂಗಗಳು ನೆನಪಾಗುತ್ತವೆ. ಆದರೆ ಎಲ್ಲದಕ್ಕಿಂತ ಭಿನ್ನವಾದ, ಖುಶಿಯಾದ ಅನುಭವ ಸಿಗುತ್ತಿದ್ದುದು ಮಲ್ಪೆ, ಬೆಂಗ್ರೆ ಅಳಿವೆಗಳಲ್ಲಿ ಬೋಟ್ ನಲ್ಲಿ ನಡೆಯುತ್ತಿದ್ದ ಸುದರ್ಶನ ಹೋಮ!


ಮಳೆಗಾಲದ ಬಿಡುವು ಕಳೆದು, ಆಳ ಸಮುದ್ರ ಮೀನುಗಾರಿಕೆ ತೆರಳುವ ಮುನ್ನ ಸಮುದ್ರ ತೀರದ ಅಳಿವೆಗಳಲ್ಲಿ ಲಂಗರು ಹಾಕಿದ ಮೀನುಗಾರಿಕಾ ಬೋಟ್ ಗಳಿಗೆ ಅದರ ಮಾಲೀಕರು ಹೋಮ, ಪೂಜೆಗಳನ್ನು ಸಲ್ಲಿಸುವುದು ಸಂಪ್ರದಾಯ. ಮೀನುಗಾರಿಕೆಗೆ ತೆರಳಿದವರ ಸುರಕ್ಷತೆ, ಹೆಚ್ಚು ಹೆಚ್ಚು ಮೀನುಗಳು ದೊರೆಯುತ್ತವೆ ಎಂಬ ನಂಬಿಕೆಯಿಂದ ಈ ಪೂಜೆ-ಪುನಸ್ಕಾರ.

ಪೂಜೆಗೆ ಮುನ್ನ ಬೋಟನ್ನು ಚೆನ್ನಾಗಿ ತೊಳೆದು, ಅಲಂಕರಿಸಿ ಅಳಿವೆಯ ನೀರಿನ ಮಧ್ಯೆ ನಿಲ್ಲಿಸಿರುತ್ತಾರೆ. ಹೆಚ್ಚಾಗಿ ಪೂಜೆ ನಡೆಯುವುದು ರಾತ್ರಿ ೭ ಗಂಟೆಯ ನಂತರ. ನಾವೊಂದು ಐದಾರು ಜನ ಅಳಿವೆಯ ತೀರ ತಲುಪಿದ ನಂತರ ಪೂಜೆ ನಡೆಸುವ ಕಡೆಯವರು ನಮ್ಮನ್ನು ಇನ್ನೊಂದು ಬೋಟಿನಲ್ಲಿ ಕರೆದೊಯ್ಯುತ್ತಿದ್ದರು. ಜೋರಾಗಿ ಬೀಸುವ ಗಾಳಿ, ಸಮೀಪದಲ್ಲೇ ಭೋರ್ಗರೆಯುತ್ತಿರುವ ಸಮುದ್ರ, ಅಲೆಗಳ ಭಾರಿ ಸದ್ದು, ಆರಂಭದಲ್ಲಿ ಉಸಿರಾಡಲು ಪರದಾಡುವಂತೆ ಮಾಡುವ ಮೀನಿನ ವಾಸನೆ, ಅಳಿವೆಯ ಅಲೆಗಳ ಮಧ್ಯೆ ತೇಲುತ್ತಿರುವ ಬೋಟ್ ನಲ್ಲಿ ನಾವು ಮಡಿಯುಟ್ಟು ಪೂಜೆಗೆ ಸಿದ್ಧರಾಗುತ್ತಿದ್ದೆವು.

