Thursday, January 24, 2008

Sanchara:: Hampi - Hospet ~ part 01

ಹಂಪಿ

ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತದೆ.

ಹಂಪಿಯ ಬಗ್ಗೆ ತಿಳಿದಿರದವರು ಬಹುಶಃ ಬಹು ವಿರಳ. ಚಿಕ್ಕಂದಿನಿಂದಲೇ ಇತಿಹಾಸದ ಪಾಠಗಳಲ್ಲಿ ಹಂಪಿಯ ಬಗ್ಗೆ ಎಲ್ಲರೂ ಓದಿರುತ್ತಾರೆ. ಆದರೆ, ಹಂಪಿಗೆ ಭೇಟಿ ನೀಡಿ, ಅಲ್ಲಿನ ಕಲ್ಲು ಕಲ್ಲಿಗೂ ಕಿವಿ ಆಲಿಸಿ, ಅದರ ಕಥೆ ಕೇಳಿ, ಅಲ್ಲಿರುವ ಅವಶೇಷಗಳನ್ನು ನೋಡಿ, ವಿಜಯನಗರದ ವೈಭವವನ್ನು ಊಹಿಸಿಕೊಂಡು, ಇಂದಿನ ಹಾಳುಹಂಪೆಯ ಸ್ಥಿತಿಗತಿಗಳನ್ನು ನೋಡಿ ಮರುಕಪಟ್ಟವರು... ತುಂಬಾ ಮಂದಿ ಇರಲಿಕ್ಕಿಲ್ಲ?


ನಾನು ಹಂಪೆಯ ಬಗ್ಗೆ ತುಂಬಾ ಕೇಳಿದ್ದೆ, ಓದಿದ್ದೆ. ಅಲ್ಲಿನ ಅವಶೇಷಗಳನ್ನು ಕಣ್ಣಾರೆ ನೋಡಬೇಕು ಎಂಬುದು ಬಹುದಿನದ ಕನಸಾಗಿತ್ತು. ಅದರಲ್ಲೂ ಖ್ಯಾತ ಸಾಹಿತಿಯೊಬ್ಬರ "ವಿಜಯನಗರದ ಉಚ್ಛ್ರಾಯ ದಿನಗಳ ವೈಭವವನ್ನು ಊಹಿಸಿಕೊಂಡು ಹಂಪಿಯ ಅವಶೇಷಗಳನ್ನು ಹೃದಯದಿಂದ ನೋಡಬೇಕು" ಎಂಬ ಮಾತುಗಳನ್ನು ಕೇಳಿದಮೇಲಂತೂ ಹಂಪಿಗೆ ಹೋಗಲೇಬೇಕು ಎಂದು ನಿರ್ಧರಿಸಿದ್ದೆ. ಅಂತೆಯೇ ನಮ್ಮ ಬಳಗದವರ ಮುಂದೆ ಪ್ರಸ್ತಾಪಿಸಿದ್ದೆ. ಎಲ್ಲರೂ ದನಿಗೂಡಿಸಿದ್ದರಿಂದ "ಹಂಪಿ-ಹೊಸಪೇಟೆ" ಪ್ರವಾಸದ ಕನಸು ಶ್ರೀ ಕೊಲ್ಲೂರು ಗಿರೀಶ್ ಭಟ್ ರ ಸಂಪೂರ್ಣ ನೆರವಿನಿಂದಾಗಿ ಕಳೆದ ಸೆಪ್ಟೆಂಬರ್ ನಲ್ಲಿ ನನಸಾಯಿತು. ನಮ್ಮ ಪ್ರವಾಸದ ನೆನಪುಗಳನ್ನು ಮೆಲಕುಹಾಕುತ್ತಾ, ಹಂಪಿಯ ಬಗ್ಗೆ internetನಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಸೇರಿಸಿ ಬರೆದ ಪ್ರವಾಸಕಥನ ಈ "ಸಂಚಾರ" ಮಾಲಿಕೆಯಲ್ಲಿದೆ.


ಶ್ರೀ ವಿದ್ಯಾರಣ್ಯ ಸ್ವಾಮಿಗಳು ಹಕ್ಕ-ಬುಕ್ಕರ ನೆರವಿನಿಂದ ೧೩೩೬ ರಲ್ಲಿ ನಿರ್ಮಿಸಲ್ಪಟ್ಟ ಸಾಮ್ರಾಜ್ಯ "ವಿಜಯನಗರ". ಇವರುಗಳು ಹಾಕಿದ ಭದ್ರ ಅಡಿಪಾಯದಿಂದಾಗಿ "ವಿಜಯನಗರ" ಸಾಮ್ರಾಜ್ಯವು ವಿಸ್ತರಿಸುತ್ತಾ ವಿಸ್ತರಿಸುತ್ತಾ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಇಡೀ ದಕ್ಷಿಣ ಭಾರತವನ್ನೇ ಆವರಿಸಿಕೊಂಡಿತು. ಹಿಂದೂ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಕಲೆ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಾ, ದಕ್ಷ ಆಡಳಿತವನ್ನು ನೀಡಿದ್ದು ವಿಜಯನಗರದ ಉನ್ನತಿಗೆ ಕಾರಣವಾಯಿತು. ಅಲ್ಲಲ್ಲಿ ಹರಿದುಹಂಚಿಹೋಗಿದ್ದ, ತಮ್ಮತಮ್ಮಲ್ಲೇ ಹೊಡೆದಾಡುತ್ತಾ ಸಣ್ಣ ಸಣ್ಣ ಸಂಸ್ಥಾನಗಳನ್ನು ನಿರ್ಮಿಸಿಕೊಂಡು ರಾಜ್ಯಾವಾಳುತ್ತಿದ್ದ ಅದೆಷ್ಟೋ ತುಂಡರಸರುಗಳನ್ನು ತಮ್ಮ ಸಾಮಂತರನ್ನಾಗಿಸಿಕೊಂಡು ಒಗ್ಗಟ್ಟಾಗಿ ಬೃಹತ್ ಸಾಮ್ರಾಜ್ಯ ನಿರ್ಮಿಸಿದ್ದು ಭಾರತದ ಇತಿಹಾಸದ ಪುಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಒಂದು ಅಧ್ಭುತ ಯಶೋಗಾಥೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಅತ್ಯಂತ ಸಂಪಧ್ಬರಿತವಾಗಿತ್ತು ವಿಜಯನಗರ. ವಜ್ರವೈಢೂರ್ಯಾದಿಯಾಗಿ ಚಿನ್ನಾಭರಣಗಳನ್ನು ಸೇರುಗಟ್ಟಲೆ, ವಿಜಯನಗರದ ಬೀದಿ ಬೀದಿಗಳಲ್ಲಿ ಮಾರುತ್ತಿದ್ದ ಕಾಲವದು. ತುಂಗಭದ್ರಾ ನದಿ ದಂಡೆಯಲ್ಲಿ ತಲೆಯೆತ್ತಿ ನಿಂತ ವಿಜಯನಗರದ ಕೀರ್ತಿಪತಾಕೆಯು ಬರೀ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಹರಡಿತ್ತು. ಕಲ್ಲುಬಂಡೆಗಳನ್ನು ತಿದ್ದಿತೀಡಿ ನಿರ್ಮಿಸಿರುವ, ಶಿಲ್ಪಕಲಾ ವೈಭವನ್ನೂ ಸಾರುವ, ಸುಂದರ ದೃಶ್ಯಕಾವ್ಯಗಳು ವಿಜಯನಗರದ ಔನ್ನತ್ಯಕ್ಕೆ ಸಾಕ್ಷಿಯಾಗಿ ಇಂದಿಗೂ ಅಚ್ಚಳಿಯದೆ ನಿಂತಿವೆ.

