ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ...!!!
Friday, August 22, 2008
Tuesday, April 8, 2008
ನಮ್ಮ ದೊಡ್ಡಮ್ಮ:
ನೆಂಪು ಕಾಮಾಕ್ಷಿ ಅಮ್ಮ

ನನಗೆ ಬ್ರಹ್ಮೋಪದೇಶವಾದ ನಂತರ ಬೇಸಿಗೆ ರಜೆ, ಇನ್ನಿತರ ರಜೆಗಳನ್ನು ನಾನು ಉಡುಪಿ ಕೆಮ್ಮಣ್ಣು ಪಡುಕುದ್ರುವಿನಲ್ಲಿದ್ದ ನನ್ನ ದೊಡ್ಡಪ್ಪನ (ನೆಂಪು ಶ್ರೀಧರ ಭಟ್ಟರು) ಮನೆಯಲ್ಲಿ ಕಳೆಯುತ್ತಿದ್ದೆ. ಅವರ ಜೊತೆ ಪೌರೋಹಿತ್ಯಕ್ಕೆ ಸಹಾಯಕನಾಗಿ ಹೋಗುವುದು, ದೇವರ ಪೂಜೆ, ಮಂತ್ರ ಇತ್ಯಾದಿ ಕಲಿಯುವುದು ಹೀಗೆ ನನ್ನ ಖರ್ಚಿಗೆ ಒಂದಿಷ್ಟು ಹಣವೂ ಒಟ್ಟಾಗುತ್ತಿತ್ತು. ಅದು 7ನೇ ತರಗತಿ ಮುಗಿಸಿ ಹೈಸ್ಕೂಲ್ ಮೆಟ್ಟಿಲು ಹತ್ತಲು ಅಣಿಯಾಗುತ್ತಿದ್ದ ಕಾಲ. ಹೊಸ ಹೊಸ ಕನಸು ಚಿಗುರೊಡೆಯುತ್ತಿದ್ದ ಕಾಲ!
ಪಡುಕುದ್ರು ಪರಿಸರದ ಬಗ್ಗೆ ಹೇಳಲೇಬೇಕು. ಹೆಸರೇ ಹೇಳುವಂತೆ ಸುವರ್ಣಾ ನದಿ ಸುತ್ತಲೂ ಹರಿದು ಪ್ರಕೃತಿ ನಿರ್ಮಿತ ದ್ವೀಪಸದೃಶವಾದ ಸುಂದರ, ಪ್ರಶಾಂತ ಪ್ರದೇಶವೇ ಈ ಪಡುಕುದ್ರು. ಇಂತಹ ಹಲವಾರು ಕುದ್ರುಗಳ ಸಮೂಹವೇ ಇಲ್ಲಿದೆ, ತಿಮ್ಮಣ್ಣಕುದ್ರು, ಹೊನ್ನಪ್ಪ ಕುದ್ರು, ಮೂಡುಕುದ್ರು ಇತ್ಯಾದಿ... ಒಂದೊಂದರಲ್ಲೂ ಹೆಚ್ಚೆಂದರೆ ಹತ್ತು ಮನೆಗಳು, ಸುತ್ತಲೂ ರಾಶಿ ರಾಶಿ ತೆಂಗಿನ ಮರಗಳು. ಅತ್ಯಂತ ಶಾಂತ ಪರಿಸರ. ಸುವರ್ಣಾ ನದಿ ಬೆಂಗ್ರೆಯಲ್ಲಿ ಸಮುದ್ರ ಸೇರುವ ಮೊದಲು ಹಲವಾರು ಕವಲೊಡೆದು ನಿರ್ಮಿತವಾದ ಈ ದ್ವೀಪ ಸಮೂಹ ಕೇರಳದ ಅಲೆಪ್ಪಿ ಬ್ಯಾಕ್ ವಾಟರ್ ಗೆ ಯಾವ ದೃಷ್ಟಿಯಲ್ಲೂ ಕಮ್ಮಿಯಿಲ್ಲ. ಆದರೆ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶ ಹೆಚ್ಚು ಮನೆಮಾತಾಗಿಲ್ಲ.

ನನಗಿಲ್ಲಿ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಜೊತೆಗಾರರಾಗಿರುತ್ತಿದ್ದುದು ನನ್ನ ದೊಡ್ಡಮ್ಮ ಶ್ರೀಮತಿ ಕಾಮಾಕ್ಷಿ ಅಮ್ಮ (ನನ್ನ ಅಪ್ಪನ ಅಮ್ಮ). ಈಗ ಇವರಿಗೆ 93ರ ಹರೆಯ. ನೀಲಿ ಮಡಿ ಸೀರೆಯನ್ನ ತಮ್ಮ ಕೂದಲಿಲ್ಲದ ತಲೆ ಇತರರಿಗೆ ಕಾಣದಂತೆ ಉಟ್ಟು, ಬೆನ್ನು ಬಗ್ಗಿಸಿ ನಡೆಯುತ್ತಾ, ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗುತ್ತಾ, ದೇವರನಾಮ ಪಠಿಸುತ್ತಾ, ಸುಮ್ಮನೆ ಕುಳಿತಾಗ ರಾಮಾಯಣ, ಭಾರತ, ದಿನಪತ್ರಿಕೆ ಇನ್ನಿತರ ಗ್ರಂಥಗಳನ್ನು ಶಾಲೆಯ ಮೆಟ್ಟಿಲು ಹತ್ತದಿದ್ದರೂ ಓದುತ್ತಾ ಸಮಯ ಕಳೆಯುವ ನಮ್ಮ ದೊಡ್ಡಮ್ಮ ಉತ್ಸಾಹದ ಚಿಲುಮೆ. ಜೀವನ ಪ್ರೀತಿ, ಜೀವನೋತ್ಸಾಹ ಅಂದರೆ ಏನು ಎಂಬುದನ್ನ ಇವರಿಂದ ಕಲಿಯಬೇಕು. 9೦ ಸಂವತ್ಸರಗಳ ಕಾಲ ಸಾಕಷ್ಟು ನೋವು-ನಲಿವುಗಳನ್ನು ಕಂಡಿರುವ ಇವರು ಇಂದಿಗೂ ಹುಡುಗರು-ಮಕ್ಕಳು ನಾಚುವಷ್ಟು ಕೆಲಸ ಮಾಡುತ್ತಾರೆ.