ಅಗಲಕಿರಿದಾದ ಬೋಟಿನಲ್ಲಿ ಸಿಕ್ಕಷ್ಟು ಜಾಗದಲ್ಲೇ ಸುದರ್ಶನ ಮಂಡಲ, ಹೋಮ ಕುಂಡದ ತಯಾರಿ. ಬತ್ತಿ ದೀಪ ಹಚ್ಚಿಡುವುದು ಒಂದು ಸಾಹಸವೇ. ಬೀಸುವ ಗಾಳಿಗೆ ದೀಪ ಆರಿ ಹೋಗುತ್ತಿತ್ತು. ಬೋಟಿನವರು ಟಾರ್ಪಾಲು ಕಟ್ಟಿ ಗಾಳಿಯ ರಭಸ ತಡೆಯಲು ಪ್ರಯತ್ನಿಸುತ್ತಿದ್ದರೂ ಗಾಳಿ ಬೇರೆ ಬೇರೆ ದಿಕ್ಕಿನಿಂದ ಬೀಸುತ್ತಿತ್ತು. ಕೊನೆಗೆ ಉದ್ದನೆಯ ಪಾತ್ರೆಯ ಒಳಗೆ ದೀಪದ ಸ್ಥಾಪನೆ! ಅಲೆಗಳ ಹೊಡೆತಕ್ಕೆ ಬೋಟ್ ಅತ್ತಿತ್ತ ಸರಿಯುವಾಗ ಪೂಜೆಗೆ ಇಟ್ಟ ತೆಂಗಿನಕಾಯಿ, ಸೇಬು, ಕಿತ್ತಳೆ, ನಿಂಬೆ ಇನ್ನಿತರ ಫಲ ವಸ್ತುಗಳು ಗುಡು ಗುಡು ಓಡಿಹೋಗುತ್ತಿತ್ತು. ಎಲ್ಲಾ ತಯಾರಿ ಮುಗಿದ ನಂತರ ದೊಡ್ಡಪ್ಪ ಹೋಮಕ್ಕೆ ಕುಳಿತುಕೊಳ್ಳುತ್ತಿದ್ದರು. ಇನ್ನೊಬ್ಬರು ಮಂಡಲ ಪೂಜೆಗೆ ಕುಳಿತುಕೊಳ್ಳುತ್ತಿದ್ದರು. ಮುರಳಿ ಅಣ್ಣ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದ. ನಾನು ಬೋಟಿನ ಹಿಂಬದಿಯ ಜಾಗದಲ್ಲಿ ಪಂಚಕಜ್ಜಾಯ, ಚೆರು (ಅನ್ನ, ಹೋಮಕ್ಕೆ ಆಹುತಿ ಹಾಕಲು), ಓಕುಳಿ-ಬಲಿಗೆ ಬೇಕಾಗುವ ಸಾಹಿತ್ಯಗಳ ಸಿದ್ಧತೆಯಲ್ಲಿ ತೊಡಗಿರುವ ಸೋಮಯಾಜಿಯವರ ಸಹಾಯಕ್ಕೆ ಹೋಗುತ್ತಿದ್ದೆ.

ಚಂದ್ರನ ಬೆಳಕಿನಲ್ಲಿ ಹೊಳೆಯುವ ಸಮುದ್ರದಲೆಗಳನ್ನು ನೋಡುವುದೇ ಒಂದು ಸೊಬಗು. ಆ ಕಾಲದಲ್ಲಿ ಕ್ಯಾಮರಾದ ಬಗ್ಗೆ ಕಲ್ಪನೆಯೇ ನನ್ನಲ್ಲಿ ಇರಲಿಲ್ಲ ಆ ಸುಂದರ ನೆನಪುಗಳನ್ನು ಸೆರೆಹಿಡಿದಿಟ್ಟುಕೊಳ್ಳಲು! ತಣ್ಣನೆ ಮೈಕೊರೆವ ಗಾಳಿ ಸೆಖೆಯನ್ನು ಹೊಡೆದೋಡಿಸುತ್ತಿತ್ತು. ಇಡೀ ಪರಿಸರದಲ್ಲಿ ದೊಡ್ಡಪ್ಪನ ಮಂತ್ರಘೋಷ, ಅಲೆಗಳ ಭೋರ್ಗರೆತದ ಸದ್ದು, ಉಳಿದಂತೆ ನೀರವ ಮೌನ. ಮೀನಿನ ವಾಸನೆ ಒಂದು ಬಿಟ್ಟರೆ ಉಳಿದಂತೆ ರೋಮಾಂಚಕ ಅನುಭವ.


ಹೋಮದ ಬಿಸಿ ಏರಿದಂತೆ ಚಳಿ ಓಡಿಹೋಗಿ ಮೈಬೆಚ್ಚಗಾಗುತ್ತಿತ್ತು. ತುಪ್ಪ ಮಿಶ್ರಿತ ಹೋಮದ ಹೊಗೆ ಮೀನಿನ ದುರ್ಗಂಧವನ್ನ ಹೊಡೆದೋಡಿಸುತ್ತಿತ್ತು. ದೊಡ್ಡಪ್ಪ ಉಪಹೋಮಕ್ಕೆ ಕುಳಿತುಕೊಳ್ಳಲು ಕರೆಯುತ್ತಿದ್ದರು. ನಾನೂ ಮುರಳಿಯಣ್ಣನೊಂದಿಗೆ ಕುಳಿತುಕೊಳ್ಳುತ್ತಿದ್ದೆ. ಚೆರು, ಸಾಸಿವೆ, ಎಳ್ಳು, ಸಮಿಧ, ಅರಳು, ತುಪ್ಪ ಇವಿಷ್ಟು ದ್ರವ್ಯಗಳು. ಉಪಹೋಮದ ಮಂತ್ರ ಪಠಿಸುತ್ತಾ ಒಂದೊಂದೇ ದ್ರವ್ಯಗಳನ್ನು ಉರಿಯುವ ಅಗ್ನಿಗೆ ಆಹುತಿಯಾಗಿ ಹಾಕುವುದು. ಮೊದಮೊದಲು ಬೆಚ್ಚಗೆ ಹಿತವಾಗುತ್ತಿದ್ದ ಹೋಮದ ಶಾಖ ಸ್ವಲ್ಪ ಸಮಯದ ನಂತರ ಬಿಸಿಯೇರಿ, ಹೊಗೆಯೇರಿ ಕಣ್ಣುರಿ, ಮೈಯುರಿ ಶುರುವಾಗುತ್ತಿತ್ತು. ಜೊತೆಗೆ ಹೋಮಕ್ಕೆ ಹಾಕಿದ ಎಳ್ಳು-ಸಾಸಿವೆಗಳು ಪಟಪಟ ಹೊಟ್ಟುತ್ತಾ ಕೈಕಾಲು, ಹೊಟ್ಟೆ, ಮುಖಕ್ಕೊ ಬಿದ್ದಾಗ ಬಿಸಿ ಸೂಜಿ ಚುಚ್ಚಿದ ಅನುಭವ! ಉಪಹೋಮ ಮುಗಿಸಿ ಮೇಲೆದ್ದು ಬೋಟಿನ ಹಿಂದೆ ಬಂದು ತಂಗಾಳಿಗೆ ಮೈಯೊಡ್ಡಿದಾಗ ಹಿತವಾಗುತ್ತಿತ್ತು. ದೊಡ್ಡಪ್ಪ ಅದೆಷ್ಟೋ ವರ್ಷಗಳಿಂದ ಹೀಗೆ ಶಾಖ, ಹೊಗೆಯನ್ನೆದುರಿಸುತ್ತಾ ಹೋಮ ಮಾಡುತ್ತಾರಲ್ಲಾ ಎಂಬ ಯೋಚನೆಯೂ ಕಾಡುತ್ತಿತ್ತು.