ಇಂಥಾ ವಿಜಯನಗರವು ಮೊಗಲರ ನಿರಂತರ ದಾಳಿಗೆ ತುತ್ತಾಗಿ, ಕಾಲನ ಸೆರೆಗೆ ಸಿಕ್ಕಿ ಛಿದ್ರ ಛಿದ್ರವಾಗಿ ಹಾಳು ಹಂಪೆಯಾದದ್ದು ಮಾತ್ರ ಒಂದು ದುರಂತ ಕಥೆ. ೧೫೫೬ ಹೊತ್ತಿಗೆ ವಿಜಯನಗರ ಸಾಮ್ರಾಜ್ಯವು ಸಂಪೂರ್ಣ ಅವನತಿ ಹೊಂದಿ ಭಗ್ನಾವಶೇಷಗಳನ್ನು ತುಂಬಿಕೊಂಡು ಇತಿಹಾಸದ ಪುಟಗಳಲ್ಲಿ ಸೇರಿ ಹೋಯಿತು.


ಈ ಹಂಪೆ ಪರಿಸರಕ್ಕೆ ಇನ್ನೊಂದು ಇತಿಹ್ಯವೂ ಇದೆ. ರಾಮಾಯಣ ಮಹಾಕಾವ್ಯದಲ್ಲಿ ಬರುವ "ಕಿಷ್ಕಿಂಧಾ" ನೆನಪಿದೆಯೇ? ವಾನರ ಸೈನ್ಯದ ಸಾಮ್ರಾಜ್ಯವಾಗಿತ್ತು ಕಿಷ್ಕಿಂಧಾ. ಶ್ರೀರಾಮ ಸೀತೆಯನ್ನರಸುತ್ತಾ ಇಲ್ಲಿಗೆ ಬಂದದ್ದು, ಹನುಮಂತ-ಸುಗ್ರೀವರನ್ನು ಸಂದಿಸಿದ್ದು, ವಾಲಿ-ಸುಗ್ರೀವರ ಕಾಳಗ, ಶ್ರೀರಾಮನ ನೆರವಿನಿಂದ ಸುಗ್ರೀವ ವಾಲಿಯನ್ನು ಸೋಲಿಸಿ ವಾನರಾಧಿಪತಿಯಾಗಿದ್ದು, ವಾನರ ಸೈನ್ಯದ ನೆರವಿನಿಂದ ಲಂಕೆ ಸೇರಿದ್ದು.... ಹೀಗೆ ರಾಮಾಯಣದಲ್ಲಿ "ಕಿಷ್ಕಿಂಧಾ ಕಾಂಡ"ವೇ ಇದೆ. ಈಗಿನ ಹಂಪೆಯೇ ರಾಮಾಯಣದ ಕಿಷ್ಕಿಂಧಾ ಎಂಬುದಕ್ಕೆ ಪುರಾವೆಯೋ ಎಂಬಂತೆ ಕಿಷ್ಕಿಂಧಾ ಗುಡ್ಡ, ಸುಗ್ರೀವ ಗುಹೆ, ಆಂಜನೇಯ ಗುಡಿ, ಆಂಜನೇಯ ಗುಡ್ಡ ಇನ್ನೂ ಅನೇಕ ಸ್ಥಳಗಳು ಇಲ್ಲಿವೆ. ಹೀಗೆ ಹಂಪೆ ಅದೆಷ್ಟೋ ರಹಸ್ಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಅದಕ್ಕೆ "ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತದೆ" ಎಂದು ನನ್ನ ಲೇಖನ ಆರಂಭಿಸಿದ್ದು.

ಇದಿಷ್ಟು ಪೀಠಿಕೆಯಾಯಿತು. ಇನ್ನು ಪ್ರವಾಸ ಹೊರಡೋಣ!

ಕಳೆದ ಜುಲೈ ತಿಂಗಳಿಂದಲೇ ನಾವೊಂದಿಷ್ಟು ಜನ ಹಂಪಿ, ಹಂಪಿ ಎಂದು ಜಪಿಸುತ್ತಾ ಟೂರ್ ಬಗ್ಗೆ ಸಿದ್ಧತೆಗಳನ್ನು ಮಾಡಲಾರಂಭಿಸಿದ್ದೆವು. ಪ್ರತೀ ವಾರಾಂತ್ಯವೂ ಒಂದಿಲ್ಲೊಂದು ತಾಪತ್ರಯದಿಂದ ಹೊರಡುವ ದಿನ ಮುಂದೆ ಹೋಗುತ್ತಾ ಹೋಗುತ್ತಾ ಕೊನೆಗೂ ಸೆಪ್ಟೆಂಬರ್ ಮೊದಲವಾರಾಂತ್ಯಕ್ಕೆ (ಸೆ. 1-2) ನಿಗದಿಯಾಯಿತು. ಎಂದಿನಂತೆ ರಾಘು ಅಣ್ಣ ನಮ್ಮ tour manager, ನಾನವನ assistant. ನಾನಾಗಲೇ ’ಗೂಗಲಿಸಿ’ ಹಂಪಿ ಬಗ್ಗೆ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದ್ದೆ (ಹಿಂದೊಮ್ಮೆ ಹೀಗೆ ಒಟ್ಟಿಗೆ ಬೇಕಲಕೋಟೆ, ಮಧೂರಿಗೆ ಹೋಗಿದ್ದಾಗ ನನ್ನ online ಪಟ್ಟಿಯಲ್ಲಿ ಕಾಣುತ್ತಿದ್ದ ’ಮೈಪಾಡಿ ಅರಮನೆ’ ಹುಡುಕಿ ಹೊರಟು, ಕೊನೆಗೆ ಅದು ಯಾರಿಗೋ ಸೇರಿದ್ದ ಮನೆಯಾಗಿದ್ದು, ಒಳ ಹೊಕ್ಕಾಗ ಭೂತಾಕಾರಾದ ನಾಯಿಗಳು ನಮ್ಮನ್ನಟ್ಟಿಸಿಕೊಂಡು ಬಂದು ನಾವು ಪೇಚಿಗೆ ಸಿಲುಕಿತ್ತು. ನಂತರದ ಪ್ರವಾಸಗಳಲ್ಲಿ ಈ ತರಹದ ಪಟ್ಟಿ ತಯಾರಿಸುವಾಗ ನಾನು ಹೆಚ್ಚು ಜಾಗ್ರತನಾಗಿರುತ್ತಿದ್ದುದು ಸುಳ್ಳಲ್ಲ). ಎಲ್ಲಾ ಸಿದ್ಧತೆಗಳು ಶುರುವಾಯಿತು.

