Monday, February 7, 2011

ಕನ್ನಡ ಸಾಹಿತ್ಯ ಸಮ್ಮೇಳನ - ಕನ್ನಡ ಜಾತ್ರೆ

ಬೆಂಗಳೂರು ಬಸವನಗುಡಿಯ ನ್ಯಾಶನಲ್ ಕಾಲೇಜು ಕ್ರೀಡಾಂಗಣದಲ್ಲಿ ಫೆಬ್ರವರಿ ೪ರಿಂದ ೬ನೇ ತಾರೀಕಿನ ವರೆಗೆ ಅದ್ದೂರಿಯಾಗಿ ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಯಿಂದ ಜನ ಸಾಗರವೇ ಹರಿದು ಬಂದಿರುವುದು ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ರಾಜಕೀಯೇತರವಾಗಿ, ಬಿನ್ನಾಭಿಪ್ರಾಯಗಳನ್ನೆಲ್ಲ ಬದಿಗೊತ್ತಿ ಸಾಹಿತಿಗಳು, ಕವಿಗಳು, ರಾಜಕೀಯ ಮುಖಂಡರು, ಸಿನಿಮಾ ರಂಗದವರು, ಉದ್ಯಮಿಗಳು, ಸಾಹಿತ್ಯಾಸಕ್ತರು ಕನ್ನಡಕ್ಕಾಗಿ ಒಗ್ಗೂಡಿದ್ದಾರೆ. ಹೆಸರಾಂತ ಸಾಹಿತಿ, ೯೮ ರ ಚಿರಯುವಕ ಜಿ. ವೆಂಕಟಸುಬ್ಬಯ್ಯನವರು ಸಮ್ಮೇಳನಾಧ್ಯಕ್ಷರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡದ ಉಳಿವಿಗಾಗಿ, ಒಳಿತಿಗಾಗಿ, ಪ್ರಗತಿಗಾಗಿ ಮುಖ್ಯಮಂತ್ರಿಯಾದಿಯಾಗಿ ಕನ್ನಡ ಮಂದಿಗೆಲ್ಲಾ ಮಾತಿನಲ್ಲೇ ಚಾಟಿಯೇಟು ನೀಡಿ ಎಚ್ಚರಿಸಿದ್ದಾರೆ.


ಸಮ್ಮೇಳನ ಯಶಸ್ವಿಯಾಗಿ ಸಂಪನ್ನವಾಯಿತು ಎಂದು ಕೇಳಿಬರುತ್ತಿದೆ. ಆದರೆ ನಿಜಕ್ಕೂ ಯಶಸ್ವಿಯಾಗಿದ್ದು ಕನ್ನಡಿಗರೆಲ್ಲಾ ಬೃಹತ್ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿದ್ದು! ಇಂಟರ್ನೆಟ್ ಯುಗದಲ್ಲೂ ಸುಮಾರು ೩ - ೪ ಕೋಟಿ ರೂಪಾಯಿಗಳಷ್ಟು ಕನ್ನಡ ಪುಸ್ತಕಗಳು ಮಾರಾಟವಾಗಿದ್ದು! ಮೊದಲ ದಿನ ಊಟೋಪಚಾರದಲ್ಲಿ ಗೊಂದಲ ಕಂಡುಬಂದರೂ, ಉಳಿದೆರಡು ದಿನ ಅಲ್ಲೂ ಸುಧಾರಣೆ ಕಂಡುಬಂದು ಬಹಳಷ್ಟು ಜನ ಊಟ, ಉಪಹಾರ ಸ್ವೀಕರಿಸಿದರು.



ಬೆಂಗಳೂರಿನಲ್ಲಿ ತುಂಬಿಕೊಂಡಿರುವ ಪರಭಾಷಿಕರಿಗೆ ಕನ್ನಡ ಕಲಿಯುವ ಬಗ್ಗೆ ಯಾವಾಗಲೋ ಬಿಸಿಮುಟ್ಟಿಸಬೇಕಿತ್ತು. ೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆದ ಸಮ್ಮೇಳನ ಆ ಮಟ್ಟಿಗೆ ಸ್ವಲ್ಪ  ಯಶಸ್ವಿಯಾಗಿದೆ.