ಮಂಗಳಾರತಿ ಎತ್ತಿ, ಪೂರ್ಣಾಹುತಿ ಸಮರ್ಪಿಸಿದ ನಂತರ ಹೋಮ ಪರಿಸಮಾಪ್ತಿಯಾಗುತ್ತಿತ್ತು. ಬೋಟಿನ ಯಂತ್ರಕ್ಕೆ, ನಿಯಂತ್ರಣ ಕೊಠಡಿಯಲ್ಲಿರುವ ’ಸ್ಟೆರಿಂಗ್’ ಗೆ ಪೂಜೆ ಸಲ್ಲಿಸಿದ ನಂತರ ಅಷ್ಟ ದಿಕ್ಪಾಲಕರಿಗೆ ಬಲಿ ಸಮರ್ಪಣೆ. ಬಾಳೆ ಎಲೆಯಲ್ಲಿ ಚೆರು, ಕುಂಬಳಕಾಯಿ, ದೊನ್ನೆಯಲ್ಲಿ ಓಕಳಿ ನೀರು, ನೆಣೆಕೋಲನ್ನು ಹಚ್ಚಿ ಎಂಟು ದಿಕ್ಕುಗಳಿಗೂ, ಕ್ಷೇತ್ರಪಾಲನಿಗೂ ಬಲಿ ಸಮರ್ಪಿಸುವುದು. ನಂತರ ಪ್ರಸಾದ ವಿತರಣೆ. ಬೋಟಿನ ಮಾಲಕರಿಗೆ, ಮೀನುಗಾರಿಕೆಗೆ ತೆರಳುವ ಸಿಬ್ಬಂದಿಗಳಿಗೆಲ್ಲಾ ಪ್ರಸಾದ, ಪಂಚಕಜ್ಜಾಯ ಹಂಚಿದ ನಂತರ ವಾಪಸ್ಸು ಹೊರಡುವ ಸಮಯ. ದಕ್ಷಿಣೆಯನ್ನು ಸ್ವೀಕರಿಸಿ, ತಂದಿದ್ದ ಸಲಕರಣೆಗಳನ್ನೆಲ್ಲಾ ಚೀಲದಲ್ಲಿ ತುಂಬಿಕೊಂಡು, ೧-೨ ಎಳನೀರು ಕುಡಿದು, ಬಾಳೆಹಣ್ಣು ತಿಂದು, ಮಾಲೀಕ-ಸಿಬ್ಬಂದಿಗಳಿಗೆ ಶುಭ ಹರಸಿ, ಇನ್ನೊಂದು ಬೋಟ್ ಹತ್ತಿ ದಡ ಸೇರುತ್ತಿದ್ದೆವು.

ಸಮಯ ಅದಾಗಲೇ ಮಧ್ಯರಾತ್ರಿ ೧೨ ಆಗುತ್ತಿತ್ತು. ದ್ವಿಚಕ್ರವೋ, ಕಾರನ್ನೋ ಏರಿ ಮನೆಗೆ ವಾಪಾಸಾಗಿ, ಕೈಕಾಲು ತೊಳೆದು ಮಲಗಲು ಅಣಿಯಾಗುವಾಗ ೧ ಗಂಟೆ ದಾಟುತ್ತಿತ್ತು. ನಿದ್ದೆಯಲ್ಲೂ ಅದೇ ಭೋರ್ಗರೆವ ಅಲೆಗಳು, ತೇಲುವ ಬೋಟು, ತೆಂಗಿನ ಮರಗಳು, ತಂಗಾಳಿ...!

ಹೀಗೆ ಹಲವಾರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಎಲ್ಲದಕ್ಕಿಂತ ಹೆಚ್ಚು ಖುಶಿ ಕೊಟ್ಟಿದ್ದು ಬೋಟಿನಲ್ಲಿ ಕುಳಿತು ಪೂಜೆ, ಹೋಮದಲ್ಲಿ ಭಾಗವಹಿಸಿದ ಅನುಭವ!

