Friday, February 29, 2008

Sanchara:: Delhi - Agra - Mathura

ದೆಹಲಿಯ ವಿಜ್ಞಾನ ಭವನದಲ್ಲೊಂದು ದಿನ...

ನಮ್ಮ ನ.ಭ.ನೆಂಪು ರವರು 2003ರಲ್ಲಿ "ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ"ಯ ಮನ್ನಣೆಗೆ ಭಾಜನರಾಗಿ, ಆಗಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ರಿಂದ ರಾಜಧಾನಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ನೆಂಪು ಬಳಗಕ್ಕೆ ಒಂದು ಹೆಮ್ಮೆಯ ವಿಷಯ.


ಆ ಅಪೂರ್ವ ಕ್ಷಣಗಳನ್ನು ಮೆಲುಕು ಹಾಕುತ್ತಾ, ಪ್ರವಾಸದ ಸವಿನೆನಪುಗಳನ್ನು ನ.ಭ.ನೆಂಪು ರವರ ಜೊತೆಯಲ್ಲಿ ದೆಹಲಿಗೆ ತೆರಳಿದ್ದ ಅವರ ಸಹೋದರ ಶ್ರೀ ಗಜಾನನ ಭಟ್ಟರು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ರಾಷ್ಟ್ರದ ಉತ್ತಮ ಶಿಕ್ಷಕರಲ್ಲೊಬ್ಬರೆಂಬ ಪ್ರಶಸ್ತಿ ಪಡೆದು ಅದನ್ನು ಸ್ವೀಕರಿಸಲು ನರಸಿಂಹಣ್ಣ ದಂಪತಿಗಳು ದೆಹಲಿಗೆ ಹೊರಟಾಗ ಅವರೊಂದಿಗೆ ನನಗೂ ದೆಹಲಿ ಪಯಣದ ಆಸೆ ಮೂಡಿತ್ತು. ಇಂತಹ ಒಂದು ಸಂದರ್ಭ ಸಿಕ್ಕುವುದೇ ದುರ್ಲಭ. ಅಲ್ಲದೆ ಅಂತಹ ಒಂದು ಸಮಾರಂಭದಲ್ಲಿ ಭಾಗವಹಿಸುವುದೂ ಕೂಡ ಒಂದು ಭಾಗ್ಯ ಎಂದು ನಾನೂ ಅವರೊಂದಿಗೆ ಪಯಣ ಬೆಳೆಸಿದೆ, ದೆಹಲಿಗೆ.

ಪ್ರಶಸ್ತಿ ಪಡೆಯಲು ದೂರದೂರಿನಿಂದ ಬರುವ ಶಿಕ್ಷಕರಿಗಾಗಿ 2 ದಿನ ಮುಂಚಿತವಾಗಿಯೇ ಅಶೋಕ ಹೋಟೆಲ್ ಜನಪಥದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು. ಮಾರ್ಗದರ್ಶನಕ್ಕಾಗಿ ಅವರಿಗೆ ಅಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯವರು ತಾತ್ಕಾಲಿಕ ಕಚೇರಿಯನ್ನೂ ತೆರೆದಿದ್ದರು. ನಾವು ಅಲ್ಲಿ ತಲುಪಿದಾಗ ದೇಶದ ನಾನಾ ಭಾಗದಿಂದ ಬಂದಿದ್ದ ಶಿಕ್ಷಕರು, ಅವರ ಆಪ್ತರಿಂದ ಇಡೀ ಮೊಗಸಾಲೆ ತುಂಬಿಹೋಗಿತ್ತು. ನಮ್ಮನ್ನೂ ಆತ್ಮೀಯವಾಗಿ ಸ್ವಾಗತಿಸಿದ ಆಗಿನ ಮಾಹಿತಿ ಸಂಪನ್ಮೂಲ ಸಚಿವರ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹಾಗೂ ತಂಡದವರ ಸೌಜನ್ಯ, ನಮಗೆ ತೋರುವ ಗೌರವಾದರಗಳನ್ನು ನೋಡಿದಾಗ ಇಂತಹ ಆತಿಥ್ಯ ನಮ್ಮ ಕರ್ನಾಟಕದ ಅಧಿಕಾರಿಗಳಲ್ಲಿ ಲಭ್ಯವಿರಲಾರದು ಎಂದೆನಿಸಿತು. ಸಹಜವಾಗಿಯೇ ಕೇಂದ್ರ ಸರಕಾರದ ಘನ ಇಲಾಖೆಯ ಕುರಿತು ಗೌರವ ಮೂಡಿತು.