ನನಗೆ ನಮ್ಮ ನೆಂಪಿನ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ, ಒಲವು ಮೂಡುವಂತೆ ಮಾಡಿದ್ದು ದೊಡ್ಡಮ್ಮ ಹೇಳುತ್ತಿದ್ದ ನೆಂಪಿನ ಅನುಭವಗಳು, ನೆನಪುಗಳು ಹಾಗೂ ಕಥೆಗಳು. ಇದರಿಂದ ಪ್ರೇರಿತನಾಗಿ ನಾನು ನೆಂಪಿಗೆ ಮಾನಸಿಕವಾಗಿ ಮತ್ತಷ್ಟು ಹತ್ತಿರನಾದೆ. ಪಡುಕುದ್ರು ಗಣಪತಿ ಮಠದ ಹೊರ ಜಗುಲಿಯಲ್ಲಿ ನಾವಿಬ್ಬರು ಕುಳಿತಾಗ ದೊಡ್ಡಮ್ಮ ತಮ್ಮ ನೆನಪುಗಳ ಸುರುಳಿಯನ್ನ ಬಿಚ್ಚಿಡುತ್ತಿದ್ದರು. ಅವರಿಗೆ ತಮ್ಮ ನೆನಪುಗಳನ್ನ ಹೇಳಿಕೊಳ್ಳಲು, ಕೇಳಲು ಯಾರಾದರೂ ಬೇಕಿತ್ತು, ನನಗೂ ಅಷ್ಟೆ ಅವರ ಅನುಭವಗಳನ್ನ, ನೆನಪುಗಳನ್ನ ಕೇಳಿ ತಿಳಿದುಕೊಳ್ಳುವ ಕುತೂಹಲ. ಅಜ್ಜಿ-ಮೊಮ್ಮಗ ಜೋಡಿಯ ಸಂಭಾಷಣೆಗೆ ಜಗುಲಿಯ ಶಾಂತ ಪರಿಸರ ವೇದಿಕೆ, ಹೂಡೆ ಸಮುದ್ರದ ಅಲೆಗಳ ಭೋರ್ಗರೆತ ಹಿನ್ನೆಲೆ ಸಂಗೀತ! ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ದೊಡ್ಡಮ್ಮ ಅದೆಷ್ಟೋ ನೆನಪುಗಳನ್ನ, ಅನುಭವಗಳನ್ನ, ಘಟನೆಗಳನ್ನ, ಸ್ವಾರಸ್ಯಕರ-ರೋಚಕ ಕಥೆಗಳನ್ನ ನನ್ನೊಂದಿಗೆ ಹಂಚಿಕೊಂಡಿದ್ದರು. ಇದರೊಂದಿಗೆ ಹಲವಾರು ಪುರಾಣದ ಕಥೆಗಳನ್ನೂ ಹೇಳುತ್ತಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ನಾನು ಅವರಿಂದ ಕಲಿತ ಪಾಠ ಜೀವನೋತ್ಸಾಹ ಹಾಗೂ ಸದಾ ಚಟುವಟಿಕೆಯಿಂದಿರುವುದು.
ಮೊದಲೇ ಹೇಳಿದಂತೆ, 92 ಸಂವತ್ಸರಗಳನ್ನು ಕಳೆದು 93ರ ಹೊಸ್ತಿಲಲ್ಲಿರುವ ಶ್ರೀಮತಿ ಕಾಮಾಕ್ಷಿ ಅಮ್ಮ ಹುಟ್ಟಿದ್ದು ಕೊಲ್ಲೂರು ಸಮೀಪದ ಗುಂಡೂರು ಎಂಬ ಕುಗ್ರಾಮದಲ್ಲಿ. 7ರ ಹರೆಯದಲ್ಲೆ ನೆಂಪು ಸುಬ್ಬಣ್ಣ ಭಟ್ಟರ (ನನ್ನ ಅಜ್ಜ, ಅಪ್ಪನ ತಂದೆ) ಕೈ ಹಿಡಿದು ನೆಂಪಿನವರಾದರು.
Wednesday, March 12, 2008
ನೆಂಪಿನ ಬಾನಂಗಳದ ಚಿತ್ತಾರ
ಸೂರ್ಯನಿಗೇ ಕಿರೀಟ...!
ಬೆಳ್ಳಿಮೋಡಗಳಿಗೆ ಸವಾಲೆಸೆಯುತ್ತಿರುವ ತಳಿರ ತೋರಣ!
ನಿರ್ಬಂಧಿ...!
ಚಕ್ರಾ ನದಿಯಲ್ಲಿ ಸೂರ್ಯಬಿಂಬ...!
ನೆರಳು ಬೆಳಕಿನ ಸಂಯೋಜನೆ
Friday, February 29, 2008
Sanchara:: Delhi - Agra - Mathura
ದೆಹಲಿಯ ವಿಜ್ಞಾನ ಭವನದಲ್ಲೊಂದು ದಿನ...
ನಮ್ಮ ನ.ಭ.ನೆಂಪು ರವರು 2003ರಲ್ಲಿ "ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ"ಯ ಮನ್ನಣೆಗೆ ಭಾಜನರಾಗಿ, ಆಗಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ರಿಂದ ರಾಜಧಾನಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ನೆಂಪು ಬಳಗಕ್ಕೆ ಒಂದು ಹೆಮ್ಮೆಯ ವಿಷಯ.