ಚಿತ್ರಗಳು: ನೆಂಪು ಗುರು
--o--

Tuesday, February 2, 2010

ಸಂಚಾರ: ಮೂಡುಗಲ್ಲು, ಬೆಣಗಲ್ ತೀರ್ಥ

ಇತ್ತೀಚೆಗೆ (೨೩ ಜನವರಿ, ೨೦೧೦) ನಮ್ಮ ಯುವ ಪಡೆ ಕೊಲ್ಲೂರು ಸಮೀಪದ ಬೆಣಗಲ್ ತೀರ್ಥಕ್ಕೆ ಚಾರಣ ಹಮ್ಮಿಕೊಂಡಿತ್ತು. ಹೆಚ್ಚಿನ ಪೂರ್ವ ಸಿದ್ಧತೆಗಳಿಲ್ಲದೆ, ಧಿಡೀರನೆ ನಿರ್ಧರಿಸಿದ ಈ ಪ್ರವಾಸ ಹೊಸ ಹುಮ್ಮಸ್ಸು, ಚೈತನ್ಯವನ್ನ ನಮ್ಮೆಲ್ಲರಿಗೂ ನೀಡಿತ್ತು. ವಾಪಸ್ಸು ನಮ್ಮ ನಮ್ಮ ಕಾರ್ಯಕ್ಷೇತ್ರಗಳಿಗೆ ಮರಳಿದಾಗ ನಿಸರ್ಗದ ಮಡಿಲಲ್ಲಿ ಕಳೆದ ಆ ಒಂದು ದಿನದ ನೆನಪು ನವೋಲ್ಲಾಸವನ್ನುಂಟುಮಾಡಿತ್ತು.


ನಮ್ಮ ಪ್ರವಾಸ ಆರಂಭವಾಗಿದ್ದು ನೆಂಪುವಿನಿಂದ. ಮುಂಜಾನೆ ೫.೩೦ ಕ್ಕೆ ಎಲ್ಲರೂ ಎದ್ದು ಮಧ್ಯಾಹ್ನದ ಊಟಕ್ಕೆಂದು ಚಪಾತಿ, ಚನ್ನಾ ಮಸಾಲ, ಮೊಸರವಲಕ್ಕಿ, ಲಿಂಬೆ ಶರಬತ್ ತಯಾರಿಯಲ್ಲಿ ತೊಡಗಿಕೊಂಡೆವು. ಹಣ್ಣು, ದಾರಿ ಖರ್ಚಿಗೆ ಬೇಕಾದ ತಿಂಡಿಗಳು, ಚಪಾತಿ, ಮೊಸರವಲಕ್ಕಿ, ನೀರು, ಶರಬತ್ ಎಲ್ಲವನ್ನೂ ಬ್ಯಾಕ್-ಪ್ಯಾಕ್ ಗೆ ತುಂಬಿಕೊಂಡು ೯.೦೦ ಸುಮಾರಿಗೆ ಸ್ನಾನಾಹ್ನಿಕ, ತಿಂಡಿ ಮುಗಿಸಿ ನಮ್ಮ ತಂಡ ರೆಡಿಯಾಗಿತ್ತು. ನಮ್ಮ ಟ್ರೆಕ್ಕಿಂಗ್ ಗೆ ಶುಭ ಹಾರೈಸಿದ್ದು ಊರೂರು ತಿರುಗುತ್ತಾ, ದೇವರ ನಾಮ ಹಾಡುವವರು. ಸುಶ್ರಾವ್ಯವಾಗಿ ಹಾಡಿದ ಹಿಂದುಸ್ಥಾನಿ ಭಜನ್ ಗಳು ಕಿವಿಗಿಂಪಾಗಿತ್ತು.


೯.೩೦ ಗೆ ಪ್ರಸಾದರ ಕ್ವಾಲಿಸ್ ವಾಹನವನ್ನೇರಿ ನಾವೆಲ್ಲಾ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನದ ಕಡೆಗೆ ಪ್ರಯಾಣ ಆರಂಭಿಸಿದೆವು. ವಂಡ್ಸೆಯ ಶಾಲಾ ಮಾರ್ಗದಲ್ಲಿ ಮುಂದುವರಿದು ೧೦-೧೨ ಕಿ.ಮೀ ಬಂದಂತೆ ಟಾರ್ ರಸ್ತೆ ಮಾಯವಾಗಿ ಹೊಂಡ-ಗುಂಡಿಗಳಿಂದ ತುಂಬಿದ ಮಣ್ಣಿನ ರಸ್ತೆ ನಮ್ಮನ್ನು ಸ್ವಾಗತಿಸಿತು. ಅಲ್ಲೊಂದು ಇಲ್ಲೊಂದು ಮನೆ ಬಿಟ್ಟರೆ ನಿರ್ಜನ ಕಾನನ ಪರಿಸರ. ಇಂಥಾ ರಸ್ತೆಗಳಿಗೆ ಮಹಿಂದ್ರಾ ಜೀಪ್ ಇಲ್ಲವೇ ಜಿಪ್ಸಿ ಸೂಕ್ತ. ಆದರೆ ನಮ್ಮ ಪ್ರಸಾದ್ ಇಂಥಾ ಪರಿಸ್ಥಿತಿಯಲ್ಲು ಕ್ವಾಲಿಸನ್ನು ಲೀಲಾಜಾಲವಾಗಿ ಚಲಾಯಿಸುತ್ತಿದ್ದರು. ದಾರಿಯಲ್ಲಿ ಸಿಕ್ಕ ಹಳ್ಳಿಯವರಿಂದ ಸರಿಯಾದ ದಾರಿ ಕೇಳುತ್ತಾ ಶ್ರೀ ಕೇಶವನಾಥೇಶ್ವರನ ದೇವಸ್ಥಾನ ತಲುಪಿದೆವು.


