ಮರೆತೇನಂದ್ರ ಮರೆಯಲಿ ಹ್ಯಾಂಗಾ...?
- ವಂಡ್ಸೆ ಶಾಲೆಗೆ ಹೋಗುವಾಗ ಒಂದು ದಾರಿಗೆ ನಾವೇ ಇಟ್ಟ ಹೆಸರು "ಮಾಕಿಶಾಮೂರ" ದಾರಿ! ಗದ್ದೆ ಮಧ್ಯೆ ನಾವೇ ನಡೆದು ಮಾಡಿಕೊಂಡ ದಾರಿ ಅದು. ಅಂದು ವಂಡ್ಸೆ ಶಾಲೆಗೆ ಹೋಗುತ್ತಿದ್ದ ಮಾಧವಿ, ಕಿಟ್ಟು, ಶಾರದ, ಮೂರ್ತಿ, ರಮೇಶ ಎಲ್ಲರ ಹೆಸರಿನ ಒಂದೊಂದು ಅಕ್ಷರ ಸೇರಿಸಿ ಮಾಡಿದ ಹೆಸರು! ಅಷ್ಟು ಚಿಕ್ಕ ವಯಸ್ಸಿಗೇ ಎಂತಾ ಕ್ರಿಯೆಟಿವ್ ಐಡಿಯಾ ಅಲ್ದಾ!
- ಕಾಲೇಜು ದಿನಗಳಲ್ಲಿ ಪರೀಕ್ಷೆಗೆ ಓದಲು ನಾನು ಆರಿಸಿಕೊಂಡ ಜಾಗ ನಮ್ಮ ಪ್ರಶಾಂತಪರಿಸರದಲ್ಲಿರುವ ಗಣಪತಿ ದೇವಸ್ಥಾನ ಹಾಗೂ ಅಲ್ಲೇ ಹಿಂದಿನ ’ಹಾಡಿ’. ಅಲ್ಲಿ ಸಿಗುವ ಏಕಾಗ್ರತೆ, ಮನಸ್ಸಿಗೆ ಸಿಗುವ ಮುದ ಬೇರೆಲ್ಲೂ ಸಿಗುತ್ತಿರಲಿಲ್ಲ.
- ಮನೆ ಎದುರಿನ ಗದ್ದೆಗೆ ತುಂಟಾಟದಿಂದ ನಾನು ಮೂರ್ತಿ ಬೆಂಕಿ ತಾಗಿಸಿದ್ದು, ಅದು ಗದ್ದೆಯಲ್ಲಿದ್ದ ’ದರಲೆ’ ರಾಶಿಗೆ ಹಿಡಿದು ಇಡೀ ಗದ್ದೆ ವ್ಯಾಪಿಸಿದಾಗ "ನಾವಲ್ಲ, ಅದು ಶೇಕು ಗಂಡಿನ ಕಿತಾಪತಿ" ಅಂತ ಜಾರಿದ್ದು... ಸುಳ್ಳಲ್ಲ...!
- ೧ ರಿಂದ ೪ನೇ ತರಗತಿ ವರೆಗೆ ನನಗೆ ಹಾಗೂ murthyಗೆ ಬರೆಯಲು ಒಂದೇ ಸ್ಲೇಟು! ಒಂದು ಕಡೆ ಅವ ಬರೆದರೆ, ಇನ್ನೊಂದು ಕಡೆ ನಾನು ಬರೆಯುವುದು. ಇಂತಹ ಹೊಂದಾಣಿಕೆ ಇಂದು ಎಲ್ಲಾದರು ಕಾಣಲು ಸಾಧ್ಯವೇ?
- ನಾನು, ಮೂರ್ತಿ, ರಮೇಶ ಒಟ್ಟಿಗೆ ಜಗಲಿಯಲ್ಲಿ ಹಾಸಿಕೊಂಡು, ಮಧ್ಯೆ ಚಿಮಣಿ ದೀಪ ಇಟ್ಟುಕೊಂಡು ಪರೀಕ್ಷೆಗೆ ಓದ್ತಾ ಇದ್ದೆವು. ಅಲ್ಲೇ "ಆಫೀಸ್ ಕೋಣೆ"ಯಲ್ಲಿ ಮಲಗಿದ್ದ ಕಿಟ್ಟಣ್ಣಯ್ಯ-ಅತ್ತಿಗೆಯ "ರಾತ್ರಿ ಶಬ್ದ"ಕ್ಕೆ ಕಿವಿ ಆಲಿಸಿದ್ದು, ನಂತರ ಕಿಟ್ಟಣ್ಣಯ್ಯ "ಏನು ಮಕ್ಳೇ" ಅಂತ ಗದರಿಸಿದ್ದು!!!........ ಮರೀಲಾರದ್ದು!
--ಕಿಟ್ಟು