ಆ ಅಪೂರ್ವ ಕ್ಷಣಗಳನ್ನು ಮೆಲುಕು ಹಾಕುತ್ತಾ, ಪ್ರವಾಸದ ಸವಿನೆನಪುಗಳನ್ನು ನ.ಭ.ನೆಂಪು ರವರ ಜೊತೆಯಲ್ಲಿ ದೆಹಲಿಗೆ ತೆರಳಿದ್ದ ಅವರ ಸಹೋದರ ಶ್ರೀ ಗಜಾನನ ಭಟ್ಟರು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ರಾಷ್ಟ್ರದ ಉತ್ತಮ ಶಿಕ್ಷಕರಲ್ಲೊಬ್ಬರೆಂಬ ಪ್ರಶಸ್ತಿ ಪಡೆದು ಅದನ್ನು ಸ್ವೀಕರಿಸಲು ನರಸಿಂಹಣ್ಣ ದಂಪತಿಗಳು ದೆಹಲಿಗೆ ಹೊರಟಾಗ ಅವರೊಂದಿಗೆ ನನಗೂ ದೆಹಲಿ ಪಯಣದ ಆಸೆ ಮೂಡಿತ್ತು. ಇಂತಹ ಒಂದು ಸಂದರ್ಭ ಸಿಕ್ಕುವುದೇ ದುರ್ಲಭ. ಅಲ್ಲದೆ ಅಂತಹ ಒಂದು ಸಮಾರಂಭದಲ್ಲಿ ಭಾಗವಹಿಸುವುದೂ ಕೂಡ ಒಂದು ಭಾಗ್ಯ ಎಂದು ನಾನೂ ಅವರೊಂದಿಗೆ ಪಯಣ ಬೆಳೆಸಿದೆ, ದೆಹಲಿಗೆ.
ಪ್ರಶಸ್ತಿ ಪಡೆಯಲು ದೂರದೂರಿನಿಂದ ಬರುವ ಶಿಕ್ಷಕರಿಗಾಗಿ 2 ದಿನ ಮುಂಚಿತವಾಗಿಯೇ ಅಶೋಕ ಹೋಟೆಲ್ ಜನಪಥದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು. ಮಾರ್ಗದರ್ಶನಕ್ಕಾಗಿ ಅವರಿಗೆ ಅಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯವರು ತಾತ್ಕಾಲಿಕ ಕಚೇರಿಯನ್ನೂ ತೆರೆದಿದ್ದರು. ನಾವು ಅಲ್ಲಿ ತಲುಪಿದಾಗ ದೇಶದ ನಾನಾ ಭಾಗದಿಂದ ಬಂದಿದ್ದ ಶಿಕ್ಷಕರು, ಅವರ ಆಪ್ತರಿಂದ ಇಡೀ ಮೊಗಸಾಲೆ ತುಂಬಿಹೋಗಿತ್ತು. ನಮ್ಮನ್ನೂ ಆತ್ಮೀಯವಾಗಿ ಸ್ವಾಗತಿಸಿದ ಆಗಿನ ಮಾಹಿತಿ ಸಂಪನ್ಮೂಲ ಸಚಿವರ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹಾಗೂ ತಂಡದವರ ಸೌಜನ್ಯ, ನಮಗೆ ತೋರುವ ಗೌರವಾದರಗಳನ್ನು ನೋಡಿದಾಗ ಇಂತಹ ಆತಿಥ್ಯ ನಮ್ಮ ಕರ್ನಾಟಕದ ಅಧಿಕಾರಿಗಳಲ್ಲಿ ಲಭ್ಯವಿರಲಾರದು ಎಂದೆನಿಸಿತು. ಸಹಜವಾಗಿಯೇ ಕೇಂದ್ರ ಸರಕಾರದ ಘನ ಇಲಾಖೆಯ ಕುರಿತು ಗೌರವ ಮೂಡಿತು.
ತಾ. 5-9-2003 ರಂದು ಶಿಕ್ಷಕ ದಿನಾಚರಣೆಯ ಕಾರ್ಯಕ್ರಮಗಳು ಬೆಳಿಗ್ಗೆ 10.30ಕ್ಕೆ ಭವ್ಯ ವಿಜ್ಞಾನ ಭವನದಲ್ಲಿ ಆಯೋಜಿತವಾಗಿದ್ದವು. ನಾವೆಲ್ಲ ಅಂದು ನರಸಿಂಹಣ್ಣನೊಂದಿಗೆ ಅಲ್ಲಿಗೆ ತಲುಪಿ ಭದ್ರತಾ ತಪಾಸಣೆಗಳನ್ನು ದಾಟಿ ಹವಾನಿಯಂತ್ರಿತ ವಿಶಾಲ ಸಭಾಭವನವನ್ನು ಪ್ರವೇಶಿಸಿದೆವು. ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಸುಮಾರು 300 ಶಿಕ್ಷಕ ಹಾಗೂ ಸಾವಿರಕ್ಕೂ ಮಿಕ್ಕಿ ಅವರ ಸಂಗಡಿಗರಿಂದ ತುಂಬಿತ್ತು ಆ ಸಭಾಭವನ. ದೇಶದ ಮುಂದಿನ ಸಭ್ಯ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳ ತಂಡವೇ ಅಲ್ಲಿ ನೆರೆದಂತಿತ್ತು. ಸಭಾಭವನದ ಆಸನದ ವ್ಯವಸ್ಥೆ, ಸುಮಧುರ ಧ್ವನಿವ್ಯವಸ್ಥೆಗಳೆಲ್ಲ ಅಚ್ಚುಕಟ್ಟಾಗಿದ್ದು ದೇಶದ ರಾಜಧಾನಿಯ ಪ್ರತಿಷ್ಠೆಗೆ ತಕ್ಕಂತಿತ್ತು.
ಶಿಕ್ಷಕರ ಸ್ಥಾನಮಾನ ಹಾಗೂ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು "ಉತ್ತಮ ಶಿಕ್ಷಕರೇ ದೇಶದ ಆಸ್ತಿ" ಎಂದು ಶ್ಲೋಕಗಳನ್ನಾಧರಿಸಿ ಮಾಡಿದ ಭಾಷಣ ಅವರ ಪಾಂಡಿತ್ಯವನ್ನು ಸಾರುತ್ತಿತ್ತು. ನಂತರ ಮಾತನಾಡಿ, "ಶಿಕ್ಷಕರು ಸಾಮಾಜಿಕ ಅಭಿವೃದ್ಧಿಯ ಅವಿಭಾಜ್ಯ ಅಂಗ; ಅವರ ಶ್ರೇಷ್ಠತೆ ಅವರಲ್ಲೇ ಉಳಿಯದೇ ಶಿಕ್ಷಣದ ಮೂಲಕ ದೇಶದೆಲ್ಲೆಡೆ ಪ್ರಸಾರವಾಗಬೇಕು" ಎಂದು ಸಾರಿದ ಆಗಿನ ನಮ್ಮ ಹೆಮ್ಮೆಯ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಎಲ್ಲ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭದ್ರತಾ ಸಿಬ್ಬಂದಿಗಳ ಸೂಚನೆಯ ಹೊರತಾಗಿಯೂ ಎಲ್ಲ ಶಿಕ್ಷಕರಿಗೆ ಹಸ್ತಲಾಘವ ನೀಡಿ, ಆದರದಿಂದ ಮಾತನಾಡಿಸಿದ ಅವರ ಸೌಜನ್ಯ, ಸರಳತೆ ಎಲ್ಲರ ಮನ ಮುಟ್ಟುವಂತಿತ್ತು.