ಮೂಡುಗಲ್ಲು, ಹೆಸರೇ ಹೇಳುವಂತೆ ನೈಸರ್ಗಿಕ ಗುಹೆಯ ಒಳಗೆ ಶ್ರೀ ಕೇಶವನಾಥೇಶ್ವರ ಪೂಜಿಸಲ್ಪಡುತ್ತಿದ್ದಾನೆ. ಸುತ್ತಲೂ ತಿಳಿನೀರಿನ ಚಿಕ್ಕ ಸರೋವರ (ಒಂದಡಿ ನೀರಿರಬಹುದು ಅಷ್ಟೆ). ನೀರಿನಲ್ಲಿ ನಡೆಯುತ್ತಾ ದೇವರ ಸನ್ನಿಧಿಯ ಬಳಿ ಬಂದೆವು. ನೀರಿನಲ್ಲಿ ನೂರಾರು ಮೀನುಗಳಿವೆ. ಅಲ್ಲದೆ ಬೇರೆ ಬೇರೆ ಜಾತಿಯ ಹಾವುಗಳೂ ಇವೆ ಎಂದು ಇಲ್ಲಿಯ ಅರ್ಚಕರು ತಿಳಿಸಿದರು. ನಮ್ಮೆಲ್ಲರಿಗೂ ಒಳಗೊಳಗೆ ಸಣ್ಣ ಭಯ! ಆದರೆ ೧-೨ ಒಳ್ಳೆ ಹಾವು ಬಿಟ್ಟರೆ ಬೇರೆ ಯವುದೂ ಕಾಣಸಿಗಲಿಲ್ಲ. ಕಾಲುಗಳಿಗೆ ಮೀನುಗಳು ತಾಗಿಕೊಂಡೆ ಹರಿದಾಡುತ್ತಿದ್ದವು. ನಾವಿಷ್ಟೂ ಜನ ಒಮ್ಮೆಲೆ ನೀರಿನಲ್ಲಿ ಸಾಗಿದ್ದರಿಂದ ಸಹಜವಾಗಿಯೇ ಜಲಚರಗಳಲ್ಲಿ ಆತಂಕ ಮೂಡಿ ಅವು ಅತ್ತಿಂದಿತ್ತ ಹರಿದಾಡುತ್ತಿದ್ದವು.


ಅರ್ಚಕರು ಪೂಜೆ ಆರಂಭಿಸಿದರು. ನಾವೆಲ್ಲಾ ನೀರಿನಲ್ಲೆ ನಿಂತು ಶ್ರೀ ದೇವರಿಗೆ ನಮಿಸಿ, ಮಂಗಳಾರತಿ, ಪ್ರಸಾದ ಸ್ವೀಕರಿಸಿದೆವು. ವಾಪಸ್ಸು ಬರುವಾಗ ದೇವರ ನೈವೇದ್ಯಕ್ಕಾಗಿ ಅರ್ಪಿಸಿದ ಅಕ್ಕಿಯನ್ನು ಅರ್ಚಕರು ನಮಗೆ ನೀಡುತ್ತಾ ಮೀನುಗಳಿಗೆ ಹಾಕಿ ಎಂದು ಸೂಚಿಸಿದರು. ಅಕ್ಕಿ ಹಾಕುತ್ತಿದ್ದಂತೆ ಮೀನುಗಳು ಅದಕ್ಕೆ ಮುಗಿಬೀಳುತ್ತಿದ್ದವು.