ಒಂದಿಷ್ಟು ಜನ ಶುಕ್ರವಾರ (ಆ. 31) ಮಧ್ಯಾಹ್ನ ನಮ್ಮ ಎಂದಿನ ’ಟೆಂಪೊ ಟ್ರಾವಲರ್"ನಲ್ಲಿ ಉಡುಪಿಯಿಂದ ಹೊರಟು ಕುಂದಾಪುರ, ಹುಲಿಕಲ್ ಘಾಟಿ, ಹೊಸನಗರ ಮಾರ್ಗವಾಗಿ ಹೆಗ್ಗೋಡಿನಲ್ಲಿ "ಅಕ್ಕ-ಭಾವ-ವಿಭಾ"ರನ್ನೂ ಸೇರಿಸಿಕೊಂಡು ಹೊನ್ನಾಳಿ, ಹರಿಹರ ಮಾರ್ಗವಾಗಿ ರಾತ್ರಿ 11 ಗಂಟೆಯೊಳಗೆ ಹೊಸಪೇಟೆ ತಲಪುವುದೆಂದು ನಿಗದಿಯಾಯಿತು. ನಾವೊಂದಿಷ್ಟು ಜನ ’ಬೆಂಗಳೂರು ಹುಡುಗರು’ ಮೆಜಸ್ಟಿಕ್ನಿಂದ ರಾತ್ರಿ ಹೊರಡುವ ’ರಾಜಹಂಸ’ ಹಿಡಿದು ಶನಿವಾರ (ಸೆ. 1) ಬೆಳಿಗ್ಗೆ ಹೊಸಪೇಟೆ ತಲಪುವ ಪ್ಲಾನ್ ಹಾಕಿ ಮುಂಗಡ ಟಿಕೆಟ್ ಕಾಯ್ದಿರಿಸಿದೆವು. ಬೆಂಗಳೂರಿಂದ ಹೊಸಪೇಟೆಗೆ "ಹಂಪಿ ಎಕ್ಸಪ್ರೆಸ್" ಟ್ರೈನ್ ಇದೆ. ಆದರೆ ಅದು ತಳಕುತ್ತಾ, ಬಳಕುತ್ತಾ ವೈಯಾರದಿಂದ ಹೊಸಪೇಟೆ ತಲಪುವಾಗ ಮಧ್ಯಾಹ್ನವಾಗಬಹುದು ಎಂಬ ಭಯದಿಂದ ’ರಾಜಹಂಸ’ವನ್ನು ಆಯ್ದುಕೊಂಡೆವು.


ಶುಕ್ರವಾರ (ಆ. 31) ಬಂತು. ಎಲ್ಲಾ ಸಿದ್ಧತೆಗಳು ಮುಗಿದಿದ್ದವು. ಆದರೆ ನಮ್ಮ tour manager ರಾಘು ಅಣ್ಣ ತೀವ್ರ ಜ್ವರದಿಂದ ಬಳಲುತ್ತಿರುವ ಸುದ್ದಿ ನಮ್ಮೆಲ್ಲರ ಉತ್ಸಾಹಕ್ಕೂ ತಣ್ಣೀರೆರಚಿತ್ತು. ’ನಿರು’ ಕೂಡಾ ರಜೆ ಸಿಗದ ಕಾರಣ ಹಿಂದೆ ಸರಿದುಬಿಟ್ಟ. ಟೂರ್ ಮುಂದೂಡುವ ಹಂತಕ್ಕೆ ಬಂದಿತ್ತು. ಕೊನೆಗೆ ರಾಘು ಅಣ್ಣನೇ ನಮ್ಮೆಲ್ಲರಿಗೂ ಧೈರ್ಯ ತುಂಬಿ, ನೀವೆಲ್ಲಾ ಹೋಗಿ ಬನ್ನಿ, ಪುನಃ ಮುಂದೂಡುವುದು ಬೇಡ ಎಂದಾಗ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದೆವು. ಮಧ್ಯಾಹ್ನ ೩ ಗಂಟೆಗೆ ’ದಿನು ಅಣ್ಣ’ನಿಂದ "ಟೆಂಪೊಟ್ರಾವಲರ್ ಹಿಡಿದು ಹೊರಟಿದ್ದೇವೆ" ಎಂಬ ಸುದ್ದಿ ಬಂದಾಗಲೇ ಹಂಪಿಗೆ ಹೋಗುವುದು ಖಾತ್ರಿಯಾದದ್ದು. ನಾವು ಬೆಂಗಳೂರು ಹುಡುಗರೂ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಮೆಜಸ್ಟಿಕ್ ತಲುಪಿ ’ರಾಜಹಂಸ’ದ ಮಳೆನೀರಿಂದ ತೊಯ್ದ ಆಸನದ ಮೇಲೆ ಪ್ಲಾಸ್ಟಿಕ್ ಹಾಸಿ ಕೂತು ನಮ್ಮ ಪ್ರಯಾಣ ಬೆಳೆಸಿ, ಮಾರ್ಗ ಮಧ್ಯೆ ಬಸ್ ಕೆಟ್ಟು ಬೇರೆ ಬಸ್ ಹಿಡಿದು, ಮರುದಿನ ಬೆಳಿಗ್ಗೆ ಹೊಸಪೇಟೆ ತಲಪಿದೆವು. ಊರಿಂದ ಹೊರಟವರು ಘಟ್ಟದ ಜಡಿಮಳೆಗೆ ಸಿಲುಕಿದರೂ ಯಾವುದೇ ತೊಂದರೆ ಇಲ್ಲದೆ ಮಧ್ಯರಾತ್ರಿ ಹೊಸಪೇಟೆ ತಲಪಿದರು. ಒಟ್ಟು ೧೫ ಜನ (ಪುಟ್ಟ ಅಮೋಘ, ವಿಭಾ ಸೇರಿ).

ನಮ್ಮ "ಹೊಸಪೇಟೆ-ಹಂಪಿ" ಪ್ರವಾಸದ ಮುಂದಿನ ಎಲ್ಲಾ ಸಿದ್ಧತೆಗಳನ್ನು ಮಾಡಿಸಿಕೊಟ್ಟವರು ನಮ್ಮ ಬಂಧುಗಳಾದ ಶ್ರೀ ಕೊಲ್ಲೂರು ಗಿರೀಶ್ ಭಟ್. ಇವರು ಹೊಸಪೇಟೆಯ ಸೆಷನ್ಸ್ ಕೋರ್ಟ್ ನಲ್ಲಿ ಜಡ್ಜ್. ಇವರಿಂದಾಗಿ ನಮಗೆ ತುಂಗಭದ್ರಾ ಜಲಾಶಯ (T.B. Dam) ಗೆಸ್ಟ್ ಹೌಸ್ ನಲ್ಲಿ ಒಂದು ಕೊಠಡಿ ಲಭ್ಯವಾಯಿತು, ಇನ್ನೊಂದು ಕೊಠಡಿ ಹೊಟೆಲ್ ಮೈಯೂರದಲ್ಲಿ ಸಿಕ್ಕಿತು. ಹಂಪಿ ಸುತ್ತಿಸಲು ಗೈಡ್, T.B. Dam ಒಳಹೋಗಲು ಅನುಮತಿ... ಎಲ್ಲಾ ವ್ಯವಸ್ಥೆಗಳು ಗಿರೀಶ್ ಅವರು ಮೊದಲೇ ಮಾಡಿಸಿಟ್ಟಿದ್ದರು. ಒಂಥರಾ VIP treatment! ನಮ್ಮ ಉತ್ಸಾಹವನ್ನು ಇಮ್ಮಡಿಯಾಗಿಸಿತ್ತು.