ದೂರದರ್ಶನದ ನಿರೂಪಕಿ ಶ್ರೀಮತಿ ಸರಳಾ ಮಹೇಶ್ವರಿಯವರಿಂದ ಕಾರ್ಯಕ್ರಮ ನಿರೂಪಣೆ ಇಡೀ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತ್ತು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಇದಲ್ಲದೆ ಹಿಂದಿನ ದಿನ ಸಂಜೆ, ಶಿಕ್ಷಕರಿಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಸತ್ಕಾರ ಕೂಟವನ್ನು ಏರ್ಪಡಿಸಲಾಗಿತ್ತು. ಪ್ರಧಾನ ಮಂತ್ರಿಗಳ ಮನೆಯ ಆವರಣದಲ್ಲಿ ನಡೆದ ಈ ಕೂಟದಲ್ಲಿ ಕವಿ ವಾಜಪೇಯಿ ಅವರು ತಮ್ಮ ಕವನವೊಂದನ್ನು ವಾಚಿಸಿ ಎಲ್ಲರ ಮನರಂಜಿಸಿದರು.
ಈ ಶ್ರೇಷ್ಠ ಪ್ರಶಸ್ತಿಯ ಹಿಂದೆ ನರಸಿಂಹಣ್ಣನ ಕಠಿಣ ಪರಿಶ್ರಮ, ಅಪಾರ ಸಾಧನೆ, ಕರ್ತವ್ಯಪರತೆ ಇತ್ತು. ಪ್ರಶಸ್ತಿ ಸತ್ಪಾತ್ರರಿಗೆ ದೊರಕಿದೆ ಎನಿಸಿತು. ಇಂತಹ ಸಾಧಕರನ್ನು ಅಣ್ಣನಾಗಿ ಪಡೆದ ನನಗೆ, ನಮ್ಮೂರಿಗೆ ಇದು ಹೆಮ್ಮೆಯ ವಿಷಯ.
ನಮ್ಮ ಈ ದೆಹಲಿ ಭೇಟಿಯ ಸಂದರ್ಭದಲ್ಲಿ ನಾವು ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಉತ್ತರಾಂಚಲ ರಾಜ್ಯದ ಹೃಷಿಕೇಶ ಮತ್ತು ಹರಿದ್ವಾರಗಳಿಗೆ ಭೇಟಿಯಿತ್ತು, ಗಂಗಾನದಿಯಲ್ಲಿ ಮಿಂದು, ರಾಮಜುಲಾ - ಲಕ್ಷ್ಮಣಜುಲಾ ಹಾಗೂ ಮಾನಸಾದೇವಿ ದೇವಸ್ಥಾನಗಳಿಗೆ ಭೇಟಿಯಿತ್ತೆವು. ನಂತರ, ಆಗ್ರಾ ಮತ್ತು ಮಥುರಾಗಳಿಗೆ ಭೇಟಿಯಿತ್ತು, ಆಗ್ರಾದ ತಾಜಮಹಲ್ ಹಾಗೂ ಮಥುರಾದ ಕೃಷ್ಣಜನ್ಮಸ್ಥಾನವನ್ನು ನೋಡಿದೆವು. ಇವುಗಳಲ್ಲದೆ ದೆಹಲಿಯ ಪ್ರೇಕ್ಷಣೀಯ ಸ್ಥಳಗಳಾದ ಕುತುಬ್ ಮಿನಾರ್, ಬಿರ್ಲಾ ಮಂದಿರ, ಕಮಲ ಮಂದಿರ, ಕೆಂಪುಕೋಟೆ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ಸಂಸತ್ ಭವನ, ತ್ರಿಮೂರ್ತಿ ಭವನ, ರಾಜ್ ಘಾಟ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಕೂಡ ವೀಕ್ಷಿಸಿದೆವು.
ನಮಗೆ ದೆಹಲಿಯಲ್ಲಿ ಉಳಿದುಕೊಳ್ಳಲು, ಮಹರ್ಷಿ ಅರಬಿಂದೋ ಆಶ್ರಮದ ಅತಿಥಿಗೃಹದಲ್ಲಿ, ಅಲ್ಲಿ ಆಗ ಉದ್ಯೋಗದಲ್ಲಿದ್ದ ಉಡುಪಿಯ ಹೆರ್ಗದ ಶ್ರೀ ವಿವೇಕ್ ತಂತ್ರಿ ವ್ಯವಸ್ಥೆ ಮಾಡಿದ್ದರು. ಷಟ್ಕೋನಾಕೃತಿಯ ನವೀನ ಮಾದರಿಯಲ್ಲಿ ನಿರ್ಮಿತವಾದ ಆಶ್ರಮ ಸಕಲ ಸೌಲಭ್ಯಗಳನ್ನೂ ಹೊಂದಿ ಸುಂದರವಾಗಿದೆ. ಆರ್ಥಿಕವಾಗಿ, ಬೌದ್ಧಿಕವಾಗಿ ಹಿಂದುಳಿದು ಅಶಕ್ತರಾದವರಿಗೆ ಆಶ್ರಯ ನೀಡಿ ಅವರಿಗೆ ಹಲವು ವಿಷಯಗಳಲ್ಲಿ ಪರಿಣತಿ ನೀಡಿ, ವೃತ್ತಿಪರರನ್ನಾಗಿ ಮಾಡುವ ಶ್ಲಾಘನೀಯ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ. ಇದಲ್ಲದೆ ಯಾಂತ್ರಿಕ ಜೀವನದ ಜಂಜಾಟದಿಂದ ಬಳಲಿ, ಮನಃಶಾಂತಿಗಾಗಿ ಹಾತೊರೆದು ಬರುವವರಿಗೆ ಆಧ್ಯಾತ್ಮಿಕ ಬೋಧನೆಗಳ ಜೊತೆಗೆ ಯೋಗ ಶಿಕ್ಷಣವೂ ಇಲ್ಲಿ ಲಭ್ಯ. ಇಲ್ಲಿನ ಶಾಂತ ಪರಿಸರ, ಬೇವಿನ ಮರಗಳಿಂದ ಸುತ್ತುವರೆದಿರುವ ಆವರಣ ಅದಕ್ಕೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ವಿನಯವೂ ಪ್ರಶಂಸನೀಯ.