ಪರಿವಾರ ದೇವರುಗಳು, ವೀರಭದ್ರ, ಹುಲಿ ದೇವರುಗಳಿಗೂ ನಮಿಸಿ ಹೊರಬಂದೆವು. ಮೂಡುಗಲ್ಲು ದೇಗುಲ ಪರಿಸರ ಕಾನನದ ನಡುವೆ ಇದೆ. ಅರ್ಚಕರ ಮನೆ ಬಿಟ್ಟರೆ ಬೇರೆ ಯಾವುದೇ ಮನೆ ನಮಗೆ ಕಾಣಲಿಲ್ಲ. ಅರ್ಚಕರು ದೇವಳದ ಮಹತ್ವವನ್ನು ವಿವರಿಸುತ್ತಾ, ಪೂಜಾಕೈಂಕರ್ಯದಲ್ಲಿ ಏನಾದರೂ ಲೋಪವಾದರೆ ದೇವರ ಹಾವು ನೀರಿನಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದಾಗ ಮಾಯವಾಗುತ್ತದೆ. ಪರಿಸರದಲ್ಲಿ ಹುಲಿ, ಚಿರತೆಗಳೂ ಸಾಮಾನ್ಯ. ದನಕರುಗಳನ್ನು ಅವುಗಳಿಂದ ರಕ್ಷಿಸಲು ಹುಲಿದೇವರನ್ನೂ ಇಲ್ಲಿ ಪೂಜಿಸಲಾಗುತ್ತದೆ ಎಂದರು. ಎಳ್ಳಮವಾಸ್ಯೆಗೆ ಇಲ್ಲಿ ನೂರಾರು ಜನ ಸೇರಿ ವಿಶೇಷ ಪೂಜೆ, ಉತ್ಸವಗಳನ್ನೂ ಆಯೋಜಿಸಲಾಗುತ್ತಿದೆ. ಹೀಗೆ ಹಲವಾರು ವೈಶಿಷ್ಠ್ಯಗಳನ್ನು ಒಳಗೊಂಡಿರುವ ಈ ದೇಗುಲ, ದೇಗುಲದ ನಿರ್ಜನ ಪರಿಸರ ಭಯ-ಭಕ್ತಿಯನ್ನ ಮೂಡಿಸುತ್ತದೆ. ಆದರೆ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ, ಮಾಹಿತಿಯ ಕೊರತೆಯಿಂದಾಗಿ ಹೆಚ್ಚಿನವರಿಗೆ ಇಲ್ಲಿರುವ ಗುಹಾಂತರ ದೇಗುಲದ ಬಗ್ಗೆ ಅರಿವಿಲ್ಲ.

ಅರ್ಚಕರಿಂದ ಮುದೂರಿಗೆ ಹೋಗುವ ಒಳದಾರಿಯ ಮಾಹಿತಿ ಪಡೆದು, ಅವರಿಗೆ ವಂದಿಸಿ ಬೆಣಗಲ್ ತೀರ್ಥದತ್ತ ಮುಂದುವರಿದೆವು.

ಕಾನನದ ದಾರಿಯಿಂದ ಹೊರಬಂದಂತೆ ಅಲ್ಲಲ್ಲಿ ಮನೆಗಳು, ರಬ್ಬರ್-ಅಡಿಕೆ ತೋಟಗಳು ಕಾಣಿಸತೊಡಗಿತು. ದಾರಿಹೋಕರಿಂದ ಸರಿ ದಾರಿ ಕೇಳುತ್ತಾ ಮುದೂರಿನ ಕಡೆ ಪ್ರಯಾಣಿಸಿದೆವು. ಕೇರಳದಲ್ಲಿ ಮಧೂರು ಎಂಬ ಊರಿದೆ. ನಮ್ಮ ಈ ಮುದೂರು ಕೂಡಾ ಕೇರಳದಲ್ಲಿದೆಯೇ ಎಂದೆಣಿಸಿದ್ದು ಸುಳ್ಳಲ್ಲ! ಮಲ್ಲುಗಳೇ ಜಾಸ್ತಿ ಇರುವ ಇಲ್ಲಿ ಎಕರೆಗಟ್ಟಲೆ ಜಾಗಗಳನ್ನು ರಬ್ಬರ್, ಅಡಿಕೆ, ಬಾಳೆ ಇನ್ನಿತರ ತೋಟಗಳನ್ನಾಗಿ ಪರಿವರ್ತಿಸಿದ್ದಾರೆ. ಮುದೂರಿಗೆ ಕುಂದಾಪುರದಿಂದ ಬಸ್ ಸೌಕರ್ಯವಿದೆ. ಕೊಲ್ಲೂರಿಗೆ ಸಾಗುವಾಗ ಸಿಗುವ ಜಡ್ಕಲ್ ನಲ್ಲಿ ಬಲಕ್ಕೆ ತಿರುಗಿ ಮುದೂರು ತಲುಪಬಹುದು. ನಾವು ವಂಡ್ಸೆ, ಬೆಳ್ಳಾಲ, ಮೂಡುಗಲ್ಲು, ಮುದೂರು ಕಾನನ ಮಾರ್ಗವನ್ನು ಆಯ್ದುಕೊಂಡೆವು.

ಊರವರಿಂದ ಬೆಣಗಲ್ ತೀರ್ಥ (ಗೋವಿಂದ ತೀರ್ಥವೆಂದೂ ಕರೆಯುತ್ತಾರೆ) ಕ್ಕೆ ಹೋಗುವ ದಾರಿಯ ಮಾಹಿತಿ ಪಡೆದು, ಊರಿನಂಚಿನಲ್ಲಿ ಸಿಗುವ ನಾಯ್ಕರ ಮನೆಯ ಬಳಿ ಕ್ವಾಲಿಸ್ ನಿಲ್ಲಿಸಿ, ಬ್ಯಾಕ್-ಪ್ಯಾಕ್, ಶರಬತ್ ಕ್ಯಾನ್ ಬೆನ್ನಿಗೇರಿಸಿ ಚಾರಣಕ್ಕೆ ಸಿದ್ಧರಾದೆವು. ಡ್ರೈವರ್ ಪ್ರಸಾದ್ ಕೂಡ ನಮ್ಮ ಜೊತೆ ಚಾರಣಕ್ಕೆ ಅಣಿಯಾದರು.