ಬೇರೆಡೆ ಬಿದ್ದ ವಿಪರೀತ ಮಳೆಯಿಂದಾಗಿ ತುಂಗಭದ್ರಾ ನದಿ ಭರ್ತಿಯಾಗಿ T.B. Dam ತುಂಬಿ ತುಳುಕುತ್ತಿತ್ತು. ಡ್ಯಾಂ ದಂಡೆಯಲ್ಲೆ ನಮ್ಮ ಕೊಠಡಿ. ಎದುರಿಗೆ ಕಣ್ಣು ಹಾಯಿಸಿದಷ್ಟೂ ಬರೀ ನೀರು, ವಿಪರೀತ ಗಾಳಿ, ಅಲೆಗಳು ದಂಡೆಗಪ್ಪಳಿಸಿ ಉಂಟಾಗುವ ’ರಪ್ ರಪ್’ ಸದ್ದು. ನಮಗೆ ಬಯಲುಸೀಮೆಯಲ್ಲೂ ಸಮುದ್ರದ ದಂಡೆ ಮೇಲೆ ನಿಂತಂತಾಗಿತ್ತು!!! ಸ್ವಲ್ಪ ದೂರದಲ್ಲೇ ಡ್ಯಾಂನ ಮುಖ್ಯ ಗೇಟ್. ನಾನಾಗಲೇ ಕ್ಯಾಮರಾ ಹಿಡಿದು ಓಡಾಡಲು ಶುರುಮಾಡಿದ್ದೆ.

ಬೆಳಿಗ್ಗೆ 8.30ಕ್ಕೆ ಎಲ್ಲರೂ ಸಿದ್ಧರಾಗಿ ಹಂಪಿಗೆ ಹೊರಡಲು ಟ್ರಾವಲರ್ ಹತ್ತಿದೆವು. ನಮ್ಮ ಬಳಗ ಒಂದಾಗಿತ್ತು, ನಮ್ಮ ಟೂರ್ ಶುಭಾರಂಭವಾಗಿತ್ತು.

(ಮುಂದುವರಿಯುವುದು...)

Tuesday, January 22, 2008

Sanchara:: Tour experience

ಸಂಚಾರ

ಕನ್ನಡದಲ್ಲಿ "ದೇಶ ನೋಡು, ಕೋಶ ಓದು" ಎಂಬ ಒಂದು ನಾಣ್ಣುಡಿ ಇದೆ. ನಮ್ಮ ಬಿಡುವಿನಲ್ಲಿ ಗ್ರಂಥಗಳನ್ನು ಓದಿ ಜ್ಞಾನ ವರ್ಧಿಸಿಕೊಳ್ಳುವಂತೆ, ದೇಶಸಂಚಾರ ಹೋಗುವುದರಿಂದಲೂ ನಮ್ಮ ಜ್ಞಾನ ವರ್ಧಿಸಿಕೊಳ್ಳಬಹುದು ಎಂಬ ಸಂದೇಶವನ್ನು ಈ ನಾಣ್ಣುಡಿ ತಿಳಿಸುತ್ತದೆ. ಎಷ್ಟು ಅರ್ಥಗರ್ಭಿತವಾಗಿದೆಯಲ್ಲಾ? ನಮ್ಮ ಸುತ್ತಲ ಪ್ರದೇಶಗಳಿಗೆ ಆಗಾಗ ಭೇಟಿನೀಡುವುದರಿಂದ ಆ ಪ್ರದೇಶದ ಜನಜೀವನದ ಬಗ್ಗೆ, ಭೌಗೋಳಿಕ-ಸಾಮಾಜಿಕ-ಸಾಂಸ್ಕೃತಿಕ ವಿಶೇಷತೆಯ ಬಗ್ಗೆ, ಅಲ್ಲಿರುವ ಗಿಡ-ಮರ-ಪ್ರಾಣಿ-ಪಕ್ಷಿಗಳ ಬಗ್ಗೆ, ಹೀಗೆ ಅದೆಷ್ಟೊ ಬಗೆಯ ವಿಷಯಗಳು ನಮ್ಮರಿವಿಗೆ ಬರುತ್ತದೆ. ಅಷ್ಟೇ ಅಲ್ಲ, ನಮ್ಮ ದಿನಗೆಲಸದ ಏಕತಾನತೆಯಿಂದ ಹೊರಬರಲು ಅತಿಮುಖ್ಯವಾದ break ದೊರೆಯುತ್ತದೆ. ಅದರಲ್ಲೂ ಕರ್ತವ್ಯ ನಿಮಿತ್ತ ದೂರದೂರಲ್ಲಿ ನೆಲೆಸಿರುವ ನಮ್ಮ ಪ್ರೀತಿಪಾತ್ರರೆಲ್ಲಾ ಒಟ್ಟಾಗಿ tour, picnic ಹಮ್ಮಿಕೊಂಡರೆ? ಅದರ ಗಮ್ಮತ್ತೇ ಬೇರೆ!


ಕೇರಳದ "ಮುನ್ನಾರ್"ಗೊಂದು ಭೇಟಿ...

ನಮ್ಮ ನೆಂಪು ಬಳಗದವರೆಲ್ಲಾ ಜತೆಗೂಡಿ ವರ್ಷಕ್ಕೊಂದು ಅಥವಾ ಎರಡು ಬಾರಿ ಪ್ರೇಕ್ಷಣೀಯ ಸ್ಥಳಗಳಿಗೆ ಪಿಕ್ನಿಕ್, ಟೂರ್ ಹಮ್ಮಿಕೊಳ್ಳುವುದು ಹಲವು ವರ್ಷಗಳಿಂದ ಸಂಪ್ರದಾಯದಂತೆ ನಡಕೊಂಡು ಬಂದಿದೆ. ಈಗಾಗಲೇ ನಾವು ಕೊಡಚಾದ್ರಿ ಶಿಖರ; ಬೈಂದೂರು ಸಮೀಪದ ಕೂಸಳ್ಳಿ ಜಲಪಾತ, ಮುರ್ಡೇಶ್ವರ, ಮರವಂತೆ; ಜೋಗ ಜಲಪಾತ, ಸಾಗರ ಸಮೀಪದ ಇಕ್ಕೇರಿ, ಹೆಗ್ಗೋಡು, ಮಾಸ್ತಿಕಟ್ಟೆ; ಒಂದೇ ಹೆಬ್ಬಂಡೆಯನ್ನು ಕೊರೆದು ನಿರ್ಮಿಸಿರುವ "ವಾರಾಹಿ ಜಲವಿದ್ಯುದಾಗರ"; ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ; ತಿರುಪತಿ, ಶ್ರೀಕಾಳಹಸ್ತಿ; ಕೇರಳದ ಮುನ್ನಾರ್, ಗುರುವಾಯೂರು, ಬೇಕಲಕೋಟೆ, ಮಧೂರು, ಅನಂತಪುರ; world heritage site ಪಟ್ಟಿಯಲ್ಲಿ ಮನ್ನಣೆ ಪಡೆದಿರುವ "ಹಂಪಿ", ಹೊಸಪೇಟೆಯ ತುಂಗಭದ್ರಾ ಜಲಾಶಯ ಮುಂತಾದ ಸ್ಥಳಗಳಿಗೆ ಯಶಸ್ವಿಯಾಗಿ ಟೂರ್ ಹೋಗಿಬಂದಿದ್ದೇವೆ.