ಹೀಗೆ ನಮ್ಮ ದೆಹಲಿ ಭೇಟಿಯು ನರಸಿಂಹಣ್ಣ ಪ್ರಶಸ್ತಿ ಪಡೆಯುವುದನ್ನು ನೋಡುವ ಭಾಗ್ಯವನ್ನು ಹಾಗೂ ಉತ್ತರ ಭಾರತದ ಪುಣ್ಯಕ್ಷೇತ್ರ ದರ್ಶನ ಭಾಗ್ಯವನ್ನೂ ಒದಗಿಸಿಕೊಟ್ಟಿತ್ತು.
-- ನೆಂಪು ಗಜಾನನ ಭಟ್
Labels:
Abdul Kalam,
Agra,
Delhi,
Mathura,
NaBhaNempu,
Vajapeyi
Monday, February 25, 2008
Nempu Credit Union
ನೆಂಪು ಕ್ರೆಡಿಟ್ ಯೂನಿಯನ್
ಸಂಬಂಧಗಳ ಬೆಸುಗೆ
ನಾವೊಂದಿಷ್ಟು ಜನ ನೆಂಪಿನ ಹುಡುಗರು 2002ರ ಜನವರಿಯಲ್ಲಿ ಹುಟ್ಟುಹಾಕಿದ "ನೆಂಪು ಕ್ರೆಡಿಟ್ ಯೂನಿಯನ್" ಈಗ 6 ಯಶಸ್ವೀ ವರ್ಷಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಆರಂಭದಲ್ಲಿ ನಮ್ಮಲ್ಲೇ ಕೆಲವರಿಗೆ ಬರಿಯ ಮಕ್ಕಳಾಟದಂತೆ ಕಂಡರೂ, ಸಂಸ್ಥೆಯ ಪ್ರಗತಿಯನ್ನು ಕಂಡು ಅವರೂ ಸದಸ್ಯರಾಗಿದ್ದಾರೆ. ಈ ಯಶಸ್ಸಿನ ಹಿಂದೆ ನಮ್ಮ ಕೆಲವು ಸದಸ್ಯರ ಅಪಾರ, ಅವಿರತ ಪರಿಶ್ರಮವಿದೆ.
ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಸಲಹೆ-ಸೂಚನೆ-ಮಾರ್ಗದರ್ಶನ ನೀಡಿ, ಇಂದಿಗೂ ಸಂಸ್ಥೆಯ ಏಳಿಗೆಗೆ ಎಲೆಮರೆಯ ಕಾಯಿಯಂತೆ ದಣಿವಿಲ್ಲದೆ ದುಡಿಯುತ್ತಿರುವ ನೆಂಪು ಕೃಷ್ಣ ಭಟ್ಟರು "ನೆಂಪು ಕ್ರೆಡಿಟ್ ಯೂನಿಯನ್" ಬಗ್ಗೆ ಇಲ್ಲಿ ವಿವರಿಸಿದ್ದಾರೆ.
ಸುಮಾರು ಆರೇಳು ವರ್ಷಗಳ ಹಿಂದೆ ನಮ್ಮ ರಾಘು ನನ್ನ ಹತ್ತಿರ ಒಂದು ವಿಷಯ ಪ್ರಸ್ತಾಪಿಸಿದ. "ನಾವು ನಾಲ್ಕೈದು ಜನ ಅಣ್ಣ-ತಮ್ಮ ಸೇರಿ ಒಂದು ’ಉಳಿತಾಯ ಯೋಜನೆ’ ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದೇವೆ. ನೀನೂ ಸೇರುವುದಾದರೆ ನಿನ್ನನ್ನು ಅದರ "ಚೇರ್ಮನ್" (ನನ್ನ ಬೋಳು ಮಂಡೆಗೆ ಅನ್ವರ್ಥ!?) ಮಾಡುತ್ತೇವೆ" ಎಂದಾಗ, ಅಧ್ಯಕ್ಷ ಪದವಿಯ ಆಸೆಯೂ ಮೊಳಕೆಯೊಡೆದು ಸರಿ ಎಂದೆ. ಸಮಾನಮನಸ್ಕ ಬಂಧುಗಳು-ಗೆಳೆಯರು ಸೇರಿ ಆ ಯೋಜನೆಗೊಂದು ರೂಪುರೇಷೆ ನೀಡಲು ಮುಂದಾದೆವು. ನಮ್ಮ ಮೊದಲ ಷರತ್ತು ಏನೆಂದರೆ ಈ ಯೋಜನೆ ಯಾವುದೇ ಲಾಭದ ದೃಷ್ಟಿ ಹೊಂದಿರಬಾರದು, ಇಲ್ಲಿ ಉಳಿತಾಯ ಹಾಗೂ ಆಪತ್ಕಾಲಕ್ಕೆ ಅನುಕೂಲವಾಗುವಂತಹ ನಿಯಮಾವಳಿಗಳು ಮಾತ್ರ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ.
ಆ ದಿನಗಳಲ್ಲಿ ದಿನಕ್ಕೊಂದು ಸ್ವಸಹಾಯ ಗುಂಪು ಉದಯವಾಗುತ್ತಿದ್ದವು. "ಸ್ವಸಹಾಯ ಗುಂಪು" ಬಹಳ ಚಾಲ್ತಿಯಲ್ಲಿದ್ದ ಹೆಸರು. ನಾವೂ ಕೂಡ ಅದನ್ನೇ ಆಶ್ರಯಿಸಿ "ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" (Bhat Brothers Self Help Group) ಎಂದು ನಮ್ಮ ಯೋಜನೆಗೆ ನಾಮಕರಣ ಮಾಡಿದೆವು. ಯಾವುದೇ ಲಾಭದ ದೃಷ್ಟಿಕೋನ ಇಲ್ಲದಿದ್ದರೂ ಮೊದಲ ವರ್ಷವೇ ನಮ್ಮ ಯೋಜನೆಗೆ 16 ಮಂದಿ ನಾಮುಂದು ತಾಮುಂದು ಎಂದು ಸದಸ್ಯರಾದರು! (ಇಷ್ಟೊಂದು ಜನರನ್ನು ನಾವು ಖಂಡಿತಾ ನಿರೀಕ್ಷಿಸಿರಲಿಲ್ಲ).
ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ವಿನಿಯೋಗಿಸುವುದು, ಪ್ರತೀ ತಿಂಗಳು ಹಣ ಸಂಗ್ರಹಣೆ ಇತ್ಯಾದಿ ಕೆಲಸಗಳಿಗಾಗಿ ಒಂದು ಕಾರ್ಯಕಾರೀ ಸಮಿತಿಯನ್ನು ಕೂಡ ಮಾಡಿಕೊಂಡೆವು. ಸಂದರ್ಭ ಸಿಕ್ಕಾಗಲೆಲ್ಲ ಈ ಕಾರ್ಯಕಾರೀ ಸಮಿತಿಯವರು ಒಟ್ಟುಕುಳಿತು ಈ ಯೋಜನೆಯ ಅಭಿವೃದ್ಧಿಗೆ ಏನೇನು ಮಾಡಬಹುದು ಎನ್ನುವ ಕುರಿತು ಚರ್ಚಿಸಲಾರಂಭಿಸಿದರು. ಇದರರ್ಥ, ನಮ್ಮ ಬಂಧುಬಾಂಧವರ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಬಹುದು, ಅವರ ಸಂಕಷ್ಟಗಳಲ್ಲಿ ಹೇಗೆ ಭಾಗಿಯಾಗಬಹುದು ಎಂಬೆಲ್ಲ ವಿಷಯಗಳು ನಿಧಾನವಾಗಿ ಪ್ರಸ್ತಾವನೆಗೆ ಬಂತು.
"ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" ಹೆಸರು ಸೀಮಿತ ಅರ್ಥವನ್ನು ನೀಡಬಹುದೆಂದು 2004 ರಲ್ಲಿ ನಮ್ಮ ಸಂಸ್ಥೆಗೆ "ನೆಂಪು ಕ್ರೆಡಿಟ್ ಯೂನಿಯನ್" ಎಂದು ಮರುನಾಮಕರಣ ಮಾಡಲಾಯಿತು. ಆರಂಭಿಕ ಎಡರು-ತೊಡರುಗಳನ್ನು ದಾಟಿ, ಪ್ರಗತಿಪಥದಲ್ಲಿ ಆಗಲೇ ದಾಪುಗಾಲು ಹಾಕುತ್ತಿದ್ದ ನೆಂಪು ಕ್ರೆಡಿಟ್ ಯೂನಿಯನ್ ಎಲ್ಲರ ಆಕರ್ಷಣೆಯಾಗಿತ್ತು. ಇಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಗಳೇ ಆಧಾರಸ್ತಂಭವಾಗಿದೆ. ಸದಸ್ಯರು ಕ್ಲಪ್ತಕಾಲದಲ್ಲಿ ತಮ್ಮ ತಿಂಗಳ ಉಳಿತಾಯ ಹಣವನ್ನು ನೀಡಿ ಸಹಕರಿಸುತ್ತಿದ್ದಾರೆ.
ಸದಸ್ಯತನಕ್ಕಾಗಿ ನಾವು ಯಾರನ್ನೂ ವಿನಂತಿಸಿಕೊಳ್ಳಲಿಲ್ಲ, ಸದಸ್ಯತ್ವ ಅಭಿಯಾನವನ್ನೂ ಕೈಗೊಳ್ಳಲಿಲ್ಲ. ಆದರೂ ನಮ್ಮ ಸದಸ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ, ಅಂತೆಯೇ ಠೇವಣಿ ಸಂಗ್ರಹಣೆಯೂ ಏರಿಕೆಯಾಗುತ್ತಿದೆ. ಸ್ವಯಂಪ್ರೇರಿತರಾಗಿ ಬರುತ್ತಿರುವ ನಮ್ಮ ಬಂಧು-ಬಾಂಧವರಿಗೆ ಇಲ್ಲ ಎನ್ನಲಾಗುತ್ತಿಲ್ಲ.
ನಮ್ಮ ಈ ಸಂಸ್ಥೆಯ ಇನ್ನೊಂದು ಯೋಜನೆ ಎಂದರೆ ನಮ್ಮ ಸದಸ್ಯರ ಅಗತ್ಯಗಳನ್ನು ಪೂರೈಸುವುದು. ಯಾವುದೇ ಸದಸ್ಯರಿಗೆ ಹಣದ ಅಡಚಣೆ ಉಂಟಾದರೆ, ಮದುವೆ-ಮುಂಜಿಗಳಿಗೆ, ಮನೆ ಕಟ್ಟಲು, ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಇತರ ಅಗತ್ಯಗಳಿಗೆ ನಮ್ಮ ಉಳಿತಾಯದ ಹಣವನ್ನು ಸಾಲರೂಪದಲ್ಲಿ ನೀಡುವುದು. ಇದಕ್ಕೆ ನಾವು ವಿಧಿಸುವ ಬಡ್ಡಿ ಅತೀ ಕನಿಷ್ಠ ದರದ್ದಾಗಿದೆ. ಈ ಸಾಲಕ್ಕೆ ವಸ್ತುರೂಪದ "ಆಧಾರ" (security) ಗಳು ಏನೂ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನಂಬಿಕೆ, ವಿಶ್ವಾಸ ಎಂಬೆರಡು "ಆಧಾರ"ಗಳಷ್ಟೆ ಬೇಕು. ಹಾಗಾಗಿ ಇವತ್ತಿಗೂ ನಮ್ಮ ಸಾಲಮರುಪಾವತಿ ಯಾವುದೇ ವಿತ್ತ ಸಂಸ್ಥೆಗಿಂತ ಚೆನ್ನಾಗಿ ನಡೆಯುತ್ತಿದೆ. ರಾತ್ರಿ ದೂರವಾಣಿ ಮೂಲಕ ಹಣಕ್ಕೆ ಬೇಡಿಕೆಯಿಟ್ಟರೆ ಮರುದಿನ ಬೆಳಿಗ್ಗೆ ಆ ಸದಸ್ಯರ ಕೈಯಲ್ಲಿ ಹಣ ಇರಿಸುವಂತಹ ವ್ಯವಸ್ಥೆ ನಮ್ಮದಾಗಿದೆ. ಇಂತಹ ವ್ಯವಸ್ಥೆ ಇರುವಾಗ ಯಾರಿಗೆ ತಾನೇ ನಮ್ಮ ಸಂಸ್ಥೆ ಬಗ್ಗೆ ವಿಶ್ವಾಸ ಬಾರದು ಹೇಳಿ?