ಕೊಡಚಾದ್ರಿ ಪರ್ವತ ಶ್ರೇಣಿಗಳ ನಡುವೆ ಹುದುಗಿದೆ ಬೆಣಗಲ್ ತೀರ್ಥ. ಜಲಪಾತದ ಬುಡ ತಲುಪಲು ಸರಿಯಾದ ದಾರಿಯಿಲ್ಲ. ೧ ಗಂಟೆ ದಟ್ಟ ಕಾನನದ ನಡುವಿನ ಚಾರಣದ ನಂತರ ಜಲಪಾತದ ಸನಿಹ ತಲುಪಬಹುದು. ಮಳೆಗಾಲದಲ್ಲಿ ಹಲವಾರು ತೊರೆಗಳು, ಇಂಬಳಗಳಿಂದಾಗಿ ಚಾರಣ ಅಸಾಧ್ಯ.


ಊರರವರ ಮಾಹಿತಿಯಂತೆ ಕಾನನದ ಪ್ರವೇಶದಲ್ಲಿ ಸಿಗುವ ಕಾಲ್ದಾರಿ ಹಿಡಿದು ಗೋವಿಂದ ತೀರ್ಥದತ್ತ ಮುಂದುವರಿದೆವು. ಹೆಚ್ಚಿನವರು ಊರುಗೋಲು ಹಿಡಿದಿದ್ದರು. ಸುತ್ತಲೂ ದೊಡ್ಡ ದೊಡ್ಡ ಮರಗಳು ಸುತ್ತುವರಿದಿದ್ದರಿಂದ ಬಿಸಿಲು ನಮ್ಮ ಚಾರಣಕ್ಕೆ ಅಡ್ಡಿಯಾಗಲಿಲ್ಲ! ಬೇರೆ ಬೇರೆ ವಿಷಯಗಳನ್ನು ಹರಟುತ್ತಾ, ಏದುಸಿರು ಬಿಡುತ್ತಾ, ಮಧ್ಯೆ ಮಧ್ಯೆ ವಿರಮಿಸುತ್ತಾ, ತಿಂಡಿ-ತೀರ್ಥಗಳನ್ನು ಸೇವಿಸುತ್ತಾ ಒಂದು ಗಂಟೆಯ ಚಾರಣದ ನಂತರ ಜಲಪಾತದ ತಳ ತಲುಪಿದೆವು. ಗುಡ್ಡ ಏರುತ್ತಾ ಏರುತ್ತಾ ಸಾಗಿದ್ದರಿಂದ ಎಲ್ಲರೂ ದಣಿದಿದ್ದರು.


ಬೆಣಗಲ್ ತೀರ್ಥದ ತಳ ತಲುಪುತ್ತಿದ್ದಂತೆ ಅಲ್ಲಿಯ ಸುಂದರ ನೀರವ ಪರಿಸರ, ಶುದ್ಧ ಗಾಳಿ ದಣಿವನ್ನು ಹೊಡೆದೋಡಿಸಿತ್ತು. ಮೋಡ ಕವಿದಿದ್ದರಿಂದ ಬಿಸಿಲ ಜಳವೂ ಇರಲಿಲ್ಲ. ಆದರೆ ಬೇಸಿಗೆ ಸಮೀಪಿಸುತ್ತಿದ್ದುದರಿಂದ ೬೦೦-೭೦೦ ಅಡಿ ಎತ್ತರದಿಂದ ಬೀಳುತ್ತಿದ್ದ ನೀರಿನ ರಭಸ ಅಷ್ಟಾಗಿ ಇರಲಿಲ್ಲ, ಇಂಬಳಗಳೂ ಇರಲಿಲ್ಲ. ತೀರ್ಥ ಸ್ನಾನ ಮಾಡಲು ಅನುಕೂಲಕರವಾಗಿತ್ತು. ನಮ್ಮ ತಂಡದಲ್ಲಿದ್ದ ಏಕೈಕ ಲೇಡಿ ಮೆಂಬರ್ ಕೈಗೆ ಕ್ಯಾಮರಾ ನೀಡಿ ನಾವೆಲ್ಲಾ ಸ್ನಾನ ಮಾಡಲು ಜಲಪಾತದ ಬುಡದಲ್ಲಿ ನಿಂತೆವು.