ಇಷ್ಟೇ ಅಲ್ಲ... ನಮ್ಮಲ್ಲಿ ಕೆಲವರು ಸೂರತ್, ಹೈದರಾಬಾದ್, ಮುಂಬೈ, ದೆಹಲಿ, ಆಗ್ರಾ, ಜೈಪುರ, ಹರಿದ್ವಾರಗಳಿಗೂ ಹೋಗಿಬಂದಿದ್ದಾರೆ. ನಮ್ಮ "ವಿಶು ಅಣ್ಣ" ಅಮೇರಿಕಾ, ಕೆನಡಾ, ತೈವಾನ್, ಜಪಾನ್, ಕೊರಿಯಾ, ಸಿಂಗಾಪುರ ಇತ್ಯಾದಿ ದೇಶಗಳನ್ನು ಕೆಲಸದ ಸಲುವಾಗಿ ಸುತ್ತುತ್ತಲೇ ಇರುತ್ತಾರೆ. "ಹರೀಶ ಅಣ್ಣ ದಂಪತಿ"ಗಳೂ ಉತ್ತರ ಅಮೇರಿಕಾದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ನಮ್ಮ "ನ.ಭ.ನೆಂಪು"ರವರು "ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ"ಯನ್ನು ರಾಷ್ಟ್ರಪತಿಯವರಿಂದ ಪಡೆಯಲು ದೆಹಲಿಯ ರಾಷ್ಟ್ರಪತಿ ಭವನ, ಕೆಂಪುಕೋಟೆಗೂ ಭೇಟಿ ನೀಡಿದ್ದಾರೆ. ನನಗೂ ನನ್ನ ಸ್ನೇಹಿತರಿಂದಾಗಿ ಉಡುಪಿ ಆಸುಪಾಸಿನ ಕೂಡ್ಲುತೀರ್ಥ, ಜೋಮ್ಲುತೀರ್ಥ, ಕೊಲ್ಲೂರು ಸಮೀಪದ "ಅರಸಿನ ಗುಂಡಿ" ಜಲಪಾತ, ಬೆಳ್ತಂಗಡಿ ದಿಡುಪೆಯ "ಅರ್ಬಿ", ಚಾರ್ಮಾಡಿ ಘಾಟಿಯಲ್ಲಿರುವ "ಅಲೇಕಾನ್" ಜಲಪಾತ, ಹನುಮನಗುಂಡಿ... ಸಕಲೇಶಪುರ ಸಮೀಪದ "ಎಡಕುಮೇರಿ" railway track ಮೇಲೆ 25 ಕಿ.ಮಿ. ಟ್ರೆಕ್ಕಿಂಗ್... ಜೋಗದ ಗುಂಡಿ ಇಳಿಯುವ, ಜೋಗ ಫಾಲ್ಸ್ "ರಾಜ"ನ ತಲೆಯಿಂದ ಕಣಿವೆ ವೀಕ್ಷಿಸುವ... ಮಾಸ್ತಿಕಟ್ಟೆಯ ಮಾಣಿ ಡ್ಯಾಂ, ಕುದುರೆಮುಖದ ಲಕ್ಯಾ ಡ್ಯಾಂ, ಕೊಡಗಿನ ಹಾರಂಗಿ ಡ್ಯಾಂ, ಮೈಸೂರಿನ KRS ಡ್ಯಾಂ, ಶಿಂಸಾ ಡ್ಯಾಂ, ಹೊಸಪೇಟೆಯ ತುಂಗಭದ್ರಾ ಡ್ಯಾಂ... ಗೋಕರ್ಣದ ಓಮ್ ಬೀಚ್, ಹೊನ್ನಾವರ ಬೀಚ್, ಮರವಂತೆ, ಮಲ್ಪೆ, ಕಾಪು, ಬೆಂಗ್ರೆ ಬೀಚ್... ಶಿರಸಿ ಸಮೀಪದ ಪ್ರಸಿದ್ಧ "ಯಾಣ", ಕುದುರೆಮುಖ, ಬೆಳ್ತಂಗಡಿ ಸಮೀಪದ "ಗಡಾಯಿ ಕಲ್ಲು (ಜಮಾಲಾಬಾದ್ ಕೋಟೆ)"... ಕೊಡಗಿನ ಮಡಿಕೇರಿ, ಅಬ್ಬಿ, ಕುಶಾಲನಗರ, ಟಿಬೆಟ್ ಕ್ಯಾಂಪ್, ದುಬಾರೆ ರೆಸಾರ್ಟ್, ನಿಸರ್ಗ ಧಾಮ, ತಲಕಾವೇರಿ... ಕಾರ್ಕಳ-ಮೂಡಬಿದ್ರೆಯ ಹಲವಾರು ಸ್ಥಳಗಳು... ಚಾಮರಾಜನಗರ ಸಮೀಪದ "ಬಿಳಿಗಿರಿ ರಂಗನ ಬೆಟ್ಟ (BR Hills)" ಅಲ್ಲಿನ ಕಾಡಿನಲ್ಲಿರುವ "ಸೋಲಿಗರು", ಅವರ ಗುಡಿಸಲು, ಅವರ ಹಾಡಿ... ಬಂಡೀಪುರ ಸಮೀಪದ "ಗೋಪಾಲ ಸ್ವಾಮಿ ಬೆಟ್ಟ", ಅಲ್ಲಿನ reserve forest trekking... ಶಿವನಸಮುದ್ರ, ಭರಚುಕ್ಕಿ ಜಲಪಾತ, ತಲಕಾಡು... ತಮಿಳುನಾಡಿನ ಊಟಿ, ಕೂನೂರು, ಅಲ್ಲಿಯ ಚಹಾ ಎಸ್ಟೇಟ್, ಪ್ರಸಿದ್ಧ "toy train" ಸವಾರಿ... ಹೀಗೆ ಹಲವು ಸ್ಥಳಗಳನ್ನು ನೋಡುವ ಸುವರ್ಣಾವಕಾಶ ಲಭಿಸಿದೆ. ಚಿಕ್ಕಂದಿನಲ್ಲಿ ಅಪ್ಪ-ಅಮ್ಮ ಜೊತೆ ರಾಮೇಶ್ವರ, ಧನುಷ್ಕೋಡಿ, ಮಧುರೈ, ಶಿವಕಾಶಿ, ಕನ್ಯಾಕುಮಾರಿ, ತಿರುವನಂತಪುರ ದರ್ಶನವೂ ಆಗಿದೆ. ಒಂದೊಂದು ಪ್ರವಾಸವು ಮರೆಯಲಾರದ ಸಂತೋಷವನ್ನ, ಅನುಭವಗಳನ್ನ, ನೆನಪುಗಳ ಮೂಟೆಯನ್ನ ನೀಡುತ್ತಿರುತ್ತದೆ.