ನಾನು ನಿನ್ನೆ ಸಮ್ಮೇಳನದ ಕಡೆಯ ದಿನ ಭಾಗವಹಿಸಿ ಬಂದೆ (ಕೆಲಸದ ಒತ್ತಡದಿಂದಾಗಿ ಶನಿವಾರ ರಜಾದಿನವಾದರೂ ಹೋಗಲಾಗಲಿಲ್ಲ). ಕಿರಿದಾದ ಪ್ರವೇಶದ್ವಾರದ ಸುತ್ತಮುತ್ತ ಒಳಹೋಗುವವರು, ಹೊರ ಬರುವವರು ತುಂಬಿತುಳುಕುತ್ತಿದ್ದುದರಿಂದ ಅಲ್ಲಿ ನುಗ್ಗಲಾಗದೆ ಕಂಪೌಂಡ್ ಹತ್ತಿ ಒಳಹೋದೆ! ಜನ ಸಾಗರ ಕಂಡು ಒಮ್ಮೆ ದಂಗಾದರೂ, ಸಾವಕಾಶವಾಗಿ ಕ್ರೀಡಾಂಗಣದ ಉದ್ದಗಲ ಅಲೆಯುತ್ತಾ ಗೋಷ್ಠಿಗಳು, ಸನ್ಮಾನ ಸಮಾರಂಭ ಇನ್ನಿತರ ಕಾರ್ಯಕ್ರಮಗಳನ್ನು ನೋಡಿದೆ.


ನನ್ನ ಅಪ್ಪಯ್ಯ ಈ ವರೆಗೆ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಹಲವಾರು ಬಾರಿ ಭಾಗವಹಿಸಿದ್ದಾರೆ, ಕವಿತೆ ಮಂಡಿಸಿದ್ದಾರೆ, ಪುಸ್ತಕವೂ ಬಿಡುಗಡೆಗೊಂಡಿದೆ, ಉಡುಪಿ-ಮೂಡಬಿದ್ರೆಯ ಸಮ್ಮೇಳನಗಳಲ್ಲಿ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಬಾರಿ ಸಮ್ಮೇಳನ ವೀಕ್ಷಿಸಲೆಂದೇ ಊರಿಂದ ಬಂದು, ಉತ್ಸಾಹದಿಂದಲೇ ಭಾಗವಹಿಸಿದರು.

ಸಭಾಂಗಣ ತುಂಬಾ ವಿ.ಐ.ಪಿಗಳು, ವಿ.ವಿ.ಐ.ಪಿಗಳು, ಸಾಹಿತಿಗಳು, ಅತಿಥಿ ಅಭ್ಯಾಗತರು, ಸನ್ಮಾನ ಸ್ವೀಕರಿಸುವವರು, ಸ್ಟೇಜಿನ ಹಿಂಬದಿಯಲ್ಲಿ ಸುಮ್ಮನೆ ಫೋಸು ಕೊಡುವವರು, ಕೆಳಗೆ ಪ್ರೇಕ್ಷಕ ವರ್ಗದಲ್ಲಿ ಕುರ್ಚಿ ಸಿಕ್ಕಿದವರು, ಕುರ್ಚಿ ಸಿಕ್ಕರೂ ಕ್ಯಾಮರಾ ಹಿಡಿದು ಅಡ್ಡಾಡುತ್ತಿದ್ದವರಿಂದ ಸಭೆಯ ನೋಟ ದಕ್ಕದವರು, ಅದರಿಂದಾಗಿ ಸಿಟ್ಟಾದವರು, ಕುರ್ಚಿ ಸಿಗದವರು, ತಿರುಗಿ ತಿರುಗಿ ಸುಸ್ತಾದವರು, ಊಟ ಉಪಹಾರ ಸಿಗದವರು, ರಾತ್ರಿ ನಿದ್ರೆಯಿಂದ ವಂಚಿತರಾಗಿ ಕೂತೇ ತೂಕಾಡಿಸುತ್ತಿದ್ದವರು, ಚಿಕ್ಕಪುಟ್ಟ ವಿಷಯಗಳಿಗೆ ಗಲಾಟೆ ಮಾಡುವವರು, ಜನ ಪ್ರವಾಹದ ಸುಪರ್ದಿಗಾಗಿ ರಾತ್ರಿ ಹಗಲು ದುಡಿದ ಪೋಲಿಸ್ ಸಿಬ್ಬಂದಿ - ಸ್ವಯಂಸೇವಕರು, ಕ್ಯಾಮರಾ ಹಿಡಿದು ಓಡಾಡುತ್ತಿರುವ ಮಾಧ್ಯಮದವರು, ಕನ್ನಡ ಬಾವುಟ-ಫಲಕ ಹಿಡಿದು ಬ್ಯಾಂಡ್ ವಾದನದೊಂದಿಗೆ ಮೆರವಣಿಗೆಯಲ್ಲಿ ಶಿಸ್ತಾಗಿ ಬಂದ ನೂರಾರು ಮಕ್ಕಳು, ಕಳ್ಳೆಪುರಿ - ಸೌತೆಕಾಯಿ - ನೀರು - ಮಜ್ಜಿಗೆ-  ವಾಚ್ -ಪುಸ್ತಕ ಇತ್ಯಾದಿಗಳನ್ನು ಕುಳಿತಲ್ಲಿಗೇ ತಂದು ಮಾರುತ್ತಿದ್ದ ವ್ಯಾಪಾರಿಗಳು ಹೀಗೆ ನಾನಾ ಬಗೆಯವರು.





ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಅಂಗಣಕ್ಕೆ ಪ್ರಯಾಸಪಟ್ಟು ಹೊಕ್ಕಿದ್ದಾಯಿತು. ಸಾಕಷ್ಟು ಪ್ರಕಾಶಕರು ಉತ್ಸಾಹದಿಂದಲೇ ಈ ಸಲ ಪುಸ್ತಕ ಮಾರಾಟಕ್ಕಿಳಿದಿದ್ದರು. ಜನಪ್ರಿಯ ಕೃತಿಗಳಿಗೆ ಹೆಚ್ಚಿನ ಸ್ಟಾಲ್ ಗಳಲ್ಲಿ ’ಸ್ಟಾಕ್ ಕಾಲಿಯಾಯ್ತು’ ಎಂಬ ಉತ್ತರ ಸಾಮಾನ್ಯವಾಗಿತ್ತು. ಸಮ್ಮೇಳನಾಧ್ಯಕ್ಷರ ಕೃತಿಗಳು, ಭಾಷಣದ ಪ್ರತಿಗಳೂ ಅಷ್ಟೆ ಬಿಸಿ ದೋಸೆಯಂತೆ ಖರ್ಚಾಗಿತ್ತು. ಒಳ್ಳೆಯ ಪುಸ್ತಕಗಳನ್ನೊಂದಿಷ್ಟು ಖರೀದಿಸಿದೆ. ಸಾಹಿತಿಗಳಾದ ಚಂಪಾ, ವಸುಧೇಂದ್ರ, ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಇನ್ನಿತರ ಗಣ್ಯರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತು.





ಸಂಸ್ಕೃತೋತ್ಸವ, ಚಿತ್ರಸಂತೆ, ಕನ್ನಡ ಸಾಹಿತ್ಯ ಸಮ್ಮೇಳನ ಹೀಗೆ ಕೆಲವೇ ದಿನಗಳ ಅಂತರದಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದು ಸ್ಮರಣೀಯ ಅನುಭವ.

ಕೆಲ ಚಿತ್ರಗಳು...



ಮುಗಿಲೆತ್ತರಕ್ಕೇರಿದ ಕೀರ್ತಿ ಪತಾಕೆ





ಮುಖ್ಯ ಸಭಾಂಗಣ, ಪ್ರವೇಶದ್ವಾರ




ಧೂಳಬ್ಬರ

ಧೂಳನ್ನು ನಿಯಂತ್ರಿಸಲು ಮುಂಚಿತವಾಗಿ ವ್ಯವಸ್ಥೆ ಮಾಡಿದ್ದರೂ ಜನಸಾಗರದಿಂದಾಗಿ ಧೂಳೇಳುತ್ತಲೇ ಇತ್ತು.

-o-

ಚಿತ್ರ-ಬರಹ: ನೆಂಪುಗುರು

3 comments:

Anonymous said...

thumba chennagidhe nimma NEMPU

Nempu Guru said...

@ ಚೈತ್ರ ಧನ್ಯವಾದಗಳು.

Suresh said...

photogaLu chnaagive, haageye vivarane koda.