ನೂರಾರು ಅಡಿ ಎತ್ತರದಿಂದ ಬೀಳುತ್ತಿದ್ದ ನೀರು ಆರಂಭದಲ್ಲಿ ಚಳಿಯಿಂದ ನಡುಕವನ್ನುಂಟುಮಾಡಿದರೂ, ಸಮಯ ಕಳೆದಂತೆ ಮೈ-ಮನಸ್ಸಿಗೆ ಆಹ್ಲಾದವನ್ನುಂಟುಮಾಡತೊಡಗಿತು. ಮಾಘ ಮಾಸದ ತೀರ್ಥ ಸ್ನಾನ ಅತ್ಯಂತ ಶ್ರೇಷ್ಠವಂತೆ. ಎಲ್ಲರೂ ಮನಸೋಇಚ್ಛೆ ನೀರಲ್ಲಿ ಕುಣಿದಾಡಿದೆವು. ಗಾಳಿಯ ರಭಸಕ್ಕೆ ನೀರು ಒಮ್ಮೆ ನಮ್ಮ ಮೇಲೆ, ಮತ್ತೊಮ್ಮೆ ಬೇರೆ ಕಡೆ ಬೀಳುತ್ತಾ ಮಧ್ಯೆ ಮಧ್ಯೆ "ಬ್ರೇಕ್" ನೀಡುತ್ತಿತ್ತು. ನಮ್ಮ ತಂಡ ಬಿಟ್ಟರೆ ಬೇರಾವ ನರಜೀವಿಯೂ ಆ ಪರಿಸರದಲ್ಲಿ ಇರಲಿಲ್ಲ. ಈ ಏಕಾಂತತೆಯೂ ನಮ್ಮೆಲ್ಲರ ಹುರುಪನ್ನು ಇಮ್ಮಡಿಗೊಳಿಸಿತ್ತು. ೧.೩೦ ಗಂಟೆಯ ಧೀರ್ಘ ಸ್ನಾನದ ನಂತರ ಎಲ್ಲರೂ ಊಟಕ್ಕೆ ಅಣಿಯಾದೆವು. ಬಂಡೆಗಳ ಮೇಲೆ ಜೊತೆಯಾಗಿ ಕುಳಿತು ಸೇವಿಸಿದ ಚಪಾತಿ-ಮೊಸರವಲಕ್ಕಿ-ಶರಬತ್ ಹೊಟ್ಟೆಯನ್ನು ತಂಪಾಗಿಸಿತ್ತು.

ಹೊಟ್ಟೆ ಭಾರವಾಗಿತ್ತು, ತೀರ್ಥ ಸ್ನಾನದಿಂದ ದಣಿವೆಲ್ಲಾ ಮಾಯವಾಗಿ ಮನಸ್ಸು ಜಡತ್ವ ಕಳಕೊಂಡು ಹಗುರಾಗಿತ್ತು. ಎಲ್ಲರೂ ಬಂಡೆಗಳ ಮೇಲೆ ಮೈಚಾಚಿ ವಿರಮಿಸತೊಡಗಿದೆವು. ಸುತ್ತಲೂ ಸಣ್ಣ ಸಣ್ಣ ಬಂಡೆಗಳ ರಾಶಿ, ಎದುರಿಗೆ ಹಚ್ಚ ಹಸಿರ ಪರಿಸರ, ಹಿಂದುಗಡೆ ಬ್ರಹತ್ ಕೋಟೆಯಂತಿರುವ ಕಲ್ಲುಗುಡ್ಡ, ಅದರ ಮಧ್ಯದಿಂದ ಬೀಳುತ್ತಿರುವ ಗೋವಿಂದ ತೀರ್ಥ. ನಯನಮನೋಹರ!


ಸ್ವಲ್ಪ ಸಮಯ ವಿರಮಿಸಿ, ಪುನಃ ಜಲಪಾತದ ಬುಡಕ್ಕೆ ಬಂದು ನೀರಿನಡಿಗೆ ನಿಂತೆವು. ಅರ್ಧ ಗಂಟೆ ನೀರಿನಲ್ಲಿ ತೊಯ್ದಾಡಿ, ಹೊರ ಬಂದು, ಬಟ್ಟೆ ಬದಲಿಸಿ, ತಂದಿದ್ದ ಸಾಮಗ್ರಿಗಳನ್ನು ಚೀಲಗಳಿಗೆ ತುಂಬಿಕೊಂಡು ವಾಪಸ್ಸು ಹೊರಡಲು ಅಣಿಯಾದೆವು.


ಇಳಿಯುತ್ತಾ ಇಳಿಯುತ್ತಾ ಸಾಗಬೇಕಾದುದರಿಂದ ಕಾಲುಗಳ ಮೇಲೆ ಭಾರ ಹೆಚ್ಚಾಗಿ ಕಾಲು ಸಣ್ಣದಾಗಿ ನೋಯುತ್ತಿತ್ತು. ಸರಿಯಾಗಿ ಗ್ರಿಪ್ ಕೂಡಾ ಸಿಗುತ್ತಿರಲಿಲ್ಲ. ಮಧ್ಯೆ ಮಧ್ಯೆ ಕುಳಿತು, ಸ್ವಲ್ಪ ಹೊತ್ತು ಮಿರಮಿಸಿ ಕ್ವಾಲಿಸ್ ಇದ್ದ ಜಾಗ ತಲುಪಿದೆವು. ಮುದೂರಿನಿಂದ ಜಡ್ಕಲ್ ಮಾರ್ಗವಾಗಿ ಸಂಜೆ ೫.೩೦ ಗೆ ನೆಂಪು ತಲುಪಿದೆವು.

ನಿಸರ್ಗದ ಮಡಿಲಲ್ಲಿ ಕಳೆದ ಸ್ವಲ್ಪ ಸಮಯ ಪುನಃ ಯಾಂತ್ರಿಕ, ಬ್ಯುಸಿ ಶೆಡ್ಯೂಲ್ ಗಳನ್ನು ಎದುರಿಸಲು ಮೈಮನಸ್ಸನ್ನು ಸಜ್ಜುಗೊಳಿಸಿತ್ತು!

ಚಿತ್ರಗಳು: ನೆಂಪು ಗುರು
-o-