ಹೀಗೆ ಜೊತೆಗೂಡಿ ಟೂರ್ ಹೋಗುವುದು ಅಷ್ಟು ಸುಲಭದ ಮಾತೇನಲ್ಲ. ಬಿಡುವಿಲ್ಲದ ಕೆಲಸದಲ್ಲಿ ಮುಳುಗಿರುವ, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಎಲ್ಲರನ್ನು ಒಟ್ಟಾಗಿಸುವುದೇ ದೊಡ್ಡ ಕೆಲಸ. ಎಲ್ಲರಿಗೂ ರಜೆಯ ಹೊಂದಾಣಿಕೆಯಾಗಬೇಕು, 2-3 ದಿನ ಮನೆಬಿಟ್ಟಿರಲು ಅನುಕೂಲವಾಗಿರಬೇಕು, ಬೇರೆ ಬೇರೆ ಅಡೆತಡೆಗಳು. ಕೊನೆಗೆ ಹಲವು "tele conference"ಗಳಾದ ಬಳಿಕ ದಿನ ನಿಗದಿಗೊಳಿಸುವುದು, ಯಾವ ಸ್ಥಳವೆಂದು ಆರಿಸಿಕೊಳ್ಳುವುದು. ರಜೆಗೆ ತಕ್ಕಂತೆ ಸ್ಥಳಗಳ ಆಯ್ಕೆ. 1-2 ದಿನವಾದರೆ ಹತ್ತಿರದಲ್ಲೇ ಯಾವುದಾದರೂ ಸ್ಥಳಗಳು, 3-4 ದಿನಗಳಾದರೆ ದೂರದ ಊರುಗಳು... ಟೂರ್ ನಿಗದಿಯಾದ ನಂತರ ಹೊರಡುವ ಹುಮ್ಮಸ್ಸಿನಲ್ಲಿ ಉಳಿದ ವ್ಯವಸ್ಥೆಗಳು ಲಗುಬಗನೆ ಸಿದ್ಧಗೊಳ್ಳುತ್ತದೆ. ಪ್ರಯಾಣಕ್ಕೆ ವಾಹನದ ವ್ಯವಸ್ಥೆ, ಉಳಿದುಕೊಳ್ಳಲು ರೂಂ, ನೋಡಬೇಕಾದ ಸ್ಥಳಗಳ ಪಟ್ಟಿ, ದಾರಿಖರ್ಚಿಕೆ ಬೇಕಾಗುವ "ಕುರುಂ ಕುರುಂ" ತಿಂಡಿಗಳು, ಪ್ರವಾಸೀ ಸ್ಥಳದ ಹವಾಗುಣದ ಬಗ್ಗೆ, ಅಲ್ಲಿರುವ ಸಸ್ಯಹಾರಿ ಹೊಟೆಲ್ ಬಗ್ಗೆ ಮಾಹಿತಿ ಇತ್ಯಾದಿ... ಎಲ್ಲಾ ಸಿದ್ಧತೆಗಳ ನಂತರ ನಮ್ಮ ಬಳಗದ ಪ್ರಯಾಣ ಆರಂಭವಾಗುವುದು.


ಹಂಪಿ "ಕಡಲೆಕಾಳು ಗಣೇಶ"ನ ಮುಂದೆ ನಮ್ಮ ಬಳಗ

ಟೂರ್ ಮುಗಿಸಿ ಬಂದಾಗ ಎಲ್ಲರಿಗೂ ನವಚೈತನ್ಯದ ಟಾನಿಕ್ ಸಿಕ್ಕಂತಾಗಿರುತ್ತದೆ. ಮುಂದಿನ ಹಲವು ದಿನಗಳ ವರೆಗೆ "busy schedule" ಎದುರಿಸಲು ಹೊಸ ಹುರುಪು ಬಂದಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಆಪ್ತರೊಂದಿಗೆ ಸುಂದರ ತಾಣಗಳಲ್ಲಿ ಒಂದೆರಡು ದಿನಗಳನ್ನು ಸಂತೋಷದಿಂದ ಕಳೆದ ನೆಮ್ಮದಿ ಸಿಕ್ಕಿರುತ್ತದೆ.

-- ~೦~ --

ಮುಂದಿನ ಕಂತುಗಳಲ್ಲಿ ನಾವು ಟೂರ್ ಹಮ್ಮಿಕೊಂಡ ಸ್ಥಳಗಳ ಬಗ್ಗೆ, ಅಲ್ಲಿನ ಅನುಭವಗಳ ಬಗ್ಗೆ, ಉಪಯುಕ್ತ ಮಾಹಿತಿಗಳೊಂದಿಗೆ, ಚಿತ್ರಸಹಿತ ಲೇಖನವನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ "ಸಂಚಾರ" ಮಾಲಿಕೆಯಲ್ಲಿ... ಓದಿ ಪ್ರೋತ್ಸಾಹಿಸುತ್ತೀರಲ್ಲ?...

--
ಗುರು

Nempu Balaga:: Our Motto

"ಸಂಹತಿಃ ಕಾರ್ಯಸಾಧಿಕಾ"

ನಮ್ಮ "ನೆಂಪು ಬಳಗ"ದ ಧ್ಯೇಯವಾಕ್ಯ "ಸಂಹತಿ: ಕಾರ್ಯಸಾಧಿಕಾ". ದಿ. ನೆಂಪು ಶಿವರಾಮ ಭಟ್ಟರು ನಮ್ಮ ಬಳಗಕ್ಕೆ ಈ ಧ್ಯೇಯವಾಕ್ಯವನ್ನಿತ್ತು ಹರಸಿದ್ದಾರೆ. ಅವರು ನಮಗೆ ಬೋಧಿಸಿದ ಹಿತನುಡಿಗಳ ಸಾರಾಂಶ ಇಲ್ಲಿದೆ:

ಹುಲ್ಲೆಳೆಯಿಂದ ಏನೂ ಮಾಡಲಾಗದು, ಆದರೆ ಅವು ಸೇರಿ ಮಡೆ ಹಗ್ಗವಾದಾಗ ಮುಡಿಕಟ್ಟುವ, ತಿರಿಕಟ್ಟುವ ಹಗ್ಗವಾಗುವುದು. ಒಂದು ಹುರಿಯಿಂದ ಏನೂ ಆಗದು, ಆದರೆ ಅದೇ ಹುರಿ ಎಲ್ಲ ಸೇರಿ ಕೂಡಿದರೆ ಹಗ್ಗವಾಗಿ ರಥ ಎಳೆಯಲು ಸಾಧ್ಯವಾಗುತ್ತದೆ. ಒಂದು ಬೆರಳಿನಿಂದ ಏನೂ ಮಾಡಲು ಕಷ್ಟ, ಆದರೆ ಐದು ಬೆರಳು ಕೂಡಿದ ಕೈಯಿಂದ ಯಾವ ಕೆಲಸ ಬೇಕಾದರೂ ಮಾಡಲು ಸಾಧ್ಯವಿದೆ. ಹಾಗೆಯೇ 10 ಬೆರಳು ಸೇರಿ ಎರಡೂ ಕೈಗಳಿಂದ ಇನ್ನೂ ಹೆಚ್ಚಿನ ಕಾರ್ಯಸಾಧನೆ ಸಾಧ್ಯ.

ಜೇನು ನೊಣಗಳು ಮಧು ಸಂಗ್ರಹಿಸುತ್ತದೆ. ಹಾಗೆಯೇ ಒಂದು ಒಕ್ಕೂಟ ವ್ಯವಸ್ಥೆಯಿಂದ, ಸಮಾನ ಸ್ಕಂಧರು ಹಾಗೂ ಸಹೃದಯವಂತರು ಪರಸ್ಪರ ಗುಂಪುಗೂಡಿ ದುಡಿಯುವ ಮನಸ್ಸಿನಿಂದ ಯಾವ ಸಾಧನೆಯನ್ನು ಬೇಕಾದರೂ ಮಾಡಿ ಗುರಿ ತಲಪಬಹುದು.