"ನೆಂಪು ಕ್ರೆಡಿಟ್ ಯೂನಿಯನ್" ಎಂದರೆ ಹಣಕಾಸಿನ ವ್ಯವಹಾರದ ಒಂದು ಸಂಸ್ಥೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಹಣಕಾಸಿನ ವ್ಯವಹಾರ ಒಂದು ನೆಪವಷ್ಟೆ. ಇದು ನಮ್ಮ ಬಂಧು-ಬಾಂಧವರನ್ನು ಬೆಸೆಯುವ ಕೊಂಡಿ. ಹೂವಿನ ಮೊಗ್ಗುಗಳು ಹೇಗೆ ದಾರಕ್ಕೆ ಪೋಣಿಸಿಕೊಂಡಿರುತ್ತವೆಯೋ ಅಂತೆಯೇ ನೆಂಪು ಕ್ರೆಡಿಟ್ ಯೂನಿಯನ್ ಎಂಬ ’ದಾರ’ಕ್ಕೆ ನಮ್ಮೆಲ್ಲ ಸದಸ್ಯರು ಹೂವಿನೋಪರಿಯಾಗಿ ಬೆಸೆದುಕೊಂಡಿದ್ದಾರೆ. ಹಾಗಾದಾಗಲೇ ಹೂವಿನ ಮಾಲೆ ಪರಿಮಳ ಸೂಸಿ, ಸುಂದರವಾಗಿ ಕಾಣಿಸಿಕೊಳ್ಳುವುದು ಅಲ್ಲವೆ? ಅಂತೆಯೇ ನಮ್ಮೆಲ್ಲರ ಸಂಬಂಧಗಳು ಮಧುರವಾಗಿ ಹೆಣೆದುಕೊಂಡು ಕಂಗೊಳಿಸುತ್ತಿದೆ.
ಈ ಹಿಂದೆ, ವರ್ಷಕ್ಕೊಂದೆರಡು ಸಾರಿ ಮದುವೆ-ಮುಂಜಿಗಳಾದಲ್ಲಿ ಮಾತ್ರ ಒಟ್ಟು ಸೇರುತ್ತಿದ್ದ ನಮ್ಮ ಬಂಧುಗಳು, ಇಂದು ಕ್ರೆಡಿಟ್ ಯೂನಿಯನ್ ಮೀಟಿಂಗ್ ಎಂಬ ನೆಪದಲ್ಲಿ ತಿಂಗಳಿಗೊಮ್ಮೆ ಒಟ್ಟು ಸೇರುತ್ತಾರೆ. ಪರಸ್ಪರರ ಕುರಿತು ಹೆಚ್ಚು ಆಳವಾಗಿ ತಿಳಿದುಕೊಳ್ಳುವ ಅವಕಾಶ ಲಭಿಸುತ್ತಿದೆ. ಹೀಗೆ ಹೆಚ್ಚು ತಿಳಿದಂತೆ ಆತ್ಮೀಯತೆ, ಸಂಬಂಧಗಳೂ ಗಾಢವಾಗುತ್ತವೆ, ಹಾಗೂ ಗಟ್ಟಿಯಾಗುತ್ತವೆ. ಅದಕ್ಕೇ ಹೇಳುತ್ತಿದ್ದೇನೆ "ನೆಂಪು ಕ್ರೆಡಿಟ್ ಯೂನಿಯನ್" ಅರ್ಥಾತ್ "ಸಂಬಂಧಗಳ ಬೆಸುಗೆ" ಅಂತ... ನಮ್ಮ ಯಾವುದೇ ಬಂಧುಗಳ ಮನೆಯಲ್ಲಿ ಶುಭ ಅಥವಾ ಅಶುಭ ಘಟನೆಗಳು ನಡೆದಲ್ಲಿ ನಾವೆಲ್ಲ ಸ್ವಯಂಪ್ರೇರಿತರಾಗಿ ನಮ್ಮೆಲ್ಲ "ತಾಪತ್ರಯ"ಗಳನ್ನು ಅಲ್ಲೇ ಬಿಟ್ಟು ಧಾವಿಸುವಷ್ಟು ನಮ್ಮ ಸಂಬಂಧಗಳು ಬೆಸೆದುಕೊಂಡಿವೆ. ಇದೇ ಅಲ್ಲವೇ "ಸಂಘ ಜೀವನ"!
ಆರು ವರ್ಷಗಳ ಹಿಂದೆ ನಮ್ಮ ಪೂಜ್ಯರಾದ, ಸಂಸ್ಕೃತ-ಕನ್ನಡ ಪಂಡಿತರೂ ಆದ ನೆಂಪು ಶಿವರಾಮ ಭಟ್ಟರ ದಿವ್ಯಹಸ್ತದಿಂದ ಚಾಲನೆಗೊಂಡ "ನೆಂಪು ಕ್ರೆಡಿಟ್ ಯೂನಿಯನ್" ಯಾವುದೇ ಅಡೆತಡೆ ಇಲ್ಲದೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ. ಅಂದು "ಸಂಹತಿಃ ಕಾರ್ಯಸಾಧಿಕಾ" ಎಂಬ ಧ್ಯೇಯವಾಕ್ಯವನ್ನು ನೀಡಿ, ಮನಸಾರೆ ನಮ್ಮನ್ನು ಹರಸಿದ ಪೂಜ್ಯರು ಈಗಿಲ್ಲವಾದರೂ ಅವರ ಕಾಣದ ಕೈ ನಮ್ಮೆಲ್ಲರನ್ನು ಮುನ್ನಡೆಸುತ್ತಿದೆ.