ತಾ. 5-9-2003 ರಂದು ಶಿಕ್ಷಕ ದಿನಾಚರಣೆಯ ಕಾರ್ಯಕ್ರಮಗಳು ಬೆಳಿಗ್ಗೆ 10.30ಕ್ಕೆ ಭವ್ಯ ವಿಜ್ಞಾನ ಭವನದಲ್ಲಿ ಆಯೋಜಿತವಾಗಿದ್ದವು. ನಾವೆಲ್ಲ ಅಂದು ನರಸಿಂಹಣ್ಣನೊಂದಿಗೆ ಅಲ್ಲಿಗೆ ತಲುಪಿ ಭದ್ರತಾ ತಪಾಸಣೆಗಳನ್ನು ದಾಟಿ ಹವಾನಿಯಂತ್ರಿತ ವಿಶಾಲ ಸಭಾಭವನವನ್ನು ಪ್ರವೇಶಿಸಿದೆವು. ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಸುಮಾರು 300 ಶಿಕ್ಷಕ ಹಾಗೂ ಸಾವಿರಕ್ಕೂ ಮಿಕ್ಕಿ ಅವರ ಸಂಗಡಿಗರಿಂದ ತುಂಬಿತ್ತು ಆ ಸಭಾಭವನ. ದೇಶದ ಮುಂದಿನ ಸಭ್ಯ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳ ತಂಡವೇ ಅಲ್ಲಿ ನೆರೆದಂತಿತ್ತು. ಸಭಾಭವನದ ಆಸನದ ವ್ಯವಸ್ಥೆ, ಸುಮಧುರ ಧ್ವನಿವ್ಯವಸ್ಥೆಗಳೆಲ್ಲ ಅಚ್ಚುಕಟ್ಟಾಗಿದ್ದು ದೇಶದ ರಾಜಧಾನಿಯ ಪ್ರತಿಷ್ಠೆಗೆ ತಕ್ಕಂತಿತ್ತು.


ಶಿಕ್ಷಕರ ಸ್ಥಾನಮಾನ ಹಾಗೂ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು "ಉತ್ತಮ ಶಿಕ್ಷಕರೇ ದೇಶದ ಆಸ್ತಿ" ಎಂದು ಶ್ಲೋಕಗಳನ್ನಾಧರಿಸಿ ಮಾಡಿದ ಭಾಷಣ ಅವರ ಪಾಂಡಿತ್ಯವನ್ನು ಸಾರುತ್ತಿತ್ತು. ನಂತರ ಮಾತನಾಡಿ, "ಶಿಕ್ಷಕರು ಸಾಮಾಜಿಕ ಅಭಿವೃದ್ಧಿಯ ಅವಿಭಾಜ್ಯ ಅಂಗ; ಅವರ ಶ್ರೇಷ್ಠತೆ ಅವರಲ್ಲೇ ಉಳಿಯದೇ ಶಿಕ್ಷಣದ ಮೂಲಕ ದೇಶದೆಲ್ಲೆಡೆ ಪ್ರಸಾರವಾಗಬೇಕು" ಎಂದು ಸಾರಿದ ಆಗಿನ ನಮ್ಮ ಹೆಮ್ಮೆಯ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಎಲ್ಲ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭದ್ರತಾ ಸಿಬ್ಬಂದಿಗಳ ಸೂಚನೆಯ ಹೊರತಾಗಿಯೂ ಎಲ್ಲ ಶಿಕ್ಷಕರಿಗೆ ಹಸ್ತಲಾಘವ ನೀಡಿ, ಆದರದಿಂದ ಮಾತನಾಡಿಸಿದ ಅವರ ಸೌಜನ್ಯ, ಸರಳತೆ ಎಲ್ಲರ ಮನ ಮುಟ್ಟುವಂತಿತ್ತು.

