Monday, December 27, 2010

ಹೊಸ ವರ್ಷಕ್ಕೆ ಹೀಗೊಂದು ಸಂದೇಶ...


ದೈನಂದಿನ ಜೀವನಕ್ಕೆ ಅಗತ್ಯವಾದದ್ದು, ಅತ್ಯಮೂಲ್ಯವಾದದ್ದು ಯಾವುದು ಎಂಬುದನ್ನು ಗುರುತಿಸುವುದು ಇತ್ತೀಚಿನ ವರ್ಷಗಳಲ್ಲಿ, ಇಂದಿನ ಪೀಳಿಗೆಯಲ್ಲಿ ಕಷ್ಟವಾಗುತ್ತಿದೆ. ಮನುಕುಲಕ್ಕೆ ತೀರಾ ಅವಶ್ಯವಲ್ಲದ ಮೊಬೈಲ್, ಕಾರ್, ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು, ವಾಹನಗಳು ಸುಲಭವಾಗಿ ಸಿಗುತ್ತವೆ. ಆದರೆ ಶುದ್ಧ ನೀರು, ಸ್ವಚ್ಛ ಗಾಳಿ, ಪೌಷ್ಠಿಕ ಆಹಾರ, ಸುಂದರ ಪರಿಸರ ಬರಬರುತ್ತಾ ಮರೀಚಿಕೆಯಾಗುತ್ತಿದೆ. ತರಕಾರಿ, ಹಣ್ಣುಹಂಪಲು, ಬೇಳೆ-ಕಾಳುಗಳಿಗಿಂತ ಮೊಬೈಲ್ ಅಗ್ಗವಾಗಿ, ಸುಲಭವಾಗಿ ಸಿಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಬಿತ್ತರವಾಗಿತ್ತು. ಹಾಗಾದರೆ ಮನುಷ್ಯನಿಗೆ ನಿಜವಾಗಿಯೂ ಅವಶ್ಯವಾಗಿರುವುದು ಏನು?


ಇಷ್ಟೇ ಅಲ್ಲ, ಕೂಡು ಕುಟುಂಬಗಳ ಬಗ್ಗೆಯೂ ಒಲವಿಲ್ಲ, ಅದರ ಮಹತ್ವದ ಅರಿವಿಲ್ಲ. ತಂದೆ-ತಾಯಿ, ಅಜ್ಜ-ಅಜ್ಜಿಯವರ ಮೇಲಿದ್ದ ಪ್ರೀತಿ, ಗೌರವ ಬರಿದಾಗುತ್ತಿದೆ. ಮೊದಲೆಲ್ಲ ಭಯ ಮಿಶ್ರಿತ ಗೌರವವಿರುತ್ತಿತ್ತು, ಪ್ರೀತ್ಯಾದರವಿರುತ್ತಿತ್ತು. ಯಾಕೆ ಹೀಗೆ?
~0~ ~0~ ~0~ ~0~ ~0~

ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ, ಕವಿ, ಸಾಹಿತಿ ನ. ಭ. ನೆಂಪು ಅವರು ಕೆಲ ವರ್ಷಗಳ ಹಿಂದೆ ಬರೆದಿರುವ ಕವನ ಹೊಸ ವರ್ಷದ ಸಂದೇಶದ ರೂಪದಲ್ಲಿ ಇಲ್ಲಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ, ಎಲ್ಲರಿಗೂ ಮಾದರಿಯಾಗಬಲ್ಲ, ಉತ್ತಮ ತಾತ್ಪರ್ಯ ಹೊಂದಿರುವ ಈ ಗೀತೆ ಹಲವಾರು ಶಾಲೆಗಳಲ್ಲಿ ಆಶಯ ಗೀತೆಯಾಗಿ ಪ್ರಸಿದ್ಧಿ ಪಡೆದಿದೆ.



ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 



ನನ್ನ ದೇವರು

ನಿತ್ಯ ನಮಗೆ ಬೆಳಕು ಕೊಡುವ
ಸೂರ್ಯ ನನ್ನ ದೇವರು
ರಾತ್ರಿ ಹಾಲುಬೆಳಕು ಕೊಡುವ
ಚಂದ್ರ ನನ್ನ ದೇವರು

ಕೋಟಿ ತಾರೆ, ಬೆಳ್ಳಿ ಚುಕ್ಕಿ,
ಉಲ್ಕೆ ನನ್ನ ದೇವರು
ಬೆಂಕಿ ಗಾಳಿ ನೀರು ಗಗನ-
ವೆಲ್ಲ ನನ್ನ ದೇವರು

ಹಚ್ಚ ಹಸುರು ಹೊದ್ದು ನಿಂತ
ಭೂಮಿ ನನ್ನ ದೇವರು
ಗುಡ್ಡ ಬೆಟ್ಟ-ಕಾಡು ಮೇಡು
ಹೊಳೆಗಳೆನ್ನ ದೇವರು

ಹೊಲದಿ ಬೆವರು ಸುರಿಸಿ ದುಡಿವ
ರೈತ ನನ್ನ ದೇವರು
ದೇಶಕಾಗಿ ಶ್ರಮಿಸುತಿರುವ
ಯೋಧ ನನ್ನ ದೇವರು

ತಂದೆ, ತಾಯಿ, ಬಂಧು ಬಳಗ-
ವೆಲ್ಲ ನನ್ನ ದೇವರು
ವಿದ್ಯೆ ಕಲಿಸಿ ಹಿತವ ನುಡಿವ
ಗುರುಗಳೆನ್ನ ದೇವರು

ನನ್ನ ದೇವರಿವರು ನಿತ್ಯ
ನನಗೆ ಕಾಣುತಿರುವರು
ಶುದ್ಧ ಮನದಿ ಬೇಡಿದುದನು
ನೀಡಿ ಪೊರೆಯುತಿರುವರು

- ನ.ಭ.ನೆಂಪು

2 comments:

shaamala said...

tumba chennagide!

chanakya said...

ಗುರುಗಳ ಫೋನ್ ನಂಬರ್ ಬೇಕಿತ್ತು ಅರ್ಜಂಟಾಗಿ