ವಿಸ್ತಾರವಾಗಿ ಬೆಳೆದಿರುವ ನಮ್ಮ ಸಂಸ್ಥೆ ಹಲವರಿಗೆ ನೆರಳು ನೀಡಿದೆ. ಇಂತಹ ಸಂಸ್ಥೆಯನ್ನು ಮುನ್ನಡೆಸುವಲ್ಲಿ ನಮ್ಮ ಸದಸ್ಯರ ಸಹಕಾರ ಮರೆಯುವಂತಿಲ್ಲ. ಎಲೆಮರೆಯ ಕಾಯಿಗಳಂತೆ ಕೆಲವು ಸದಸ್ಯರು ಈ ಸಂಸ್ಥೆ ಹಳಿಬಿಟ್ಟು ಕದಲದಂತೆ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆ ಯಾವುದೇ ಕಚೇರಿ ಹೊಂದಿಲ್ಲ, ಕೆಲಸ ಕಾರ್ಯಗಳಿಗಾಗಿ ಯಾರನ್ನೂ ನೇಮಿಸಿಕೊಂಡಿಲ್ಲ. ಬದಲಿಗೆ ತಮ್ಮ ವೃತ್ತಿ ಜೀವನದ ಒತ್ತಡಗಳ ಮಧ್ಯೆಯೇ ಅಷ್ಟೇ ಪ್ರಾಮುಖ್ಯತೆ ನೀಡಿ ನಮ್ಮ ಸಂಸ್ಥೆಗಾಗಿಯೂ ದುಡಿಯುವ ಛಲ ಹೊಂದಿದ್ದಾರೆ ನಮ್ಮ ಕೆಲ ಸದಸ್ಯರು. ಇವರಿಗೆ ಪ್ರತಿಫಲ ಏನೂ ನೀಡುವುದಿಲ್ಲ, "ಇದು ನಮ್ಮ ಸಂಸ್ಥೆ" ಎಂಬ ಹೆಗ್ಗಳಿಕೆಯಿಂದ ದುಡಿಯುತ್ತಾರೆ!
ವರ್ಷಕ್ಕೆ ಸುಮಾರು ಹತ್ತು ಲಕ್ಷದಷ್ಟು ವ್ಯವಹಾರ ನಡೆಸುವ ನಮ್ಮ ಸಂಸ್ಥೆಯ ವಾರ್ಷಿಕ ಖರ್ಚು ಹೆಚ್ಚೆಂದರೆ ರೂ. 400/- (ನಂಬಿದರೆ ನಂಬಿ, ಬಿಟ್ಟರೆ ಬಿಡಿ!). ಖಂಡಿತಾ ಇದಕ್ಕಿಂತ ಸ್ವಲ್ಪವಾದರೂ ಹೆಚ್ಚಿಗೆ ಖರ್ಚಾಗಿರುತ್ತದೆ. ಆದರೆ ಅದನ್ನೆಲ್ಲ ನಮ್ಮ ಸದಸ್ಯರೇ ಸ್ವಯಂ ಪ್ರೇರಿತರಾಗಿ ಭರಿಸುತ್ತಿದ್ದಾರೆ (ಇಂತಹ ವ್ಯವಸ್ಥೆ ಎಲ್ಲಾದರೂ ಉಂಟೆ?). ನಮ್ಮ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರವನ್ನು ಕೂಡ "ಆಡಿಟ್" (audit) ಮಾಡಿಯೇ ಪ್ರಕಟಿಸುತ್ತಿದ್ದೇವೆ. ನಮ್ಮ ಹಣಕಾಸು ವ್ಯವಹಾರ ಪಾರದರ್ಶಕವಾಗಿರಬೇಕೆಂಬುದು ನಮ್ಮ ಉದ್ದೇಶ.
ಇಂದು ನಮ್ಮ ಸಂಸ್ಥೆ 62 ಸದಸ್ಯಬಲವನ್ನು ಹೊಂದಿದ್ದು, ವಾರ್ಷಿಕ ರೂ. 10 ಲಕ್ಷ ವಹಿವಾಟು ನಡೆಸುವ ಅಂದಾಜಿದೆ. ಕ್ರಮೇಣ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಯೋಚಿಸುತ್ತಿದ್ದೇವೆ. ಕಳೆದ ವರ್ಷ ನೆಂಪಿನ ಶ್ರೀ ಗಣಪತಿ ದೇವಳದ ಮಾರ್ಗದಲ್ಲಿ ಎರಡು ಮಾರ್ಗಸೂಚಿ ಫಲಕಗಳನ್ನು ಕೊಡುಗೆಯಾಗಿ ನೀಡಿದೆ ಈ ಸಂಸ್ಥೆ. ಕೆಲವು ಸದಸ್ಯರು ಸೇರಿ ಪ್ರತಿವರ್ಷ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಪ್ರೋತ್ಸಾಹ ನೀಡುತ್ತಿದ್ದೇವೆ.
ಹೀಗೆ ನಮ್ಮ ಸದಸ್ಯರೇನಕರು ಉತ್ತಮ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಉತ್ತಮ ಹಿನ್ನೆಲೆ, ಚಾರಿತ್ರ್ಯ ಹೊಂದಿದ ಸದಸ್ಯರಿರುವುದರಿಂದಲೇ "ನೆಂಪು ಕ್ರೆಡಿಟ್ ಯೂನಿಯನ್" ಭರದಿಂದ ಯಶಸ್ಸು ಕಾಣುತ್ತಿದೆ. ಮುಂದೊಮ್ಮೆ ಬಹುದೊಡ್ಡ ಸಾಧನೆ ಮಾಡಲಿರುವ ಈ ಸಂಸ್ಥೆ ಶತಮಾನಗಳ ಕಾಲ ನಡೆಯಲಿ ಎಂಬುದೇ ನನ್ನ ಆಶಯ.
-- ನೆಂಪು ಕೃಷ್ಣ ಭಟ್
Labels:
NCU,
Nempu Credit Union
Subscribe to:
Posts (Atom)