ದೂರದರ್ಶನದ ನಿರೂಪಕಿ ಶ್ರೀಮತಿ ಸರಳಾ ಮಹೇಶ್ವರಿಯವರಿಂದ ಕಾರ್ಯಕ್ರಮ ನಿರೂಪಣೆ ಇಡೀ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತ್ತು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಇದಲ್ಲದೆ ಹಿಂದಿನ ದಿನ ಸಂಜೆ, ಶಿಕ್ಷಕರಿಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಸತ್ಕಾರ ಕೂಟವನ್ನು ಏರ್ಪಡಿಸಲಾಗಿತ್ತು. ಪ್ರಧಾನ ಮಂತ್ರಿಗಳ ಮನೆಯ ಆವರಣದಲ್ಲಿ ನಡೆದ ಈ ಕೂಟದಲ್ಲಿ ಕವಿ ವಾಜಪೇಯಿ ಅವರು ತಮ್ಮ ಕವನವೊಂದನ್ನು ವಾಚಿಸಿ ಎಲ್ಲರ ಮನರಂಜಿಸಿದರು.

ಈ ಶ್ರೇಷ್ಠ ಪ್ರಶಸ್ತಿಯ ಹಿಂದೆ ನರಸಿಂಹಣ್ಣನ ಕಠಿಣ ಪರಿಶ್ರಮ, ಅಪಾರ ಸಾಧನೆ, ಕರ್ತವ್ಯಪರತೆ ಇತ್ತು. ಪ್ರಶಸ್ತಿ ಸತ್ಪಾತ್ರರಿಗೆ ದೊರಕಿದೆ ಎನಿಸಿತು. ಇಂತಹ ಸಾಧಕರನ್ನು ಅಣ್ಣನಾಗಿ ಪಡೆದ ನನಗೆ, ನಮ್ಮೂರಿಗೆ ಇದು ಹೆಮ್ಮೆಯ ವಿಷಯ.


ನಮ್ಮ ಈ ದೆಹಲಿ ಭೇಟಿಯ ಸಂದರ್ಭದಲ್ಲಿ ನಾವು ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಉತ್ತರಾಂಚಲ ರಾಜ್ಯದ ಹೃಷಿಕೇಶ ಮತ್ತು ಹರಿದ್ವಾರಗಳಿಗೆ ಭೇಟಿಯಿತ್ತು, ಗಂಗಾನದಿಯಲ್ಲಿ ಮಿಂದು, ರಾಮಜುಲಾ - ಲಕ್ಷ್ಮಣಜುಲಾ ಹಾಗೂ ಮಾನಸಾದೇವಿ ದೇವಸ್ಥಾನಗಳಿಗೆ ಭೇಟಿಯಿತ್ತೆವು. ನಂತರ, ಆಗ್ರಾ ಮತ್ತು ಮಥುರಾಗಳಿಗೆ ಭೇಟಿಯಿತ್ತು, ಆಗ್ರಾದ ತಾಜಮಹಲ್ ಹಾಗೂ ಮಥುರಾದ ಕೃಷ್ಣಜನ್ಮಸ್ಥಾನವನ್ನು ನೋಡಿದೆವು. ಇವುಗಳಲ್ಲದೆ ದೆಹಲಿಯ ಪ್ರೇಕ್ಷಣೀಯ ಸ್ಥಳಗಳಾದ ಕುತುಬ್ ಮಿನಾರ್, ಬಿರ್ಲಾ ಮಂದಿರ, ಕಮಲ ಮಂದಿರ, ಕೆಂಪುಕೋಟೆ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ಸಂಸತ್ ಭವನ, ತ್ರಿಮೂರ್ತಿ ಭವನ, ರಾಜ್ ಘಾಟ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಕೂಡ ವೀಕ್ಷಿಸಿದೆವು.