ಋಗ್ವೇದದ ಕೊನೆಯ ಮಾತಿನಲ್ಲಿ "ಸಮಾನೀವ ಆಕೂತಿಃ" - ನಮ್ಮೆಲ್ಲರ ಅಂತರಂಗದ ಅಭಿಪ್ರಾಯ ಒಂದೇ ಆಗಿರಲಿ; "ಸಮಾನಾ ಹೃದಯಾನಿ" - ಎಲ್ಲರ ಮನಸ್ಸು ಒಂದೇ ಆಗಿರಲಿ ಎಂಬ ಸಂದೇಶವಿದೆ. ಅದನ್ನೇ "ಸಂಹತಿ:" ಎಂಬ ಅರ್ಥದಲ್ಲಿ "ಒಕ್ಕಟ್ಟಿನಲ್ಲಿ ಬಲವಿದೆ" ಎಂದುದು. ಉತ್ತಮ ಗುರಿ ಇದ್ದು ಪರಸ್ಪರ ಹೊಂದಿಕೊಂಡು ಮಾಡಿದ ಕೆಲಸ ಸುಲಭ ಸಾಧ್ಯವಾಗಿ ಕಾರ್ಯಸಾಧಕವಾಗುತ್ತದೆ ಎಂಬುದನ್ನು "ಸಂಹತಿ: ಕಾರ್ಯಸಾಧಿಕಾ" ಉಕ್ತಿ ತಿಳಿಸುತ್ತದೆ.

ದಿ. ನೆಂಪು ಶಿವರಾಮ ಭಟ್ಟರು

Wednesday, January 16, 2008

Nenapina Buttiyinda: NK Bhat 03

ನಿರ್ದೇಶಕರೇ ಇಲ್ಲದ ನಾಟಕ!

ನಾವು ನೆಂಪಿನ ಗೆಳೆಯರೆಲ್ಲ ಕೂಡಿ ನಮ್ಮ ಸರಕಾರಿ ಪ್ರೌಢ ಶಾಲೆಯಲ್ಲಿ (ಹಳೆ ವಿದ್ಯಾರ್ಥಿ ಸಂಘದ ವತಿಯಿಂದ) ನಾಟಕ ಆಡಿದ್ದು ಅಪೂರ್ವ ಕ್ಷಣಗಳಲ್ಲೊಂದು. ಹೈಸ್ಕೂಲಿನಲ್ಲಿ ವಾರ್ಷಿಕೋತ್ಸವ ಮಾಡುತ್ತಾರೆಂದಕೂಡಲೇ ನಮ್ಮೆಲ್ಲರ ಮಂಡೆಯೊಳಗೊಂದು ಭೂತ ಹೊಕ್ಕಿತು. ನಾವೊಂದು "ಹಳೆ ವಿದ್ಯಾರ್ಥಿ ಸಂಘ" ಮಾಡಿ ಅದರ ಮೂಲಕ ಮಾತೃಸಂಸ್ಥೆಗೊಂದು ರಂಗಮಂದಿರ ಕಟ್ಟಿಸಿಕೊಡೋಣ ಎಂಬ ಆಲೋಚನೆ ನಮ್ಮೆಲ್ಲರದ್ದು. ಕೂಡಲೇ ಕಾರ್ಯಪ್ರವೃತ್ತರಾದೆವು. ಪತ್ರಿಕೆ ಮೂಲಕ "ಸಂಘ" ಸ್ಥಾಪಿಸುವ ಕುರಿತು ಪ್ರಕಟಣೆ ನೀಡಿ, ಹಳೆ ವಿದ್ಯಾರ್ಥಿಗಳು ಎಲ್ಲಿದ್ದರೂ ನಮ್ಮನ್ನು ಸಂಪರ್ಕಿಸುವಂತೆ ಕೋರಲಾಯಿತು.

ನಾನು, ಶಾಲೆಯ ದಾಖಲೆಗಳನ್ನೆಲ್ಲ ತಿರುವಿಹಾಕಿ ಈ ವರೆಗೆ ಆ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿದೆ ಹಾಗೂ ಅವರೆಲ್ಲರಿಗೆ ಪತ್ರ ರವಾನಿಸಲಾಯಿತು. ಎಲ್ಲ ಪ್ರಯತ್ನಗಳ ಫಲದಿಂದ ಕೆಲವು ಸಾವಿರ (ಸರಿಯಾಗಿ ನೆನಪಿಲ್ಲ) ಹಣ ಒಟ್ಟುಗೂಡಿತು.

ಸಂಘ ಏನೋ ಸ್ಥಾಪನೆಯಾಯಿತು. ಅದರ ಪ್ರಯುಕ್ತ ಮನೋರಂಜನಾ ಕಾರ್ಯಕ್ರಮ ಬೇಡವೇ? ಅಂತೆಯೇ ವಾರ್ಷಿಕೋತ್ಸವದ ಮರುದಿನ ರಾತ್ರಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಎಂದಾಯಿತು. ನಾವೆಲ್ಲ ಸೇರಿ ಒಂದು ಹಾಸ್ಯ ನಾಟಕ ಮಾಡಲು ತೀರ್ಮಾನಿಸಿದೆವು. ಪ್ರಸಂಗ "ರಂಗಣ್ಣನ ರಾದ್ಧಾಂತ". ನಾವೇ ನೆಂಪಿನ ಭಟ್ಟರ ಮನೆಯ ಹುಡುಗರೆಲ್ಲ ಪಾತ್ರ ಹಂಚಿಕೊಂಡೆವು. ಆದರೆ ಸ್ತ್ರೀ ವೇಷಕ್ಕೆ ಯಾರು ಎಂಬುದು ’ಮಿಲಿಯನ್ ಡಾಲರ್’ ಪ್ರಶ್ನೆಯಾಗಿತ್ತು. ಹುಡುಗಿ ವೇಷವೆಂದರೆ ನಾಚುವ ಕಾಲ ಅದಾಗಿತ್ತು. ಯಾರನ್ನು ಕೇಳಿದರೂ ಇಲ್ಲ ಎನ್ನುವವರು! ಮೀಸೆ ಬೇರೆ ತೆಗೀಬೇಕಲ್ಲ! ಕೊನೆಗೆ ಬೇರೆ ಉಪಾಯವಿಲ್ಲದೇ ನಾನೇ ’ಗೀತಾ’ಳಾಗಬೇಕಾಯ್ತು!

ಎಲ್ಲರಿಗೂ ಸಂಭಾಷಣೆ ನಾನೇ ಬರೆದು ಹಂಚಿದೆ. ರಿಹರ್ಸಲ್ ಮಾಡಲು ನಮ್ಮ ಗಣಪತಿ ದೇಗುಲದ ಪರಿಸರವನ್ನೇ ಆರಿಸಿಕೊಂಡೆವು. ಕರೆಂಟು ಇಲ್ಲದ ಆ ದಿನಗಳಲ್ಲಿ ದೇವರ ಮಂದದೀಪದೆದುರು ಕಷ್ಟಪಟ್ಟು ಸಂಭಾಷಣೆ ಓದಿಕೊಂಡು ರಿಹರ್ಸಲ್ ಮಾಡಿದೆವು. ನಮ್ಮೊಳಗಿನ ತಪ್ಪುಗಳನ್ನು ನಾವೇ ತಿದ್ದಿಕೊಳ್ಳುತ್ತಾ ನಿರ್ದೇಶಕನ ಸ್ಥಾನವನ್ನು ಶ್ರೀ ಗಣಪತಿ ದೇವರಿಗೇ ಬಿಟ್ಟುಕೊಟ್ಟೆವು.