ನಮಗೆ ದೆಹಲಿಯಲ್ಲಿ ಉಳಿದುಕೊಳ್ಳಲು, ಮಹರ್ಷಿ ಅರಬಿಂದೋ ಆಶ್ರಮದ ಅತಿಥಿಗೃಹದಲ್ಲಿ, ಅಲ್ಲಿ ಆಗ ಉದ್ಯೋಗದಲ್ಲಿದ್ದ ಉಡುಪಿಯ ಹೆರ್ಗದ ಶ್ರೀ ವಿವೇಕ್ ತಂತ್ರಿ ವ್ಯವಸ್ಥೆ ಮಾಡಿದ್ದರು. ಷಟ್ಕೋನಾಕೃತಿಯ ನವೀನ ಮಾದರಿಯಲ್ಲಿ ನಿರ್ಮಿತವಾದ ಆಶ್ರಮ ಸಕಲ ಸೌಲಭ್ಯಗಳನ್ನೂ ಹೊಂದಿ ಸುಂದರವಾಗಿದೆ. ಆರ್ಥಿಕವಾಗಿ, ಬೌದ್ಧಿಕವಾಗಿ ಹಿಂದುಳಿದು ಅಶಕ್ತರಾದವರಿಗೆ ಆಶ್ರಯ ನೀಡಿ ಅವರಿಗೆ ಹಲವು ವಿಷಯಗಳಲ್ಲಿ ಪರಿಣತಿ ನೀಡಿ, ವೃತ್ತಿಪರರನ್ನಾಗಿ ಮಾಡುವ ಶ್ಲಾಘನೀಯ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ. ಇದಲ್ಲದೆ ಯಾಂತ್ರಿಕ ಜೀವನದ ಜಂಜಾಟದಿಂದ ಬಳಲಿ, ಮನಃಶಾಂತಿಗಾಗಿ ಹಾತೊರೆದು ಬರುವವರಿಗೆ ಆಧ್ಯಾತ್ಮಿಕ ಬೋಧನೆಗಳ ಜೊತೆಗೆ ಯೋಗ ಶಿಕ್ಷಣವೂ ಇಲ್ಲಿ ಲಭ್ಯ. ಇಲ್ಲಿನ ಶಾಂತ ಪರಿಸರ, ಬೇವಿನ ಮರಗಳಿಂದ ಸುತ್ತುವರೆದಿರುವ ಆವರಣ ಅದಕ್ಕೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ವಿನಯವೂ ಪ್ರಶಂಸನೀಯ.


ಹೀಗೆ ನಮ್ಮ ದೆಹಲಿ ಭೇಟಿಯು ನರಸಿಂಹಣ್ಣ ಪ್ರಶಸ್ತಿ ಪಡೆಯುವುದನ್ನು ನೋಡುವ ಭಾಗ್ಯವನ್ನು ಹಾಗೂ ಉತ್ತರ ಭಾರತದ ಪುಣ್ಯಕ್ಷೇತ್ರ ದರ್ಶನ ಭಾಗ್ಯವನ್ನೂ ಒದಗಿಸಿಕೊಟ್ಟಿತ್ತು.

-- ನೆಂಪು ಗಜಾನನ ಭಟ್

1 comment:

ಅಮರ said...

ಪ್ರಿಯ ನೆಂಪು ಅವರೇ,

ನಮಸ್ಕಾರ ಹೇಗಿದ್ದೀರಾ?


ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