ಮೊದಲ ಪ್ರಯತ್ನ, ಹೇಗೂ ಏನೋ ಎಂಬ ಅಳುಕಿನಿಂದಲೇ ನಾಟಕ ಪ್ರಾರಂಭಿಸಿದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ನೆರೆದ ಜನಸಾಗರದೆದುರು ನಮ್ಮ ನಾಟಕ ಗೆದ್ದಿತ್ತು! ಯಾವುದೇ ರಂಗ ನಿರ್ದೇಶಕನ ತಾಲೀಮು ಇಲ್ಲದೇ ಇಷ್ಟೊಂದು ಅದ್ಭುತವಾಗಿ ನಾಟಕ ಮೂಡಿಬಂದುದು ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿತ್ತು. ಆ ದಿನದ ಆನಂದ, ತೃಪ್ತಿ ಎಣಿಕೆಗೆ ನಿಲುಕದ್ದು. ನಮ್ಮಿಂದ ಇದೂ ಸಾಧ್ಯವೆಂದು ತೋರಿಸಿಕೊಟ್ಟ ದಿನವದು.

ಆದರೆ ರಂಗಮಂದಿರದ ಕನಸು ಕನಸಾಗಿಯೇ ಉಳಿಯಿತು. ಒಟ್ಟುಗೂಡಿದ ಹಣ ನಮ್ಮ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮಗಳ ವೆಚ್ಚಕ್ಕೆ ಸರಿಹೊಂದಿತ್ತು!

-- ನೆಂಪು ಕೃಷ್ಣ ಭಟ್

Monday, January 14, 2008

Nenapina Buttiyinda: NK Bhat 02

ದೇವರಿಗೆ "mutraಭಿಷೇಕ"!

ಬಾಲ್ಯದಲ್ಲಿ ನಾನು ಹಾಗೂ murthy "ಗಳಸ್ಯ-ಕಂಠಸ್ಯ" ಸ್ನೇಹಿತರು. ೧ರಿಂದ ೪ನೇ ತರಗತಿವರೆಗೆ ಗುಡ್ರಿ ಶಾಲೆಗೆ ಸುಮಾರು ೧ ಕಿ.ಮೀ. ದೂರ ’ಹಾಡಿ ಬದಿ’ ನಡಕೊಂಡು ಹೋಗಬೇಕಿತ್ತು. ಎಷ್ಟೆಂದರೂ ಮಕ್ಕಳು, ಅದೂ ಇಬ್ಬರು ’ಪೋಕರಿ’ಗಳು ಒಟ್ಟಾದಾಗ ಅದರ ಮಜವೇ ಬೇರೆ. ಬೆಳಿಗ್ಗೆದ್ದು ಶಾಲೆಗೆ ಹೊರಟ ನಾವು ದಾರಿ ಮಧ್ಯೆ ಅದೂ ಇದೂ ಆಟ ಆಡುತ್ತಾ ಸಾಗುತ್ತಿದ್ದೆವು. ಆಟದೊಳಗೆ ಇಷ್ಟವಾದದ್ದು ಸಹಜವಾಗಿಯೇ "ದೇವರ ಆಟ"!

ಒಂದು ಪುಟ್ಟ ಕಲ್ಲನ್ನು ನಿಲ್ಲಿಸಿ ಅದಕ್ಕೆ ಪೂಜೆ ಮಾಡಿ ನಂತರ ಶಾಲೆ ಕಡೆ ಓಡುವುದು ನಮ್ಮ ದಿನಚರಿಯಾಗಿತ್ತು. ಆ ಕಲ್ಲಿಗೆ ಹೂವಾದರೋ "ಕಿಸ್ಕಾರ", ಬೇಕಾದಷ್ಟು ಸಿಗುತ್ತಿತ್ತು. ಆದರೆ ದೇವರಿಗೆ ಸ್ನಾನ ಆಗಬೇಕಲ್ಲ! ನೀರಿಗೆ ಎಲ್ಲಿ ಹೋಗುವುದು? ತಟ್ಟನೇ ನಮ್ಮ ಪುಟ್ಟ ತಲೆಗೆ ಹೊಳೆದದ್ದು "mutra!" ಇಬ್ಬರೂ ದೇವರ ಮಂಡೆಗೆ mutraಭಿಷೇಕ ಮಾಡಿಯೇಬಿಟ್ಟೆವು! ಅಂತೂ ದೇವರ ಸ್ನಾನ ಗಡದ್ದಾಗಿಯೇ ನಡೆಯುತ್ತಿತ್ತು.

ಈ ಮಧ್ಯೆ ನಮ್ಮ ನೆಂಪು ಹೈಸ್ಕೂಲಿನ ಶಂಕರ ಮಾಷ್ಟ್ರು ಅದೇ ದಾರಿಯಲ್ಲಿ ಬರುತ್ತಿದ್ದರು. ದಿನವೂ ಅವರು "ಹ್ವಾ! ದೇವ್ರಿಗೆ ಸ್ನಾನ ಆಯ್ತನಾ?" ಅಂತ ಕೇಳುತ್ತಿದ್ದರು. ನಾವೂ ಗತ್ತಿನಲ್ಲೇ "ಹ್ಹ್! ಮಾಡ್ತಾ ಇತ್ತ್ ಗುರುಗಳೇ!" ಎನ್ನುತ್ತಿದ್ದೆವು. (ಕೆಲವು ವರ್ಷಗಳ ನಂತರ ನಾವೂ ಹೈಸ್ಕೂಲು ಮೆಟ್ಟಿಲು ಹತ್ತಿದಾಗ, ಅದೇ ಮೇಷ್ಟ್ರ ಮುಖ ನೋಡಿದಾಗ "mutraಭಿಷೇಕ" ನೆನಪಾದದ್ದು ಸುಳ್ಳಲ್ಲ).

ಮಕ್ಕಳ ಪೂಜೆ ಹೇಗಿದ್ದರೇನು, ಅಲ್ಲಿ ಮುಗ್ಧ ಭಕ್ತಿಯೊಂದೇ ಪ್ರಧಾನ, ಅಲ್ದಾ? ನಮ್ಮ ಶುದ್ಧ ಮನಸ್ಸಿನ ನಿಸ್ವಾರ್ಥ ಭಕ್ತಿಗೆ ಮೆಚ್ಚಿದ ನಮ್ಮ "(ಕಲ್ಲು) ದೇವರು" ಅಂದಿನ "mutraಭಿಷೇಕ"ವನ್ನು ಪಂಚಾಮೃತಾಭಿಷೇಕದಂತೆ ಸ್ವೀಕರಿಸಿರಲೇಬೇಕು. ಏಕೆಂದರೆ ಅಂದಿನಿಂದ ಇಂದಿನವರೆಗೂ ನಮ್ಮೀರ್ವರನ್ನೂ ಕೈಹಿಡಿದು ನಡೆಸುತ್ತಿದ್ದಾರೆ.

-- ನೆಂಪು ಕೃಷ್ಣ ಭಟ್